ಆಂಧ್ರಪ್ರದೇಶ: ವಿಶಾಖಪಟ್ಟಣಂ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ, ಸ್ವಾಮೀಜಿ ಬಂಧನ
ಹೈದರಾಬಾದ್, ಜೂನ್. 20: ಆಂಧ್ರ ಪ್ರದೇಶದ ವಿಶಾಖಪಟ್ಟಣಂನ ವೆಂಕೋಜಿಪಾಲೆಂನಲ್ಲಿ ಜ್ಞಾನಾನಂದ ರಮಾನಂದ ಆಶ್ರಮ ನಡೆಸುತ್ತಿರುವ ಸ್ವಾಮಿ ಪೂರ್ಣಾನಂದ ಸರಸ್ವತಿ ಅವರನ್ನು ಸೋಮವಾರ ತಡರಾತ್ರಿ ತಮ್ಮ ಆಶ್ರಮದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಆತನ ವಿರುದ್ಧ ದಿಶಾ ಪೊಲೀಸರು 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ. ರಾಜಮಹೇಂದ್ರವರಂ ಬಳಿಯ ಗಂಡೇಪಲ್ಲಿ ಗ್ರಾಮದವರು ಸುಮಾರು 15 ವರ್ಷ ವಯಸ್ಸಿನ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸಿ ವಿವೇಕಾನಂದ ತಿಳಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ತಂದೆ - ತಾಯಿಯನ್ನು ಕಳೆದುಕೊಂಡ ಬಾಲಕಿ 12ನೇ ವಯಸ್ಸಿನಲ್ಲಿ ಆಶ್ರಮಕ್ಕೆ ಸೇರಿದ್ದರು. ಕಳೆದ ಎರಡು ವರ್ಷಗಳಿಂದ ಸ್ವಾಮೀಜಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾರೆ. ಕಿರುಕುಳವನ್ನು ಸಹಿಸಲಾಗದೆ, ಸಂತ್ರಸ್ತೆ ಜೂನ್ 13, 2023 ರಂದು ಆಶ್ರಮದಿಂದ ತಪ್ಪಿಸಿಕೊಂಡಿದ್ದರು. ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿಕೊಂಡು ಜೂನ್ 15 ರಂದು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಬಳಿಕ ಬಾಲಕಿ ವಿಜಯವಾಡದ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಮುಂದೆ ನಿಂತಿದ್ದರು.
ಸಿಡಬ್ಲ್ಯೂಸಿಯಲ್ಲಿ, ಸಂತ್ರಸ್ತ ಬಾಲಕಿ ತಾನು ಅನುಭವಿಸಿದ ಭಯಾನಕ ಕಥೆಯನ್ನು ಮತ್ತು ಆಶ್ರಮದಲ್ಲಿ ತಾನು ಎದುರಿಸಿದ ಕಿರುಕುಳವನ್ನು ವಿವರಿಸಿದ್ದಾರೆ. ಸಿಡಬ್ಲ್ಯುಸಿ ಅಧಿಕಾರಿಗಳ ಸಲಹೆಯಂತೆ ಅವರು ಸ್ವಾಮೀಜಿ ವಿರುದ್ಧ ದೂರು ದಾಖಲಿಸಿದ್ದಾರೆ. ನಂತರ ಪೊಲೀಸರು ಶೂನ್ಯ ಎಫ್ಐಆರ್ ದಾಖಲಿಸಿಕೊಂಡು ಆಶ್ರಮದಲ್ಲಿ ತಪಾಸಣೆ ನಡೆಸುವ ಮುನ್ನ ಸ್ವಾಮೀಜಿಯನ್ನು ಬಂಧಿಸಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ.
ನಂತರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇತ್ತ, ಸ್ವಾಮಿ ಪೂರ್ಣಾನಂದ ಸರಸ್ವತಿ ತಮ್ಮ ವಿರುದ್ಧ ಯುವತಿ ಮಾಡಿದ ಆರೋಪಗಳನ್ನು ತಳ್ಳಿಹಾಕಿದ್ದಾರೆ. "ಆಶ್ರಮದ ಒಡೆತನದ ಭೂಮಿಯನ್ನು ಕಬಳಿಸಲು ಇದು ನನ್ನ ವಿರುದ್ಧದ ಪಿತೂರಿಯಾಗಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸುತ್ತೇನೆ" ಎಂದು ಸ್ವಾಮೀಜಿ ಹೇಳಿದ್ದಾರೆ.
ಒಂದು ಕಾಲದಲ್ಲಿ ಆಶ್ರಮದಲ್ಲಿ ಸುಮಾರು 1,500 ಮಕ್ಕಳಿದ್ದರು .ಆದರೆ ಈಗ ಕೇವಲ 12 ಮಕ್ಕಳಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಅವರು ಆಧ್ಯಾತ್ಮಿಕ ಸೇವೆ ಮಾಡುತ್ತಿದ್ದಾಗ ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆಂಧ್ರಪ್ರದೇಶ ಪೊಲೀಸರು ಎನ್ಡಿಟಿವಿಗೆ 2012 ರಲ್ಲಿ ಅದೇ ಸ್ವಾಮೀಜಿ ವಿರುದ್ಧ ಮತ್ತೊಬ್ಬ ಅಪ್ರಾಪ್ತರ ಅತ್ಯಾಚಾರದ ದೂರು ವಿಚಾರಣೆ ಹಂತದಲ್ಲಿದೆ ಎಂದು ಹೇಳಿದದ್ದಾರೆ. ಅತ್ಯಾಚಾರ ಪ್ರಕರಣವು ವಿಚಾರಣೆಯಲ್ಲಿರುವಾಗ ಆಶ್ರಮವು ಮಕ್ಕಳನ್ನು ಹೇಗೆ ಸೇರಿಸಿಕೊಂಡಿದೆ? ಮಕ್ಕಳನ್ನು ಇರಿಸಿಕೊಳ್ಳಲು ಪರವಾನಗಿ ಹೊಂದಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಆರೋಪಿ ಸ್ವಾಮಿ ಪೂರ್ಣಾನಂದ, 64 ವರ್ಷದ ಅವಿವಾಹಿತ ವ್ಯಕ್ತಿ, ಉನ್ನತ ಶಿಕ್ಷಣ ಅರ್ಹತೆ ಹೊಂದಿದ್ದು, ಡಬಲ್ ಸ್ನಾತಕೋತ್ತರ ಪದವಿ, ಬಿ.ಎಡ್. ಮತ್ತು ಕಾನೂನು ಪದವಿಗಳನ್ನು ಪಡೆದಿದ್ದಾರೆ. ಆರೋಪಿ ವಿರುದ್ಧ ಹಲವು ಪ್ರಕರಣಗಳಿವೆ ಮತ್ತು ಭೂ ವಿವಾದದಲ್ಲೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ಎನ್ಡಿಟಿವಿಗೆ ತಿಳಿಸಿದ್ದಾರೆ.












Click it and Unblock the Notifications