ಪ್ರಧಾನಿ ಮೋದಿಯನ್ನು ರಾಹುಲ್ ಲೇವಡಿ ಮಾಡಿದ್ದು ಹೀಗೆ !
ರಾಂಟೆಕ್ (ಮಹಾರಾಷ್ಟ್ರ), ಅ 12: ಅಕ್ಟೋಬರ್ ಎರಡರಂದು ಮಹಾತ್ಮ ಗಾಂಧೀಜಿಯ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುವ ಮತ್ತು ಅವರ ತತ್ವದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿಯವರಿಗೆ ನನ್ನದೊಂದು ಪ್ರಶ್ನೆ.
ಜೀವನದುದ್ದಕ್ಕೂ ಗಾಂಧೀಜಿಯವರ ವಿಚಾರಧಾರೆಯ ವಿರುದ್ದವಾಗಿ ನಡೆಯುತ್ತಿರುವ ಮೋದಿ, ಗಾಂಧೀಜಿಯವರ ಒಂದು ತತ್ವವನ್ನಾದರೂ ಪಾಲಿಸಿದ್ದಾರಾ ಎಂದು ರಾಹುಲ್ ಪ್ರಶ್ನಿಸಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಬಣ್ಣಬಣ್ಣದ ಮಾತನ್ನಾಡಿದ್ದ ಮೋದಿ, ನೂರು ದಿನಗಳಲ್ಲಿ ಕಪ್ಪುಹಣವನ್ನು ವಾಪಸ್ ತರುತ್ತೇನೆಂದಿದ್ದರು. ಈಗ ಐದು ತಿಂಗಳಾಯಿತು, ಕಪ್ಪು ಹಣದಲ್ಲಿ ಒಂದು ರೂಪಾಯಿ ಆದರೂ ದೇಶಕ್ಕೆ ವಾಪಸ್ ಬಂತಾ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ. (ಮೋದಿ ಸರಕಾರದ ವಿರುದ್ದ ಸೋನಿಯಾ ಆರೋಪ)
ಮಹಾರಾಷ್ಟ್ರದ ರಾಂಟೆಕ್ ನಲ್ಲಿ ಭಾನುವಾರ (ಅ 12) ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್, ಕಳೆದ ಚುನಾವಣೆಯಲ್ಲಿ ಗುಜರಾತಿನಲ್ಲಿ ಸರ್ದಾರ್ ಪಟೇಲ್ ಅವರ ದೊಡ್ಡ ಮೂರ್ತಿ ನಿರ್ಮಾಣ ಮಾಡುವುದಾಗಿ ಹೇಳಿದ್ದರು.
ಮೂರ್ತಿಯನ್ನು ಯಾರು ಬೇಕಾದರೂ ಸ್ಥಾಪಿಸಬಹುದು, ಅದಕ್ಕಿಂತ ಹೆಚ್ಚಾಗಿ ಮಹಾನ್ ವ್ಯಕ್ತಿಗಳ ವಿಚಾರಧಾರೆಯನ್ನು ಪಾಲಿಸಕೊಂಡು ಬರಬೇಕೆಂದು ರಾಹುಲ್, ಮೋದಿಗೆ ಕಿವಿಮಾತನ್ನು ಹೇಳಿದ್ದಾರೆ.
ಅರವತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನನ್ನೂ ಸಾಧಿಸಲಿಲ್ಲ ಎನ್ನುವುದು ಬಿಜೆಪಿಯ ಆರೋಪ. ದೇಶವಿಂದು ಈ ಮಟ್ಟಕ್ಕೆ ಬೆಳೆಯಲು ನಿಮ್ಮ ಕುಟುಂಬವೂ ಕಾರಣ. ಕಾಂಗ್ರೆಸ್ ಪಕ್ಷ ಒಂದರಿಂದಲೇ ಇದು ಸಾಧ್ಯವಿಲ್ಲ. ದೇಶ ಪ್ರಗತಿ ಸಾಧಿಸಲಿಲ್ಲ ಎನ್ನುವ ಮೂಲಕ ಮೋದಿ ನಿಮ್ಮನ್ನೆಲ್ಲಾ ಅವಮಾನಿಸುತ್ತಿದ್ದಾರೆಂದು ರಾಹುಲ್ ಸಭೆಯಲ್ಲಿ ಹೇಳಿದ್ದಾರೆ.
