ಮಧ್ಯಪ್ರದೇಶ : ಹಾಜರಾತಿಗೆ ಎಸ್ ಸರ್, ಎಸ್ ಮೇಡಂ ಬದಲಿಗೆ "ಜೈ ಹಿಂದ್' ಎನ್ನಿ
ಮಧ್ಯಪ್ರದೇಶ, ನವೆಂಬರ್ 28 : ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ತುಂಬುವ ಪ್ರಯತ್ನ ಬಿಜೆಪಿ ಆಡಳಿತ ರಾಜ್ಯದಲ್ಲಿ ಬಹಳವೇ ಆಗುತ್ತಿವೆ. ರಾಜಸ್ಥಾನ ಸರ್ಕಾರವು ಶಾಲೆ ಮತ್ತು ವಸತಿಶಾಲೆಗಳಲ್ಲಿ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಮಾಡಿದ್ದರೆ ಇತ್ತ ಮಧ್ಯಪ್ರದೇಶದಲ್ಲಿ ಹಾಜರಾತಿ ಸಮಯದಲ್ಲಿ ಮಕ್ಕಳು ಎಸ್ ಸರ್, ಎಸ್ ಮೇಡಂ ಬದಲಿಗೆ 'ಜೈ ಹಿಂದ್' ಎನ್ನುವಂತೆ ಆದೇಶ ಹೊರಡಿಸಲಾಗಿದೆ.
ಮಧ್ಯಪ್ರದೇಶ ಸರ್ಕಾರದ ಶಿಕ್ಷಣ ಸಚಿವ ವಿಜಯ್ ಷಾ ಅವರು ಹೀಗೊಂದು ಆದೇಶ ನೀಡಿದ್ದಾರೆ. ಇದರಿಂದ ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಯುತ್ತದೆ ಎಂದಿದ್ದಾರೆ ಅವರು.
ಆದೇಶದ ಸುತ್ತೋಲೆಯು ರಾಜ್ಯದ 1.22 ಲಕ್ಷ ಶಾಲೆಗಳನ್ನು ಅತಿ ಶೀಘ್ರವಾಗಿ ತಲುಪಲಿದೆ, ಆದೇಶವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳೂ ಪಾಲನೆ ಮಾಡಬೇಕು ಎಂದಿದ್ದಾರೆ ವಿಜಯ್ ಷಾ.

ಮಕ್ಕಳಲ್ಲಿ ಎಳವೆಯಲ್ಲೇ ರಾಷ್ಟ್ರೀಯತೆ ತುಂಬಲು ಇದು ಸಹಾಯ , ಮಾಡುತ್ತದೆ, ಈ ಆದೇಶಕ್ಕೆ ಯಾರದ್ದೂ ವಿರೋಧ ಇರುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಾಯೋಗಿಕವಾಗಿ ಮದ್ಯಪ್ರದೇಶದ ಸತ್ನಾ ಜಿಲ್ಲೆಯ ಶಾಲೆಯ ಮಕ್ಕಳು ಹಾಜರಾತಿ ಸಮಯದಲ್ಲಿ ಜೈಹಿಂದ್ ಎನ್ನುವಂತೆ ಸೆಪ್ಟೆಂಬರ್ ನಲ್ಲಿಯೇ ಆದೇಶ ಹೊರಡಿಸಲಾಗಿತ್ತು, ಈಗ ರಾಜ್ಯಾದ್ಯಂತ ಆದೇಶ ಜಾರಿಗೆ ಬರುವಂತೆ ಸೂಚಿಸಿದ್ದಾರೆ.
ಶಾಲೆಗಳ ಪಠ್ಯದಲ್ಲಿ ರಾಷ್ಟ್ರೀಯತೆಯ ಘೋಷಣೆಗಳು ಇರುವಂತೆ ಪಠ್ಯ ರೂಪಿಸುವುದಾಗಿ ಹೇಳಿಕೆ ನೀಡಿರುವ ಶಿಕ್ಷಣ ಸಚಿವರು ಆ ಸಂಬಂಧ ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡುವುದಾಗಿ ಹೇಳಿದ್ದಾರೆ.
ಸರ್ಕಾರಿ ಆದೇಶದಂತೆ ಮಧ್ಯಪ್ರದೇಶದ ಶಾಲೆಗಳಲ್ಲಿ ಈಗಾಗಲೇ ಪ್ರತಿದಿನ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ.












Click it and Unblock the Notifications