ಇಂದಿರಾ, ರಾಜೀವ್, ಸೋನಿಯಾ...ಈಗ ರಾಹುಲ್ ಸರದಿ
ಸದ್ಯಕ್ಕೆ ಕಣ್ಣೆದುರಿಗಿರುವ ಎಲ್ಲ ವಿಧಾನಸಭೆ ಚುನಾವಣೆಗಳು ಮುಗಿದುಬಿಡಲಿ. ಅಲ್ಲಿಯವರೆಗೆ ಸೋನಿಯಾ ಗಾಂಧಿಯವರೇ ಅಧ್ಯಕ್ಷೆ ಆಗಿರಲಿ ಎಂಬುದು ಪಕ್ಷದೊಳಗಿನ ಹಿರಿಯರ ಸಲಹೆ.
ಬೆಂಗಳೂರು, ನವೆಂಬರ್ 7: ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು 46 ವರ್ಷದ ರಾಹುಲ್ ಗಾಂಧಿ ವಹಿಸಿಕೊಳ್ಳುವ ದಟ್ಟ ಸಾಧ್ಯತೆಗಳು ಗೋಚರಿಸುತ್ತಿವೆ. ಸೋನಿಯಾ ಗಾಂಧಿಯವರ ಅನಾರೋಗ್ಯ, ಕಾಲ ಬಂದಾಗ ಜವಾಬ್ದಾರಿ ವಹಿಸಿಕೊಳ್ಳುತ್ತೇನೆ ಎಂಬ ರಾಹುಲ್ ಗಾಂಧಿ ಮಾತು, ಬಿಜೆಪಿ ದಿನೇ ದಿನೇ ಬಲಗೊಳ್ಳುತ್ತಿರುವುದು ಪಕ್ಷದೊಳಗೆ ಚರ್ಚೆಗೆ ಕಾರಣವಾಗಿತ್ತು.
ಸದ್ಯಕ್ಕೆ ಕಣ್ಣೆದುರಿಗಿರುವ ಎಲ್ಲ ವಿಧಾನಸಭೆ ಚುನಾವಣೆಗಳು ಮುಗಿದುಬಿಡಲಿ. ಅಲ್ಲಿಯವರೆಗೆ ಸೋನಿಯಾ ಗಾಂಧಿಯವರೇ ಅಧ್ಯಕ್ಷೆ ಆಗಿರಲಿ ಎಂಬುದು ಪಕ್ಷದೊಳಗಿನ ಹಿರಿಯರ ಸಲಹೆ. ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡ ಕೂಡಲೇ ರಾಹುಲ್ ಗಾಂಧಿ ಅವರಿಗೆ ಮೇಲಿಂದ ಮೇಲೆ ಚುನಾವಣೆ ಎದುರಿಸುವ ಸವಾಲು ಕೊಡುವುದು ಬೇಡ ಎಂಬ ಲೆಕ್ಕಾಚಾರವೂ ಇದರಲ್ಲಿ ಕಾಣುತ್ತಿದೆ.[ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ]
ಗಾಂಧಿ ಕುಟುಂಬ ಅಂದರೆ ಇಂದಿರಾ, ರಾಜೀವ್ ಹಾಗೂ ಸೋನಿಯಾ ಪಕ್ಷವನ್ನು ಹೇಗೆ ತಮ್ಮ ಕೈಯೊಳಗೆ ತೆಗೆದುಕೊಂಡು ಮುನ್ನಡೆಸಿದರು, ಆಗಿನ ಸ್ಥಿತಿ ಹೇಗಿತ್ತು? ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ ಎರಡೂ ಪರ್ಯಾಯ ಪದದಂತೆ ಕೆಲವೊಮ್ಮೆ ಕಂಡಿರುವುದು ಏಕೆ? ಹೀಗೆ ಹಲವು ಪ್ರಶ್ನೆಗಳಿವೆ.
