ಅಮರನಾಥ ಯಾತ್ರೆಗೆ ಭಯೋತ್ಪಾದಕ ದಾಳಿಯ ಆತಂಕ
ಶ್ರೀನಗರ, ಜೂನ್ 27: ಹಿಂದುಗಳ ಪ್ರಮುಖ ಧಾರ್ಮಿಕ ಕೇಂದ್ರ ಎನ್ನಿಸಿರುವ ಜಮ್ಮು-ಕಾಶ್ಮೀರದ ಅಮರನಾಥ ದೇವಾಲಯದಲ್ಲಿ ಭಯೋತ್ಪಾದಕ ದಾಳಿಯಾಗುವ ಸಾಧ್ಯತೆ ಇದೆ ಎಂಬ ಆತಂಕಕಾರಿ ಸಂಗತಿಯನ್ನು ಗುಪ್ತಚರ ದಳ ಹೊರಹಾಕಿದೆ. ಜೂನ್ 28 ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಲಶ್ಕರ್ ಇ ತೊಯ್ಬಾ ಭಯೋತ್ಪಾದಕ ಸಂಘಟನೆ, ಅಮರನಾಥ ಯಾತ್ರಿಗಳ ಮೇಲೆ ದಾಳಿ ಮಾಡುವ ಯೋಜನೆಯನ್ನು ಸಿದ್ಧಪಡಿಸಿಕೊಂಡಿದೆ ಎಂಬ ಗುಪ್ತಚರ ದಳದ ಮಾಹಿತಿಯ ಹಿನ್ನೆಲೆಯಲ್ಲಿ ಈ ತಾಣದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜುಲೈ 8, 2016ರಂದು ಸಾವನ್ನಪ್ಪಿದ್ದ ಹಿಜ್ಬುಲ್ಲಾ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವನಿ ಸಾವಿಗೆ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ದಾಳಿಗೆ ಉಗ್ರರು ಸಂಚು ರೂಪಿಸಿದ್ದಾರೆ. ಅಮರನಾಥ ಯಾತ್ರೆ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಮಾಹಿತಿ ದೊರಕುತ್ತಿದ್ದಂತೆಯೇ ದೇಶದಾದ್ಯಂತ ತಲ್ಲಣ ಹುಟ್ಟಿಕೊಂಡಿದೆ.

ಗುಪ್ತಚರ ದಳ ಎಚ್ಚರಿಕೆ ನೀಡುತ್ತಿದ್ದಂತೆಯೇ 2000 ದಲ್ಲಿ ನಡೆದ ಲಷ್ಕರ್ ಇ ತೋಯ್ಬಾ ದಾಳಿಯಲ್ಲಿ 30 ಯಾತ್ರಿಗಳು ಅಸುನೀಗಿದ್ದ ಚಿತ್ರ ಕಣ್ಮುಂದೆ ಬಂದು ಮತ್ತಷ್ಟು ಆತಂಕವನ್ನು ಹುಟ್ಟುಹಾಕುತ್ತಿದೆ.
ಅಮರನಾಥ ಯಾತ್ರೆಗೆ ಹಿಜ್ಬುಲ್ ಮುಜಾಹಿದ್ದಿನ್ ಮತ್ತು ಲಷ್ಕರ್ ಎರಡೂ ಭಯೋತ್ಪಾದಕ ಸಂಘಟನೆಗಳ ದಾಳಿ ಆತಂಕವಿದ್ದು, ಹಿಜ್ಬುಲ್ ಗಿಂತ ಲಷ್ಕರ್ ಹೆಚ್ಚು ಅಪಾಯಕಾರಿ ಎಂದು ಗುಪ್ತಚರ ದಳ ಹೇಳಿದೆ.
ಈಗಾಗಲೇ ಅಮರನಾಥ ಯಾತ್ರೆಗೆ ಬರುವ ಭಕ್ತಾದಿಗಳಿಗೆ ಮತ್ತು ದೇವಾಲಯಕ್ಕೆ ಬಿಗಿಭದ್ರತೆ ನೀಡಲಾಗಿದೆ. ಹಿಮದಿಂದಲೇ ಸೃಷ್ಟಿಯಾದ, 40 ಮೀ ಎತ್ತರದ ನೈಸರ್ಗಿಕ ಶಿವಲಿಂಗವನ್ನು ನೋಡುವುದಕ್ಕೆಂದೇ ವರ್ಷವೂ ಲಕ್ಷಾಂತರ ಜನ ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ.











Click it and Unblock the Notifications