ನೆರೆಯ ನೇಪಾಳ, ಶ್ರೀಲಂಕಾದಲ್ಲಿಯೂ ಬಿಜೆಪಿ ಸರ್ಕಾರ ರಚನೆ!
ಅಗರ್ತಲಾ, ಫೆಬ್ರವರಿ 15: ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಾಗುತ್ತಿರುವ ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ದೇಬ್ ರಾಜಕೀಯ ಮತ್ತು ನೀತಿ ವಿಚಾರವಾಗಿ ಮತ್ತೆ ಸುದ್ದಿಯಾಗಿದ್ದಾರೆ. ಬಿಜೆಪಿಯು ತನ್ನ ಪ್ರಾಬಲ್ಯವನ್ನು ದೇಶದೆಲ್ಲೆಡೆ ಮಾತ್ರವಲ್ಲ, ನೆರೆಯ ದೇಶಗಳಿಗೂ ಹರಡಲು ಯೋಜನೆ ನಡೆಸಿದೆ ಎಂದು ಬಿಪ್ಲಬ್ ದೇಬ್ ತಿಳಿಸಿದ್ದಾರೆ.
ರಾಜಧಾನಿ ಅಗರ್ತಲಾದಲ್ಲಿ ಮಾತನಾಡಿದ ಅವರು, ನೆರೆಯ ನೇಪಾಳ ಮತ್ತು ಶ್ರೀಲಂಕಾಗಳಲ್ಲಿ ಸಹ ಬಿಜೆಪಿ ಸರ್ಕಾರಗಳನ್ನು ಸ್ಥಾಪಿಸಲು ಗೃಹ ಸಚಿವ ಅಮಿತ್ ಶಾ ಅವರು ಯೋಜನೆ ರೂಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ಎಲ್ಲ ರಾಜ್ಯಗಳಲ್ಲಿಯು ಗೆಲುವು ಕಂಡ ಬಳಿಕ ವಿದೇಶಗಳಿಗೂ ಪಕ್ಷವನ್ನು ವಿಸ್ತರಿಸುವ ಬಗ್ಗೆ ಅಮಿತ್ ಶಾ ಅವರು 2018ರಲ್ಲಿ ತ್ರಿಪುರಾ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುವ ಸಭೆಯ ವೇಳೆ ಹೇಳಿದ್ದರು ಎಂದು ಬಿಪ್ಲಬ್ ತಿಳಿಸಿದ್ದಾರೆ.

ನೇಪಾಳ, ಶ್ರೀಲಂಕಾ ಉಳಿದಿವೆ
'ನಾವು ರಾಜ್ಯ ಅತಿಥಿ ಗೃಹದಲ್ಲಿ ಚರ್ಚಿಸುತ್ತಿದ್ದೆವು. ಆಗ ಅಜಯ್ ಜಾಮ್ವಾಲ್ (ಬಿಜೆಪಿಯ ಈಶಾನ್ಯ ವಲಯದ ಕಾರ್ಯದರ್ಶಿ) ಅವರು ಬಿಜೆಪಿ ಅನೇಕ ರಾಜ್ಯಗಳಲ್ಲಿ ಸರ್ಕಾರ ರಚಿಸಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಇನ್ನು ಶ್ರೀಲಂಕಾ ಮತ್ತು ನೇಪಾಳಗಳು ಉಳಿದಿವೆ ಎಂದು ಹೇಳಿದರು. ನಾವು ನೇಪಾಳ ಮತ್ತು ಶ್ರೀಲಂಕಾಕ್ಕೆ ಪಕ್ಷವನ್ನು ವಿಸ್ತರಿಸಬೇಕು ಹಾಗೂ ಅಲ್ಲಿ ಸರ್ಕಾರ ರಚಿಸಲು ಜಯಗಳಿಸಬೇಕು' ಎಂದು ಅಮಿತ್ ಶಾ ಹೇಳಿದ್ದಾಗಿ ಬಿಪ್ಲಬ್ ನೆನಪಿಸಿಕೊಂಡಿದ್ದಾರೆ.

ಮಮತಾಗೆ ಸೋಲು ಖಚಿತ
ಶೀಘ್ರದಲ್ಲಿಯೇ ನಡೆಯಲಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸೋಲು ಅನುಭವಿಸಲಿದೆ ಎಂದು ಅವರು ಅತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಟ್ರೆಂಡ್ ಬದಲಾವಣೆ
ಕೇರಳದಲ್ಲಿ ಪ್ರತಿ ಐದು ವರ್ಷಗಳಿಗೊಮ್ಮೆ ಎಡಪಕ್ಷ ಮತ್ತು ಕಾಂಗ್ರೆಸ್ ನಡುವೆ ಸರ್ಕಾರಗಳು ಬದಲಾಗುವ ಪದ್ಧತಿಯನ್ನು ಬಿಜೆಪಿ ಬದಲಿಸಿದೆ. ಅಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದ ಬಿಪ್ಲಬ್, ಅಮಿತ್ ಶಾ ಅವರ ನೇತೃತ್ವದಲ್ಲಿ ಬಿಜೆಪಿಯು ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ ಎಂದು ಶ್ಲಾಘಿಸಿದ್ದಾರೆ.

ಮಹಾಭಾರತ ಕಾಲದಲ್ಲೇ ಉಪಗ್ರಹ ಇತ್ತು
ಬಿಪ್ಲಬ್ ದೇಬ್ ಅವರು ವಿವಾದಾತ್ಮಕ ಹಾಗೂ ವಿಚಿತ್ರ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಮಹಾಭಾರತದ ಕಾಲಘಟ್ಟದಲ್ಲಿಯೇ ಅಂತರ್ಜಾಲ ಮತ್ತು ಅತ್ಯಾಧುನಿಕ ಉಪಗ್ರಹ ಸಂವಹನ ವ್ಯವಸ್ಥೆ ಅಸ್ತಿತ್ವದಲ್ಲಿತ್ತು. ಕೆಲವು ಯುರೋಪಿಯನ್ ದೇಶಗಳು ಮತ್ತು ಅಮೆರಿಕವು ಆಧುನಿಕ ಸಂವಹನ ವ್ಯವಸ್ಥೆ ತಮ್ಮ ಆವಿಷ್ಕಾರ ಎಂದು ಹೇಳಿಕೊಳ್ಳುತ್ತವೆ. ಆದರೆ ನಾವು ಇದನ್ನೆಲ್ಲ ಪುರಾತನ ಕಾಲದಲ್ಲಿಯೇ ಹೊಂದಿದ್ದೆವು ಎಂದು ಬಿಪ್ಲಬ್ ಹೇಳಿದ್ದರು.












Click it and Unblock the Notifications