ಆರ್ಮಿ ನಿಂದಿಸಿದ ಹಿಜ್ಬುಲ್ ಸಂಘಟನೆ ಸೇರಿದ ಸಂಶೋಧನಾ ವಿದ್ಯಾರ್ಥಿ!
ನವದೆಹಲಿ, ಜನವರಿ 09: ಕಾಶ್ಮೀರದ ಯುವಕರಿಗೆ ಭಾರತೀಯ ಸೇನೆ ಹೇಗೆ ಕಿರುಕುಳ ನೀಡುತ್ತಿದೆ ಎಂದು 2017ರ ನವೆಂಬರ್ ತಿಂಗಳಿನಲ್ಲಿ ಕಿಡಿಕಾರಿ, ನಾಪತ್ತೆಯಾಗಿದ್ದ ಯುವಕ ಈಗ ಉಗ್ರ ಸಂಘಟನೆಯ ಪಾಲಾಗಿದ್ದಾನೆ.
ಅಲಿಗಢ ಮುಸ್ಲಿಂ ಯೂನಿವರ್ಸಿಟಿಯ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ ಮನನ್ ಬಶೀರ್ ವಾನಿ ಈಗ ಕೈಯಲ್ಲಿ ಗನ್ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷನಾಗಿದ್ದಾನೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿರುವ ಮಾಹಿತಿ ಸಿಕ್ಕಿದೆ.
ಕಾಶ್ಮೀರ: ಭಯೋತ್ಪಾದಕರಿಂದ ಐಇಡಿ ಸ್ಫೋಟ, ಮೂವರು ಪೊಲೀಸರು ಸಾವು
ಭೂವಿಜ್ಞಾನ ವಿಭಾಗದ ಸಂಶೋಧನಾ ವಿದ್ಯಾರ್ಥಿಯಾಗಿದ್ದ ಮನನ್, ಎಕೆ 47 ಹಿಡಿದಿರುವ ಫೋಟೋ ವೈರಲ್ ಆಗಿತ್ತು. ನಮ್ಮ ಸಂಘಟನೆ ಸೇರುವ ಮೂಲಕ ಸ್ವಾತಂತ್ರ್ಯ ಹೋರಾಟ ಮುಂದುವರಿಸುತ್ತಾರೆ ಎಂದು ಹಿಜ್ಬುಲ್ ಸಂಘಟನೆಯ ಮುಖ್ಯಸ್ಥ ಸೈಯದ್ ಸಲಾಲುದ್ದೀನ್ ಹೇಳಿದ್ದಾನೆ.
ಜಲ ಪ್ರಳಯದ ವೇಳೆ ರಕ್ಷಣಾ ಕಾರ್ಯ ಹೇಗೆ ಕೈಗೊಳ್ಳಬೇಕು ಎಂಬುದರ ಬಗ್ಗೆ ಮನನ್ ಮಂಡಿಸಿದ್ದ ವರದಿ ಕಾಲೇಜಿನಲ್ಲಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಎರಡು ವರ್ಷಗಳ ಹಿಂದೆ ಭೋಪಾಲ್ ನಲ್ಲಿ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಥಮ ಬಹುಮಾನ ಗಳಿಸಿದ್ದ. ಆದರೆ, ಈಗ ಉಗ್ರ ಸಂಘಟನೆ ಸೇರಿದ್ದಾನೆ. ಮನನ್ ನಿರ್ಧಾರದಿಂದ ಆತನ ತಾಯಿ ಮತ್ತು ಸಹೋದರಿ ಆಘಾತಕ್ಕೊಳಗಾಗಿದ್ದಾರೆ.