ಇಂದಿರಾ ಗಾಂಧಿ
ಇಂದಿರಾ ಗಾಂಧಿ ಮೊದಲನೇ ಸಲ ಅಧ್ಯಕ್ಷೆಯಾಗಿದ್ದು 1959ರಲ್ಲಿ. ಆಗ ಆಕೆಗೆ ನಲವತ್ತೆರಡು ವರ್ಷ ವಯಸ್ಸು. ನೆಹರೂ, ಕಾಮರಾಜ್, ಮೊರಾರ್ಜಿ ದೇಸಾಯಿಯಂಥ ಅತಿರಥ ಮಹಾರಥರಿದ್ದಾಗಲೇ ಒಂದು ವರ್ಷದ ಮಟ್ಟಿಗೆ ಇಂದಿರಾ ಎಐಸಿಸಿ ಅಧ್ಯಕ್ಷೆಯಾದರು. ನೆಹರೂ ಒಬ್ಬಳೇ ಮಗಳು ಇಂದಿರಾ, ಅಪ್ಪನ ಜೊತೆಜೊತೆಗೆ ಇದ್ದು, ಅವರ ಆಲೋಚನೆ, ರಾಜಕಾರಣ, ಕನಸುಗಳನ್ನು ಹಂಚಿಕೊಂಡಿದ್ದರು. ಎಐಸಿಸಿ ಅಧ್ಯಕ್ಷೆಯಾಗಿ ಇಂದಿರಾಗಾಂಧಿ ಅವರಿಗೆ ಅನುಭವ ದೊರೆತಂತಾಯಿತು.
ಪ್ರಧಾನಿಯಾದರು
1964ರಲ್ಲಿ ನೆಹರೂ ತೀರಿಕೊಂಡಾಗ ಮೊದಲ ಬಾರಿಗೆ ಸಂಸತ್ ಗೆ ಆಯ್ಕೆಯಾದ ಇಂದಿರಾ ಗಾಂಧಿ ಮಾಹಿತಿ ಮತ್ತು ಪ್ರಸಾರ ಸಚಿವೆಯಾದರು ತಾಷ್ಕೆಂಟ್ ನಲ್ಲಿ 1966ನೇ ಇಸವಿಯಲ್ಲಿ ಆಗಿನ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ತೀರಿಕೊಂಡಾಗ ಪ್ರಧಾನಿ ಹುದ್ದೆಗೆ ಏರಲು ಅರ್ಹರಿದ್ದ ಹಲವರಿದ್ದರೂ ಆ ಸ್ಥಾನದಲ್ಲಿ ಕೂತಿದ್ದು ಇಂದಿರಾ ಪ್ರಿಯದರ್ಶಿನಿ ಗಾಂಧಿ. 'ಆಕೆ ಗೊಂಬೆ ಇದ್ದ ಹಾಗೆ' ಬೇಕಾದಂತೆ ಆಡಿಸಬಹುದು ಎಂಬ ಮಾತು ಆಗ ಕೇಳಿಬಂದಿತ್ತು.
ಬಾಂಗ್ಲಾ ವಿಮೋಚನೆ ಯುದ್ಧ
ಆದರೆ, ಎಲ್ಲರ ಲೆಕ್ಕಾಚಾರ ಉಲ್ಟಾ ಹೊಡೆಯಿತು. ಇಂದಿರಾ ಗಾಂಧಿ ಬಲಿಷ್ಠವಾಗಿ ಬೆಳೆದರು. 1966ರಿಂದ 1977ರವರೆಗೆ ಪ್ರಧಾನಿ ಗಾದಿಯಲ್ಲಿ ಕೂತರು. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧ ಇಂದಿರಾಗಾಂಧಿ ಅವರಿಗೊಂದು ವರ್ಚಸ್ಸು ತಂದುಕೊಟ್ಟಿತು. ವಿರೋಧ ಪಕ್ಷದವರು ಆಕೆಯನ್ನು 'ದುರ್ಗೆ' ಎಂದರು.
ತುರ್ತು ಪರಿಸ್ಥಿತಿ
1975ರಲ್ಲಿ ಚುನಾವಣೆ ಅಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಕೋರ್ಟ್ ಆಕೆ ವಿರುದ್ಧ ತೀರ್ಪು ನೀಡಿತು. ಜಾಗ ಬಿಟ್ಟು ಹೋಗಿ ಎಂದು ಸೂಚಿಸಿತು. ಆ ನಂತರದ್ದು ಕರಾಳ ಅಧ್ಯಾಯ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಯಿತು. ವಿರೋಧಿಗಳನ್ನು ಹಣಿಯಲು ಬಳಸಿಕೊಳ್ಳಲಾಯಿತು. 1977ರಲ್ಲಿ ತುರ್ತು ಪರಿಸ್ಥಿತಿ ಹಿಂಪಡೆದ ಇಂದಿರಾ ಗಾಂಧಿ ಚುನಾವಣೆಗೆ ಹೋದರು. ದೀರ್ಘ ಕಾಲದ ಆಡಳಿತ, ವರ್ಚಸ್ಸು ಎಲ್ಲವನ್ನೂ ಮೀರಿ ಪಕ್ಷ ಧೂಳೀಪಟವಾಯಿತು. ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರಕಾರ ಅಧಿಕಾರಕ್ಕೆ ಬಂತು.
