ಟ್ರಂಪ್, ಪಾಕ್ ವಿರೋಧಿ ಹೇಳಿಕೆಗೆ ಸುಬ್ರಮಣಿಯನ್ ಸ್ವಾಮಿ ಬೆಂಬಲ
ನವದೆಹಲಿ, ಜನವರಿ 02: "ಪಾಕಿಸ್ತಾನವನ್ನು ಹತ್ತಿಕ್ಕಲು ಭಾರತ, ಅಮೆರಿಕದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಪಡಿಸಿಕೊಳ್ಳುವ ಅಗತ್ಯವಿದೆ" ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಾಕ್ ವಿರೋಧಿ ಹೇಳಿಕೆಯನ್ನು ಬೆಂಬಲಿಸಿದ ಅವರು, "ಅಮೆರಿಕಕ್ಕೆ ಪಾಕಿಸ್ತಾನದ ಬುದ್ಧಿ ಈಗ ಅರಿವಿಗೆ ಬಂದಿದ್ದು ಭಾರತದ ಮಟ್ಟಿಗೆ ಒಳ್ಳೆಯ ಬೆಳವಣಿಗೆ. ಈ ಅವಕಾಶವನ್ನು ಭಾರತ ಸರಿಯಾಗಿ ಬಳಸಿಕೊಳ್ಳಬೇಕಿದೆ. ಅಮೆರಿಕ ಮತ್ತು ಇಸ್ರೇಲ್ ಎರಡೂ ದೇಶಗಳೊಂದಿಗೂ ಭಾರತ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ಅಗತ್ಯವಿದೆ" ಎಂದು ಅವರು ಹೇಳಿದರು.

ಅಷ್ಟೇ ಅಲ್ಲ, "ಭಾರತ ಇಸ್ರೇಲ್ ನ ಟೆಲ್ ಅವೀವ್ ನಲ್ಲಿರುವ ತನ್ನ ರಾಯಭಾರಿಯನ್ನು ಜೆರುಸಲೇಂ ಗೆ ಕಳಿಸಬೇಕಿದೆ" ಎಂದಿದ್ದಾರೆ. ಕಳೆದ ಡಿಸೆಂಬರ್ 6 ರಂದು ಜೆರುಸಲೇಂ ಅನ್ನು ಇಸ್ರೇಲ್ ನ ರಾಜಧಾನಿ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಪಾಕಿಸ್ತಾನದ ಕುರಿತು ನಿನ್ನೆ(ಜ.1) ಟ್ವೀಟ್ ಮಾಡಿದ್ದ ಟ್ರಂಪ್, ''ಅಮೆರಿಕ ಕಳೆದ 15 ವರ್ಷಗಳಿಂದ ಪಾಕಿಸ್ತಾನಕ್ಕೆ 33 ಶತಕೋಟಿ ಆರ್ಥಿಕ ನೆರವು ನೀಡುತ್ತಬಂದಿದೆ. ಇದು ನಿಜಕ್ಕೂ ಮೂರ್ಖತನ. ನಮ್ಮ ಈ ಸಹಾಯಕ್ಕೆ ಪ್ರತಿಯಾಗಿ ಪಾಕಿಸ್ತಾನ ನೀಡಿದ್ದೇನು ಎಂದರೆ, ಕೇವಲ ಮೋಸ ಮತ್ತು ಸುಳ್ಳು ಮಾತ್ರ. ನಮ್ಮ ನಾಯಕರನ್ನು ಅದು ಮೂರ್ಖರು ಎಂದುಕೊಂಡಿದೆ. ನಾವು ಅಫ್ಘಾನಿಸ್ತಾನದಲ್ಲಿರುವ ಉಗ್ರರನ್ನು ಸದೆಬಡಿಯುತ್ತಿದ್ದರೆ, ಪಾಕಿಸ್ತಾನ ಅವರಿಗೆ ಭದ್ರ ನೆಲೆ ನೀಡುತ್ತಿದೆ. ಇದನ್ನು ಸುಮ್ಮನೆ ಬಿಡುವುವದಕ್ಕೆ ಸಾಧ್ಯವಿಲ್ಲ" ಎಂದಿದ್ದರು.












Click it and Unblock the Notifications