ಚಂದ್ರಬಾಬು ನಾಯ್ಡು ಬಿಜೆಪಿಗೆ ಮತ್ತಷ್ಟು ಹತ್ತಿರ?
ಹೈದರಾಬಾದ್, ಸೆಪ್ಟೆಂಬರ್ 23: 'ಹೈದರಾಬಾದ್ ಮೀನು' ಮೋದಿ ಗಾಳಕ್ಕೆ ಬೀಳುವುದೇ? ಎಂಬ ಪ್ರಶ್ನೆಗೆ ಉತ್ತರರೂಪವಾಗಿ ಒಂದಷ್ಟು ಕುರುಹುಗಳು ಕಾಣಿಸಿಕೊಂಡಿವೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಮತ್ತು ತೆಲುಗು ದೇಶಂ ಪಾರ್ಟಿಯ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಮಧ್ಯೆ ಕಳೆದ ವಾರ ಭೇಟಿ ಏರ್ಪಟ್ಟಿದ್ದು, ದೇಶ ಕ್ಲಿಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಪ್ರತಿಪಕ್ಷಗಳು ಹೆಚ್ಚು ಜವಾಬ್ದಾರಿ ನಿಭಾಯಿಸಬೇಕಿದೆ ಎಂದು ಚಂದ್ರಬಾಬು ಹೇಳಿದ್ದಾರೆ.
ಅದಾದ ನಂತರ 'ಬಿಜೆಪಿ ನೇತೃತ್ವದ ಎನ್ ಡಿಎಗೆ ಮರಳುವಿರಾ?' ಎಂದು ಸುದ್ದಿಗಾರರು ಪ್ರಶ್ನೆ ಕೇಳುತ್ತಿದ್ದಂತೆ ಮುಗಳ್ನಕ್ಕ ಚಂದ್ರಬಾಬು ನಾಯ್ಡು 'ಈ ತಕ್ಷಣಕ್ಕೆ ನಾನು ಏನನ್ನೂ ಅಲ್ಲಗಳೆಯುತ್ತಿಲ್ಲ. ಅಥವಾ ಏನನ್ನೂ ಹೊಸದಾಗಿ ಹೇಳುತ್ತಿಲ್ಲ' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇದೇ ವೇಳೆ NDA ಮಾಜಿ ಸಂಚಾಲಕ ಚಂದ್ರಬಾಬು ನಾಯ್ಡು ಆಂಧ್ರದಲ್ಲಿ 'ರಾಜಕೀಯ' ಮಾಡುತ್ತಿರುವ UPA ಬಗ್ಗೆ ಕಿಡಿಕಾರಿದ್ದಾರೆ. UPA ದುರಾಡಳಿತದಿಂದ ಆಂಧ್ರವಷ್ಟೇ ಅಲ್ಲ ಇಡೀ ದೇಶ ಅರಾಜಕತೆಯತ್ತ ತಳ್ಳಲ್ಪಟ್ಟಿದೆ ಎಂದು ಬಾಬು ದೂರಿದರು.
ಈ ಸಂದರ್ಭದಲ್ಲಿ, ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ಅನುಮೋದನೆಗೊಂಡಿರುವುದಕ್ಕೆ ನೀವು ಸಹಮತ ಸೂಚಿಸುವಿರಾ?' ಎಂಬ ಪ್ರಶ್ನೆಗೆ ನೇರವಾಗಿ ಏನನ್ನೂ ಹೇಳದ ನಾಯ್ಡು 'ಕಾಂಗ್ರೆಸ್ ಸರಕಾರ ದೇಶಕ್ಕೆ ದೊಡ್ಡ ಸಮಸ್ಯೆಯಾಗಿದೆ' ಎಂದು ಅಭಿಪ್ರಾಯಪಟ್ಟರು.
ತೆಲಂಗಾಣ ಸಮಸ್ಯೆಯನ್ನು ಇಡೀ ರಾಜ್ಯಕ್ಕೆ ಹಬ್ಬಿಸಿದ ಯುಪಿಎ ಜತೆ ಋಣಸಂದಾಯವಾಗಿ Telangana Rashtra Samiti ಕಾಂಗ್ರೆಸ್ ಜತೆ ಕೈಹಜೋಡಿಸುತ್ತಿದೆ. ಅದೇ ಹಾದಿಯಲ್ಲಿ ಸಾಗಿರುವ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೀಹನ್ ಸಿಂಗ್ ಅವರೂ ಕಾಂಗ್ರೆಸ್ ಪಾಲಾಗುವುದು ನಿರೀಕ್ಷಿತ ಎಂದು ಚಂದ್ರಬಾಬು ನಾಯ್ಡು ಸೂಚ್ಯವಾಗಿ ಹೇಳಿದ್ದಾರೆ.












Click it and Unblock the Notifications