ಮತ್ತೆ ಅಧಿಕಾರಕ್ಕೆ
ಆದರೆ ಸಂಯುಕ್ತ ಸರಕಾರ ಅಧಿಕಾರಕ್ಕೆ ಬಂದಿದ್ದರಿಂದ ಆಂತರಿಕ ಕಿತ್ತಾಟ, ಭಿನ್ನಾಭಿಪ್ರಾಯದ ಕಾರಣಕ್ಕೆ ಮೂರು ವರ್ಷವಷ್ಟೇ ಅಧಿಕಾರ ನಡೆಸಲು ಸಾಧ್ಯವಾಯಿತು. 1980ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರು ಇಂದಿರಾ ಗಾಂಧಿ. ಫಿರೋಜ್ ಗಾಂಧಿ ಹಾಗೂ ಇಂದಿರಾ ಗಾಂಧಿ ದಂಪತಿಗೆ ಇಬ್ಬರು ಮಕ್ಕಳು. ಸಂಜಯ್ ಹಾಗೂ ರಾಜೀವ್. 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರ ಹಿಡಿದ ವರ್ಷವೇ ವಿಮಾನ ಅಪಘಾತದಲ್ಲಿ ಸಂಜಯ್ ಮೃತಪಟ್ಟರು.
ಹತ್ಯೆಯಾಯಿತು
1984ರಲ್ಲಿ ಅಮೃತ ಸರ್ ನ ಸ್ವರ್ಣ ದೇಗುಲದಲ್ಲಿ ನಡೆದ 'ಆಪರೇಷನ್ ಬ್ಲೂ ಸ್ಟಾರ್' ಪ್ರಧಾನಿ ಇಂದಿರಾ ಗಾಂಧಿ ಅವರ ಮೇಲೆ ಸಿಖ್ಖರು ತಿರುಗಿ ಬೀಳುವಂತೆ ಮಾಡಿತು. ಅದೇ ವರ್ಷದ ಅಕ್ಟೋಬರ್ ನಲ್ಲಿ ಪ್ರಧಾನಿ ನಿವಾಸದಲ್ಲೇ ಅಂಗರಕ್ಷಕರಿಂದಲೇ ಇಂದಿರಾ ಗಾಂಧಿ ಅವರ ಹತ್ಯೆಯಾಯಿತು.
ಜಯಭೇರಿ ಬಾರಿಸಿತು
ಅಂಥ ಸಂದರ್ಭದಲ್ಲಿ ಪ್ರಧಾನಿಯಾದವರು ರಾಜೀವ್ ಗಾಂಧಿ. ಅದೇ ವರ್ಷದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ಗೆಲವು ದಾಖಲಾಗಿ ಉಳಿದಿದೆ. 404 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು ಕೈ ಪಕ್ಷ. ಇನ್ನು 1985ರಿಂದ 1991ರವರೆಗೆ ಎಐಸಿಸಿ ಅಧ್ಯಕ್ಷರಾಗಿದ್ದವರು ರಾಜೀವ್. ಶ್ರೀಲಂಕಾಗೆ ಶಾಂತಿಪಾಲನಾ ಪಡೆ ಕಳುಹಿಸಿದ್ದ ರಾಜೀವ್ ಗಾಂಧಿ ಅವರ ಮೇಲೆ ಎಲ್ ಟಿಟಿಇಗೆ ಸಿಟ್ಟಿತ್ತು.
ರಾಜೀವ್ ಹತ್ಯೆ
1991 ಮೇನಲ್ಲಿ ಚುನಾವಣೆ ಪ್ರಚಾರದ ವೇಳೆ ತಮಿಳುನಾಡಿನ ಪೆರಂಬದೂರಿನಲ್ಲಿ ಎಲ್ ಟಿಟಿಇ ಉಗ್ರರಿಂದ ರಾಜೀವ್ ಹತ್ಯೆಯಾಯಿತು. ಜಗತ್ತಿನಲ್ಲೇ ಮಾನವಬಾಂಬ್ ಆತ್ಮಹತ್ಯಾ ದಾಳಿಗೆ ಬಲಿಯಾದ ಮೊದಲ ಪ್ರಧಾನಿ ರಾಜೀವ್ ಗಾಂಧಿ. ಇಟಲಿ ಮೂಲದ ಸೋನಿಯಾ ಅವರನ್ನು ಮದುವೆಯಾಗಿದ್ದ ರಾಜೀವ್ ಗೆ ರಾಹುಲ್ ಹಾಗೂ ಪ್ರಿಯಾಂಕಾ ಎಂಬಿಬ್ಬರು ಮಕ್ಕಳಿದ್ದರು.
