ಅಖಿಲೇಶ್ 'ವಿಕಾಸ ಯಾತ್ರೆ'ಗೆ ಅಪಶಕುನ : 1 ಕಿ.ಮೀನಲ್ಲೇ ಕೈಕೊಟ್ಟ ರಥ
ಲಕ್ನೋ, ನ 3 (ಪಿಟಿಐ): ಆಂತರಿಕ ಯಾದವೀ ಕಲಹದಿಂದ ಬಳಲಿ ಬೆಂಡಾಗಿ ಹೋಗಿದ್ದ ಸಮಾಜವಾದಿ ಪಕ್ಷದ ಪ್ರಮುಖರು ಗುರುವಾರ (ನ 3) ಒಗ್ಗಟ್ಟು ಪ್ರದರ್ಶಿಸಿಸುವ ಮೂಲಕ, ಚುನಾವಣೆಗೆ ಮುನ್ನ ಜನರೆದುರು ಮಂದಸ್ಮಿತರಾಗಿ ಒಂದೇ ವೇದಿಕೆಯಲ್ಲಿ ಪ್ರತ್ಯಕ್ಷರಾದರು.
ಸಮಾಜವಾದಿ ಪಕ್ಷದ ಮುಖಂಡರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದೇನೋ ಸರಿ ಆದರೆ, ಪಕ್ಷ ಆಯೋಜಿಸಿದ್ದ 'ವಿಕಾಸ ರಥ ಯಾತ್ರೆ' ಗೆ ಆರಂಭದಲ್ಲೇ ವಿಘ್ನ ಎದುರಾಯಿತು. ಒಂದೆಡೆ ವಾಹನ ಕೈಕೊಟ್ಟರೆ, ಇನ್ನೊಂದೆಡೆ ಕಾರ್ಯಕರ್ತರು ಬಡಿದಾಡಿಕೊಂಡರು.
ಸಿಎಂ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಸಾಗುವ ವಿಕಾಸ ರಥ ಯಾತ್ರೆಗೆ ಎಸ್ಪಿ ವರಿಷ್ಠ ಮುಲಾಯಂ ಸಿಂಗ್ ಯಾದವ್ ಗುರುವಾರ ಚಾಲನೆ ನೀಡಿದರು. ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲು ಮರ್ಸಿಡಿಸ್ ಬೆಂಜ್ ಬಸ್ಸನ್ನು ಇದಕ್ಕಾಗಿ ನವೀಕೃತಗೊಳಿಸಲಾಗಿತ್ತು.
ಸಮಾಜವಾದ ಪಕ್ಷ ಮತ್ತೆ ಅಧಿಕಾರಕ್ಕೆ ಬರಲು ಸಮಯ ಕೂಡಿಬಂದಿದೆ ಎಂದು ಯಾತ್ರೆ ಆರಂಭಿಸಿದ ಅಖಿಲೇಶ್ ತೀವ್ರ ಮುಜುಗರ ಎದುರಿಸಬೇಕಾಯಿತು. ವಿಕಾಸ ರಥ ಯಾತ್ರೆ ಆರಂಭವಾಗಿ ಒಂದು ಕಿಲೋಮೀಟರ್ ಸಾಗುವಷ್ಟರಲ್ಲಿ ಬಸ್ ಕೈಕೊಟ್ಟಿತು.
ತಾಂತ್ರಿಕ ಕಾರಣಗಳಿಂದ ಹೈಟೆಕ್ ಬಸ್ ಬ್ರೇಕ್ ಡೌನ್ ಆಗಿರುವುದರಿಂದ ಯಾತ್ರೆಗೆ ಮೊದಲ ಗಂಟೆಯಲ್ಲೇ ಬ್ರೇಕ್ ಬಿದ್ದಿದೆ. ತಾಂತ್ರಿಕ ಸಮಸ್ಯೆ ಸರಿಪಡಿಸುವ ಕಾರ್ಯದಲ್ಲಿ ಮೆಕ್ಯಾನಿಕ್ ಗಳು ನಿರತರಾಗಿದ್ದು, ಅಖಿಲೇಶ್ ಕಾರಿನಲ್ಲಿ ಯಾತ್ರೆ ಮುಂದುವರಿಸಿದ್ದಾರೆ. ಕಾರ್ಯಕರ್ತರ ಜಟಾಪಟಿ, ಮುಂದೆ ಓದಿ..
ಪಕ್ಷದ ಎಲ್ಲಾ ಪ್ರಮುಖರು ಹಾಜರು
ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ, ಉತ್ತರಪ್ರದೇಶ ಎಸ್ಪಿ ಘಟಕದ ಅಧ್ಯಕ್ಷ ಶಿವಪಾಲ್ ಸಿಂಗ್, ಸಿಎಂ ಮುಲಾಯಂ ಸಿಂಗ್ ಮುಂತಾದ ಪ್ರಮುಖರು ಕಾರ್ಯಕ್ರಮದಲ್ಲಿ ಹಾಜರಿದ್ದರು. 10.40ಕ್ಕೆ ಮುಲಾಯಂ ರಥಯಾತ್ರೆಗೆ ಚಾಲನೆ ನೀಡಿದರು.
|
ಬೆಂಬಲಿಗರ ರಾದ್ದಾಂತ
ಅಖಿಲೇಶ್ ಬಣ ಮತ್ತು ಮುಲಾಯಂ ಬಣ ಎಂದು ಇಬ್ಬಾಗವಾಗಿರುವ ಪಕ್ಷದಲ್ಲಿ ರಥಯಾತ್ರೆ ಕಾರ್ಯಕ್ರಮ ಒಗ್ಗಟ್ಟು ಪ್ರದರ್ಶನದ ವೇದಿಕೆಯಾಗಿದ್ದರೂ, ಎರಡು ಬಣದ ಕಾರ್ಯಕರ್ತರು ಮಾರಾಮಾರಿಗೆ ಇಳಿದಿದ್ದರಿಂದ ಕಾರ್ಯಕ್ರಮಕ್ಕೆ ಈ ಘಟನೆ ಕಪ್ಪುಚುಕ್ಕೆಯಾಯಿತು.
ಸಿಲ್ವರ್ ಜುಬಿಲಿ
ನವೆಂಬರ್ ಐದರಂದು ನಡೆಯಲಿರುವ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಹಾಮೈತ್ರಿಕೂಟಕ್ಕೆ ಚಾಲನೆ ಸಿಗುವ ಸಾಧ್ಯತೆಯಿದೆ. ದೇವೇಗೌಡ, ಶರದ್ ಯಾದವ್, ಲಾಲೂ, ಅಜಿತ್ ಸಿಂಗ್, ರಾಂ ಜೇಠ್ಮಲಾನಿ, ನಿತೀಶ್ ಕುಮಾರ್ ಮುಂತಾದ ಧುರೀಣರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
|
ಬಿಜೆಪಿಯನ್ನು ಬೆಳೆಯಲು ಬಿಡಬಾರದು
ಬಿಜೆಪಿಯನ್ನು ಮಟ್ಟಹಾಕಲು ಮಹಾಮೈತ್ರಿಯ ಬಗ್ಗೆ ಮುಲಾಯಂ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆಯಾಗಬೇಕಾದರೆ ನಾವೆಲ್ಲಾ ಒಂದಾಗಬೇಕು ಎಂದು ಅಖಿಲೇಶ್ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.
|
ಮುಲಾಯಂ ಸಿಂಗ್
ವಿಕಾಸದಿಂದ ವಿಜಯದ ಕಡೆಗೆ ಈ ಯಾತ್ರೆ ಸಾಗಲಿ, ಅಖಿಲೇಶ್ ಯಾದವ್ ಗೆ ನನ್ನ ಶುಭಕಾಮನೆಗಳು ಎಂದು ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಹಾರೈಸಿದ್ದಾರೆ.