ಆಂಧ್ರಕ್ಕೆ ಅಪ್ಪಳಿಸಲಿದೆಯೇ ಮತ್ತೊಂದು ಚಂಡಮಾರುತ?
ಹೈದ್ರಾಬಾದ್, ನ.6 : ಹುಡ್ ಹುಡ್ ಚಂಡಮಾರುತದ ಪ್ರತಾಪಕ್ಕೆ ಸಿಕ್ಕಿ ತತ್ತರಿಸಿಹೋಗಿದ್ದ ವಿಶಾಖಪಟ್ಟಣ ಮತ್ತೊಂದು ಅಪಾಯವನ್ನು ಎದುರಿಸಲು ಸಿದ್ಧವಾಗಬೇಕಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಮತ್ತೊಂದು ಚಂಡಮಾರುತ ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆಯಿದೆ.
ಈ ಬಗ್ಗೆ ವರದಿ ನೀಡಿರುವ ಹವಾಮಾನ ಇಲಾಖೆ, ವಿಶಾಖಪಟ್ಟಣದಿಂದ ಸುಮಾರು 700 ಕಿಮೀ ದೂರದಲ್ಲಿ ಮಾನ್ಸುನ್ ಖಿನ್ನತೆಗೆ ಒಳಗಾಗಿದ್ದು ಶಕ್ತಿ ಕಳೆದುಕೊಂಡಿದೆ. ಇದರ ಪರಿಣಾಮ ವಾತಾವರಣದಲ್ಲಿ ವ್ಯತಿರಿಕ್ತ ಬದಲಾವಣೆಗಳು ಉಂಟಾಗುತ್ತಿವೆ ಎಂದು ಹೇಳಿದೆ.[ಚಂಡಮಾರುತಗಳ ಚೆಂದದ ಹೆಸರಿನ ರಹಸ್ಯ]
ಈ ಬಗ್ಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದ್ದು ಆಂಧ್ರ ಪ್ರದೇಶ ಸರ್ಕಾರ ಕೆಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಅಧಿಕಾರಿಗಳ ಸಭೆ ನಡೆಸಿರುವ ವಿಶಾಖಪಟ್ಟಣ ಜಿಲ್ಲಾಧಿಕಾರಿ ಎನ್. ಯುವರಾಜ್, ಕಂದಾಯ ಇಲಾಖೆ, ವೈದ್ಯಕೀಯ ಇಲಾಖೆಗೆ ಅಪಾಯ ಎದುರಿಸಲು ಸೂಚನೆ ನೀಡಿದ್ದಾರೆ. ಅಲ್ಲದೇ ಮೂಲ ಸೌಕರ್ಯಗಳ ಕೊರತೆಯಾಗಬಾರದು ಎಂದು ಸಂಬಂಧಿಸಿದವರಿಗೆ ತಿಳಿಸಿದ್ದಾರೆ.[ಹುಡ್ ಹುಡ್ ಹೊಡೆತಕ್ಕೆ ಬಾಗಿಲು ಹಾಕಿದ ವೈಜಾಗ್ ಸ್ಟೀಲ್]
ಕಳದೆ ತಿಂಗಳು ಆಂಧ್ರ ಮತ್ತು ಒರಿಸ್ಸಾ ಕರಾವಳಿಗೆ ಅಪ್ಪಳಿಸಿದ್ದ ಹುಡ್ ಹುಡ್ ಚಂಡಮಾರುತ ಸಾವಿರಾರು ಕೋಟಿ ರೂ. ನಷ್ಟ ಮಾಡಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಹಾರ ಘೋಷಿಸಿದ್ದರು.