ಎದ್ದು ಬಂದರು ಸೋನಿಯಾ
ಆ ನಂತರ ಏಳು ವರ್ಷ ಅಂದರೆ 1998ರವರೆಗೆ ಪಿ.ವಿ.ನರಸಿಂಹರಾವ್ ಪ್ರಧಾನಿ- ಎಐಸಿಸಿ ಅಧ್ಯಕ್ಷ ಹಾಗೂ ಸೀತಾರಾಂ ಕೇಸರಿ ಎಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಆದಾದ ನಂತರ ಎಐಸಿಸಿ ಅಧ್ಯಕ್ಷೆ ಗಾದಿಗೆ ಏರಿದವರು ಸೋನಿಯಾ ಗಾಂಧಿ. 2004 ಹಾಗೂ 2008ರಲ್ಲಿ ಕಾಂಗ್ರೆಸ್ ಎರಡು ಅವಧಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಸುದೀರ್ಘ ಅವಧಿಗೆ ಎಐಸಿಸಿ ಅಧ್ಯಕ್ಷರಾಗಿರುವ ದಾಖಲೆ ಸೋನಿಯಾ ಅವರ ಹೆಸರಲ್ಲಿದೆ. ಸರಕಾರದಲ್ಲಿ ಯಾವುದೇ ಅಧಿಕೃತ ಹುದ್ದೆ ವಹಿಸಿಕೊಂಡಿರಲಿಲ್ಲ ಅವರು. ಆದರೆ ಭ್ರಷ್ಟಾಚಾರ ಆರೋಪ, ಅಳಿಯ ರಾಬರ್ಟ್ ವಾಧ್ರಾ ಸ್ವಜನ ಪಕ್ಷಪಾತ, ಆಡಳಿತ ವಿರೋಧಿ ಅಲೆ ಮತ್ತಿತರ ಕಾರಣಕ್ಕೆ 2014ರ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತು.
ರಾಹುಲ್ ಗೆ ಪಟ್ಟ ಕಟ್ಟಿ
2014ರ ಚುನಾವಣೆಯಿಂದಲೂ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರನ್ನು ತರಬೇಕು ಎಂಬ ಒತ್ತಡ ಬರುತ್ತಲೇ ಇದೆ. ಈ ಡಿಸೆಂಬರ್ 9ಕ್ಕೆ ಸೋನಿಯಾ ಅವರಿಗೆ 70 ವರ್ಷ ತುಂಬುತ್ತದೆ. ಅವರ ಆರೋಗ್ಯ ಪದೇಪದೇ ಕೈಕೊಡುತ್ತಿದೆ. ರಾಹುಲ್ ನ ಪ್ರಮುಖ ಹುದ್ದೆಗೆ ತರಬೇಕು ಎಂಬ ಒತ್ತಡೆ ಒಂದು ಕಡೆ, ಪ್ರಿಯಾಂಕಾ ಅವರಿಗೆ ಇಂದಿರಾ ವರ್ಚಿಸ್ಸಿದೆ. ಅವರು ರಾಜಕೀಯಕ್ಕೆ ಬರಬೇಕು ಎಂಬ ಕೂಗು ಮತ್ತೊಂದೆಡೆ ಇದೆ. ದಿನದಿನಕ್ಕೂ ಕುಸಿಯುತ್ತಿರುವ ಕಾಂಗ್ರೆಸ್, ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿದೆ. ರಾಹುಲ್ ಗೆ ಪಟ್ಟ ಕಟ್ಟಿ ಈಗಿನ ತೀವ್ರಗೊಂಡಿರುವ ಒತ್ತಡ.
ಮೇನಕಾ-ವರುಣ್
ಇನ್ನೊಂದು ಕಡೆ ಇಂದಿರಾ ಗಾಂಧಿ ಅವರ ಹಿರಿಯ ಮಗ ಸಂಜಯ್ ರ ಹೆಂಡತಿ ಮೇನಕಾ ಗಾಂಧಿ ಬಿಜೆಪಿ ಜತೆಗೆ ಗುರುತಿಸಿಕೊಂಡು ಕೇಂದ್ರ ಸಚಿವೆಯಾಗಿದ್ದಾರೆ. ಇನ್ನು ಈ ದಂಪತಿಯ ಮಗ ವರುಣ್ ಗಾಂಧಿ ಬಿಜೆಪಿಯಿಂದಲೇ ಸ್ಪರ್ಧಿಸಿ ಸಂಸದರಾಗಿದ್ದಾರೆ.