ದೆಹಲಿ ಮತ್ತು ಮುಂಬೈ ನಡುವೆ ಕೈಗಾರಿಕಾ ಕಾರಿಡಾರ್ ಮಾಡಿದ್ದು ನಮ್ಮ ಸರಕಾರ. ಇದರಿಂದಾಗಿ ಅಲ್ಲಿ ನೂರಾರು ಉದ್ಯಮಗಳಿವೆ, ಸಾವಿರಾರು ಕಾರ್ಮಿಕರಿದ್ದಾರೆ.
ಕಾಂಗ್ರೆಸ್ ಪಕ್ಷ ಎಲ್ಲರ ಜೀವನಶೈಲಿ ಚೆನ್ನಾಗಿರ ಬೇಕೆಂದು ಬಯಸುತ್ತದೆ. ಹತ್ತರಿಂದ ಹದಿನೈದು ಉದ್ಯಮಿಗಳು ಮಾತ್ರ ಮತ್ತಷ್ಟು ಶ್ರೀಮಂತರಾಗ ಬೇಕೆಂದು ಬಯುಸುವ ಪಕ್ಷ ನಮ್ಮದಲ್ಲ ಎಂದು ರಾಹುಲ್ ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಅಮೆರಿಕಾ ಪ್ರವಾಸದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಡಂಬಡಿಕೆಗೆ ಮೋದಿ ಸಹಿಹಾಕಿದರು. ಇನ್ನು ಎಂಟು ಸಾವಿರ ರೂಪಾಯಿಗೆ ಸಿಗುತ್ತಿದ್ದ ಕ್ಯಾನ್ಸರ್ ಸಂಬಂಧ ಔಷಧಿಗಳಿಗೆ ಲಕ್ಷ ರೂಪಾಯಿ ವ್ಯಯಿಸ ಬೇಕಾಗುತ್ತದೆ ಎಂದು ರಾಹುಲ್, ಮೋದಿ ಒಡಂಬಡಿಕೆಯನ್ನು ಮತ್ತೊಮ್ಮೆ ಟೀಕಿಸಿದ್ದಾರೆ.
ಚೀನಾ ಮತ್ತು ಪಾಕಿಸ್ತಾನದ ಪ್ರಧಾನಿಗಳು ಬಂದರು. ಇದರಿಂದ ಏನು ಪ್ರಯೋಜನವಾಯಿತು? ಗಡಿಭಾಗದಲ್ಲಿ ಫೈರಿಂಗ್ ಹೆಚ್ಚಾಗಿದೆ. ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದು ಶನಿವಾರವಷ್ಟೇ ಪ್ರಧಾನಿಗಳು ಹೇಳಿಕೆ ನೀಡಿದ್ದರು. ಇಂದು ಮುಂಜಾನೆ ಮತ್ತೆ ಫೈರಿಂಗ್ ಆರಂಭವಾಗಿದೆ ಎಂದು ರಾಹುಲ್ ಹೇಳಿದ್ದಾರೆ.
288 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯ ಚುನಾವಣೆ ಅಕ್ಟೋಬರ್ ಹದಿನೈದರಂದು ಒಂದು ಹಂತದಲ್ಲಿ ನಡೆಯಲಿದ್ದು, ಅಕ್ಟೋಬರ್ 19ರಂದು ಮತಎಣಿಕೆ ಕಾರ್ಯ ನಡೆಯಲಿದೆ.