Ambani: ಕೇರಳದ ದೇವಾಲಯಗಳು, ಆನೆಗಳ ಕಲ್ಯಾಣಕ್ಕಾಗಿ ₹18 ಕೋಟಿ ದೇಣಿಗೆ ನೀಡಿದ ಅನಂತ್ ಅಂಬಾನಿ
ಮುಂಬೈ: ದೇಶದ ಪ್ರತಿಷ್ಠಿತ ರಿಲಯನ್ಸ್ ಇಂಡಸ್ಟ್ರೀಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ಅವರು ಕೇರಳದ ಎರಡು ಪ್ರಮುಖ ಧಾರ್ಮಿಕ ತಾಣಗಳಾದ ರಾಜರಾಜೇಶ್ವರಂ ದೇವಾಲಯ ಮತ್ತು ಗುರುವಾಯೂರ್ ದೇವಾಲಯಕ್ಕೆ ಭೇಟಿ ನೀಡಿದರು. ವಿಶೇಷ ಪೂಜೆ, ಪುನಸ್ಕಾರ ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯ ಸಂರಕ್ಷಣೆ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಉಪಕ್ರಮಗಳನ್ನು ಘೋಷಿಸಿದರು. ಎರಡೂ ದೇವಾಲಯಗಳಿಗೆ ಒಟ್ಟು 6 ಕೋಟಿ ರೂಪಾಯಿ ದೇಣಿಗೆ ನೀಡಿದರು ಮತ್ತು ರಾಜರಾಜೇಶ್ವರಂ ದೇವಾಲಯದ ಸಮಗ್ರ ಪುನಃಸ್ಥಾಪನೆಗಾಗಿ 12 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಉತ್ತರ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬ ಪಟ್ಟಣದಲ್ಲಿ ಇರುವ ಪ್ರಾಚೀನ ರಾಜರಾಜೇಶ್ವರಂ ದೇವಾಲಯಕ್ಕೆ ಅನಂತ್ ಅಂಬಾನಿ 3 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ದೇವಾಲಯದ ಸಮಗ್ರ ನವೀಕರಣಕ್ಕಾಗಿ ಅವರು ಹೆಚ್ಚುವರಿಯಾಗಿ 12 ಕೋಟಿ ರೂಪಾಯಿ ದೇಣಿಗೆ ನೀಡಲಿದ್ದಾರೆ. ಈ ಯೋಜನೆಯಲ್ಲಿ ಬಹಳ ದಿನಗಳಿಂದ ಶಿಥಿಲಾವಸ್ಥೆಯಲ್ಲಿ ಇದ್ದ ದೇವಾಲಯದ ಐತಿಹಾಸಿಕ ಪೂರ್ವ ಗೋಪುರದ ಪುನರ್ನಿರ್ಮಾಣ ಮತ್ತು ಭಕ್ತರ ಅನುಕೂಲಕ್ಕಾಗಿ ಮೂಲಸೌಕರ್ಯ ಮತ್ತು ಪಾರ್ಕಿಂಗ್ ಸೌಲಭ್ಯಗಳ ಸುಧಾರಣೆ ಸೇರಿವೆ.

ಆ ನಂತರ, ಅನಂತ್ ಅಂಬಾನಿ ಮಧ್ಯ ಕೇರಳದ ತ್ರಿಶೂರ್ ಜಿಲ್ಲೆಯ ಪ್ರಸಿದ್ಧ ಗುರುವಾಯೂರ್ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಾಲಯದ ಟ್ರಸ್ಟ್ಗೆ 3 ಕೋಟಿ ರೂಪಾಯಿ ದೇಣಿಗೆ ನೀಡಿದರು. ದೇವಾಲಯ ಸಂಪ್ರದಾಯಗಳಿಗೆ ಸಂಬಂಧಿಸಿದ ಆನೆಗಳ ಕಲ್ಯಾಣಕ್ಕಾಗಿ ಆಸ್ಪತ್ರೆಗಳು, ಸರಪಳಿ ಇಲ್ಲದ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಉಪಕ್ರಮಗಳಿಗೆ ಅವರು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಸಾಂಪ್ರದಾಯಿಕ ಪದ್ಧತಿಗಳನ್ನು ಕಾಪಾಡಿಕೊಳ್ಳುವಾಗ ಪ್ರಾಣಿಗಳಿಗೆ ಮಾನವೀಯ ಮತ್ತು ವೈಜ್ಞಾನಿಕ ಆರೈಕೆಯನ್ನು ದೊರಕಿಸಲು ಮೀಸಲಾದ ಆಸ್ಪತ್ರೆಗಳು, ಸರಪಳಿ ಇಲ್ಲದಂಥ ಆಶ್ರಯಗಳು ಮತ್ತು ಆಧುನಿಕ ಆರೈಕೆ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳು ಈ ಉಪಕ್ರಮಗಳಲ್ಲಿ ಸೇರಿವೆ. ಈ ಉಪಕ್ರಮವು ಅನಂತ್ ಅಂಬಾನಿ ಅವರ ವನ್ಯಜೀವಿ ಸಂರಕ್ಷಣಾ ಯೋಜನೆಯಾದ 'ವಂತಾರ'ಕ್ಕೆ ಸಂಬಂಧಿಸಿದ ಪ್ರಯತ್ನಗಳ ಭಾಗವೆಂದು ಪರಿಗಣಿಸಲಾಗಿದೆ.
ಪರಂಪರೆ ಸಂರಕ್ಷಣೆ ಸಾಮೂಹಿಕ ಜವಾಬ್ದಾರಿ: ಅಂಬಾನಿ
ದೇವಸ್ಥಾನ ಭೇಟಿಯ ಬಳಿಕ ಮಾತನಾಡಿದ ಅನಂತ್ ಅಂಬಾನಿ ಅವರು, ಭಾರತದ ಆಧ್ಯಾತ್ಮಿಕ ಸಂಪ್ರದಾಯಗಳು ಕೇವಲ ಪೂಜಾ ಸ್ಥಳಗಳಲ್ಲ, ಬದಲಾಗಿ ಸಮಾಜ, ಪ್ರಕೃತಿ ಮತ್ತು ಕರುಣೆಯನ್ನು ಸಂಪರ್ಕಿಸುವ ಜೀವಂತ ಸಂಸ್ಥೆಗಳು ಎಂದು ಹೇಳಿದರು. ಭವಿಷ್ಯದ ಪೀಳಿಗೆಗೆ ಈ ಪರಂಪರೆಯನ್ನು ಸಂರಕ್ಷಿಸುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.
ಅಂಬಾನಿ ಅವರ ಭೇಟಿಯ ವೇಳೆ ದೇವಾಲಯ ಆಡಳಿತವು ಅವರನ್ನು ಸಾಂಪ್ರದಾಯಿಕ ಗೌರವಗಳೊಂದಿಗೆ ಸ್ವಾಗತಿಸಿತು. ದೇವಾಲಯಗಳ ದೇವಸ್ವಂ ಮಂಡಳಿಗಳ ಅಧಿಕಾರಿಗಳು ಮತ್ತು ಪುರೋಹಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications