ಪಠಾಣ್ ಕೋಟ್ದಾಳಿ : ಉಗ್ರರ ಕಣ್ಣು ಮಿಗ್ 21 ವಿಮಾನದ ಮೇಲಿತ್ತು
ಬೆಂಗಳೂರು, ಫೆಬ್ರವರಿ 04 : ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ಉಗ್ರರು, ವಾಯುನೆಲೆಗೆ ಅಪಾರವಾದ ಹಾನಿ ಮಾಡುವ ಸಂಚನ್ನು ರೂಪಿಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯುನೆಲೆಯಲ್ಲಿ ಕೆಲಸ ಮಾಡುವ ಕೆಲವು ಅಧಿಕಾರಿಗಳನ್ನು ವಿಚಾರಣೆ ನಡೆಸಲು ಎನ್ಐಎ ನಿರ್ಧರಿಸಿದೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಯ ತನಿಖೆಯನ್ನು ನಡೆಸುತ್ತಿದೆ. ವಾಯುನೆಲೆಯ ನಿಯಂತ್ರಣ ಕೊಠಡಿ ಸೇರಿದಂತೆ ಹಲವು ಭಾಗಗಳನ್ನು ಧ್ವಂಸಗೊಳಿಸುವ ಉದ್ದೇಶದಿಂದ ಉಗ್ರರು ವಾಯುನೆಲೆ ಪ್ರವೇಶಿಸಿದ್ದರು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

ವಾಯುನೆಲೆಯ ಯಾವ ಪ್ರದೇಶದಲ್ಲಿ ಏನಿದೆ? ಎಂಬುದು ಉಗ್ರರಿಗೆ ಚೆನ್ನಾಗಿ ತಿಳಿದಿತ್ತು. ನಿಯಂತ್ರಣ ಕೊಠಡಿಗೆ ನುಗ್ಗುಲು ಉಗ್ರರು ಸಂಚು ರೂಪಿಸಿದ್ದರು. ಆದರೆ, ಯೋಧರು ಅವರ ಪ್ರಯತ್ನವನ್ನು ವಿಫಲಗೊಳಿಸಿದರು ಎಂದು ಎನ್ಐಎ ತನಿಖೆ ವೇಳೆ ಮಾಹಿತಿ ಸಂಗ್ರಹಿಸಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]
ಪಠಾಣ್ ಕೋಟ್ ವಾಯುನೆಲೆಯಲ್ಲಿರುವ ಎಂಐಜಿ 21 ವಿಮಾನ, ನಿಯಂತರಣ ಕೊಠಡಿ, ಉಗ್ರಾಣಕ್ಕೆ ಹಾನಿ ಮಾಡಲು ಉಗ್ರರು ಸಂಚು ರೂಪಿಸಿದ್ದರು. ವಾಯುನೆಲೆಯ ನಿಯಂತ್ರಣ ಕೊಠಡಿ ಎಲ್ಲಿದೆ?, ವಿಮಾನಗಳು ಎಲ್ಲಿವೆ? ಮುಂತಾದ ವಿವರಗಳು ಉಗ್ರರಿಗೆ ಮೊದಲೇ ತಿಳಿದಿತ್ತು ಎಂದು ಎನ್ಐಎ ಹೇಳಿದೆ. [ಪಠಾಣ್ ಕೋಟ್ ದಾಳಿ : ಸಲ್ವಿಂದರ್ ಸಿಂಗ್ ಆರೋಪಿ?]
ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಯುನೆಲೆ ಸುತ್ತಮುತ್ತಲಿನ ಅನೇಕ ಜನರನ್ನು ಮತ್ತು ವಾಯುನೆಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ದಾಳಿ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಎನ್ಐಎ ಅಧಿಕಾರಿಗಳು ಹೇಳಿದ್ದಾರೆ.
ಅಂದಹಾಗೆ ಜನವರಿ ಮೊದಲ ವಾರದಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಶಂಕಿತ ಐಎಸ್ಐ ಏಜೆಂಟ್ನೊಬ್ಬನನ್ನು ಪೊಲೀಸರು ಬಂಧಿಸಿದ್ದರು. ಬಂಧಿತ ಇರ್ಷಾದ್ ಅಹಮದ್ ಎಂಬ ಯುವಕ ಆರ್ಮಿ ಕ್ಯಾಂಟೀನ್ನಲ್ಲಿ ಕೆಲಸ ಮಾಡುತ್ತಿದ್ದ.
ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿರುವ ಪಠಾಣ್ ಕೋಟ್ ವಾಯುನೆಲೆ ದೇಶದ ಮಹತ್ವದ ಸೇನಾ ನೆಲೆಯಾಗಿದೆ. ಭಾರತೀಯ ವಾಯುಪಡೆಯ ಅತ್ಯುನ್ನತ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು ಈ ವಾಯುನೆಲೆಯಲ್ಲಿವೆ.












Click it and Unblock the Notifications