ಐಶ್ವರ್ಯ ರೈಗೆ ವಿಚ್ಛೇದನ ನೋಟೀಸ್ ಕೊಟ್ಟ ತೇಜ್ ಪ್ರತಾಪ್ ನಾಪತ್ತೆ!
ಇತ್ತೀಚೆಗಷ್ಟೇ ಪತ್ನಿ ಐಶ್ವರ್ಯ ರೈಗೆ ವಿಚ್ಛೇದನದ ನೋಟೀಸ್ ಕಳಿಸಿ ಸುದ್ದಿಯಾಗಿದ್ದ ಆರ್ ಜೆಡಿ ಮುಖಂಡ ತೇಜ್ ಪ್ರತಾಪ್ ಯಾದವ್ ನಾಪತ್ತೆಯಾಗಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಆರ್ ಜೆಡಿ ಮುಖಂಡ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯ ರೈ ಅವರನ್ನು ಈ ವರ್ಷದ ಮೇ ತಿಂಗಳಿನಲ್ಲಿ ವಿವಾಹವಾಗಿದ್ದರು.
ಆದರೆ ವಿವಾಹವಾಗಿ ಆರು ತಿಂಗಳು ಕಳೆಯುವಷ್ಟರಲ್ಲಿಯೇ ಅವರು ವಿಚ್ಛೇದನದ ನೋಟೀಸ್ ಕಳಿಸಿರುವುದು ಅಚ್ಚರಿ ಮೂಡಿಸಿತ್ತು. ಜೊತೆಗೆ ಇದೀಗ ಇದ್ದಕ್ಕಿದ್ದಂತೆ ಅವರು ನಾಪತ್ತೆಯಾಗಿರುವುದು ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ರಾಜಕೀಯ ಲಾಭಕ್ಕೆ ಮದುವೆ!
ತಮಗೆ ಈ ಮದುವೆ ಇಷ್ಟವಿಲ್ಲದಿದ್ದರೂ ರಾಜಕೀಯ ಲಾಭಕ್ಕಾಗಿ ನಮ್ಮಿಬ್ಬರ(ತೇಜ್ ಪ್ರತಾಪ್-ಐಶ್ವರ್ಯ) ವಿವಾಹವನ್ನು ನಮ್ಮ ಪಾಲಕರು ನಿಶ್ಚಯಿಸಿದ್ದರು. ನಮ್ಮಿಬ್ಬರಿಗೂ ಹೊಂದಾಣಿಕೆಯಾಗುತ್ತಿರಲಿಲ್ಲ. ಹೊಂದಾಣಿಕೆಯಿಲ್ಲದೆ ಹೀಗೆ ಬದುಕುವುದಕ್ಕಿಂತ ದೂರ ಇರುವುದೇ ಒಳಿತು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತೇಜ್ ಪ್ರತಾಪ್ ಹೇಳಿದ್ದರು.

ಲಾಲೂ ಭೇಟಿಯ ನಂತರ ನಿರ್ಧಾರ
ಇತ್ತೀಚೆಗಷ್ಟೇ ರಾಂಚಿಯ ರಾಜೆಂದ್ರ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಂದೆ ಲಾಲೂ ಪ್ರಸಾದ್ ಯಾದವ್ ಅವರನ್ನು ತೇಜ್ ಪ್ರತಾಪ್ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಲಾಲೂ ಅವರ ಸಂಧಾನದ ಮಾತುಗಳು ತೇಜ್ ಪ್ರತಾಪ್ ಅವರಿಗೆ ಇಷ್ಟವಾಗದ ಕಾರಣ ಅವರು ನಂತರ ವಿಚ್ಛೇದನದ ನಿರ್ಧಾರ ಕೈಗೊಂಡರು. ಬಹುಕೋಟಿ ಮೇವು ಹಗರಣದ ಆರೋಪಿಯಾಗಿರುವ ಲಾಲೂ ಪ್ರಸಾದ್ ರಾಂಚಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಪತ್ತೆಯಾಗಿದ್ದು ಏಕೆ?
ಹೊಟೇಲ್ ವೊಂದರಲ್ಲಿ ತಂಗಿದ್ದ ತೇಜ್ ಪ್ರತಾಪ್ ಸಂಜೆಯ ವೇಳೆಗೆ ಹೊಟೇಲ್ ನ ಹಿಂಬದಿ ಬಾಗಿಲಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಹೊಟೇಲ್ ನ ಭದ್ರತಾ ಸಿಬ್ಬಂದಿಗೂ ಈ ವಿಷಯ ಗಮನಕ್ಕೆ ಬಂದಿರಲಿಲ್ಲ. ವಿಚ್ಛೇದನ ನೋಟೀಸ್ ನೀಡಿದ ಎರಡೇ ದಿನದಲ್ಲಿ ತೇಜ್ ಪ್ರತಾಪ್ ಕಣ್ಮರೆಯಾಗಿದ್ದು ಏಕೆ ಎಂಬುದು ಅರ್ಥವಾಗ ವಿಷಯವಾಗಿದೆ.

ನಮ್ಮಿಬ್ಬರದು ವ್ಯತಿರಿಕ್ತ ಅಭಿರುಚಿ
ನಮ್ಮಿಬ್ಬರದೂ ವ್ಯತಿರಿಕ್ತ ಅಭಿರುಚಿಯಾಗಿತ್ತು. ನಾನು ಸರಳ ವ್ಯಕ್ತಿ, ಸರಳ ಬದುಕನ್ನೇ ಇಷ್ಟಪಡುವವನು. ಆದರೆ ಆಕೆ ಆಧುನಿಕ ಹುಡುಗಿ, ದೆಹಲಿಯಲ್ಲಿ ಓದಿದವಳು, ಆಕೆಗೆ ಆ ಬದುಕೇ ಇಷ್ಟವಾಗಿತ್ತು. ಆಕೆಗೆ ಮಹಾನಗರದಲ್ಲೇ ಬದುಕಬೇಕು ಎಂಬ ಆಸೆ ಇತ್ತು. ನನಗೆ ಅದು ಇಷ್ಟವಿರಲಿಲ್ಲ. ಆದ್ದರಿಂದ ವಿಚ್ಛೇದನದ ನೋಟೀಸ್ ನೀಡಿದ್ದೇನೆ. ನವೆಂಬರ್ 29 ರಿಂದ ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ ಎಂದು ತೇಜ್ ಪ್ರತಾಪ್ ಹೇಳಿದ್ದಾರೆ.












Click it and Unblock the Notifications