ನರೇಂದ್ರ ಮೋದಿ ಭಜನೆ ಈಗ ಅಡ್ವಾಣಿ ಸರದಿ
ಕೋರ್ಬಾ,ಛತ್ತೀಸ್ ಗಢ, ಸೆ.16: ಮಹತ್ವದ ಬೆಳವಣಿಗೆಯಲ್ಲಿ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಪ್ರಧಾನಿ ಅಭ್ಯರ್ಥಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ.
ಅಡ್ವಾಣಿ ಅವರ ಕೋಪ ತಣ್ಣಗಾಯಿತೇ? ನಿನ್ನೆ ರಾಮಜೇಠ್ಮಲಾನಿ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಏನು ಹೇಳದ ಅಡ್ವಾಣಿ ಅವರು ಇಂದು ಬಹಿರಂಗವಾಗಿ ಮೋದಿ ಪರ ಹೇಳಿಕೆ ನೀಡಿದ್ದು ಏಕೆ? ಅಡ್ವಾಣಿ ಮನ ಓಲೈಕೆಯಲ್ಲಿ ಜೇಠ್ಮಲಾನಿ ಪಾತ್ರವಿದೆಯೇ? ಮುಂತಾದ ಪ್ರಶ್ನೆಗಳ ನಡುವೆ ಅಡ್ವಾಣಿ ಅವರ ಹೇಳಿಕೆಯಿಂದ ಬಿಜೆಪಿ ಕಾರ್ಯಕರ್ತರು ಸಂತುಷ್ಟಗೊಂಡಿದ್ದಾರೆ.
ಗುಜರಾತಿನ ಮುಖ್ಯಮಂತ್ರಿ ಹಾಗೂ ಬಿಜೆಪಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೇರಿಸಿ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಘೋಷಣೆ ಮಾಡಿರುವ ಬಗ್ಗೆ ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದಾರೆ.

ಮೋದಿಗೆ ಬಿಜೆಪಿ ನಾಯಕರು ಪಟ್ಟಾಭಿಷೇಕ ಮಾಡಿದ 72 ಗಂಟೆಗಳ ಅವಧಿಯಲ್ಲೇ ಅಡ್ವಾಣಿ ನಡೆನುಡಿ ಸಂಪೂರ್ಣ ಬದಲಾಗಿದ್ದು, ಮೋದಿಯ ಕೆಲಸ-ಕಾರ್ಯಗಳನ್ನು ಸ್ವತಃ ಅಡ್ವಾಣಿ ಅವರೇ ಗುಣಗಾನ ಮಾಡಿದ್ದಾರೆ.
ಗುಜರಾತ್ ಅಭಿವೃದ್ಧಿಗಾಗಿ ಮೋದಿ ಅವರು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ನಮ್ಮ ಮೊದಲ ಆಯ್ಕೆ, ಒಕ್ಕೊರಲ ಆಯ್ಕೆ ಎಂದಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ನಾಯಕರು ಪ್ರಧಾನಿ ಸ್ಥಾನಕ್ಕೆ ಮೋದಿ ಹೆಸರು ಘೋಷಣೆ ಮಾಡುತ್ತಿದ್ದಂತೆಯೇ ಅಡ್ವಾಣಿ ಮುನಿಸಿಕೊಂಡಿದ್ದರು. ಸಂಸದೀಯ ಸಭೆಗೂ ಬಂದಿರಲಿಲ್ಲ. ತಮ್ಮ ಅಸಮಾಧಾನವನ್ನು ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆಯುವ ಮೂಲಕ ತೋಡಿಕೊಂಡಿದ್ದರು.
ಗೋವಾದಲ್ಲಿ ನಡೆದ ಕಾರ್ಯಕಾರಿಣಿ ಸಭೆಗೂ ಗೈರು ಹಾಜರಾಗಿದ್ದ ಅಡ್ವಾಣಿ ಆಗ ಮೋದಿಯವರನ್ನು ಬಿಜೆಪಿಯ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ಘೋಷಣೆ ಮಾಡಿದ ನಿರ್ಧಾರ ಪ್ರತಿಭಟಿಸಿ ಬಿಜೆಪಿಯ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ನಂತರ ಆರ್ ಎಸ್ ಎಸ್ ಸಂಧಾನದ ಮೂಲಕ 24 ಗಂಟೆಯ ಅವಧಿಯಲ್ಲಿ ರಾಜೀನಾಮೆ ವಾಪಸ್ ಪಡೆದುಕೊಂಡು ಸುಮ್ಮನಾಗಿದ್ದರು. ಈಗ ತಮ್ಮ ಶಿಷ್ಯನನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿರುವುದಕ್ಕೆ ಅಡ್ವಾಣಿ ಸಂತಸ ವ್ಯಕ್ತಪಡಿಸಿ ಕೊನೆಗೂ ದೊಡ್ಡತನ ಮೆರೆದಿದ್ದಾರೆಯೇ? ಅಥವಾ ಪರಿಸ್ಥಿತಿ ಕೈಗೊಂಬೆಯಾಗಿ ವಿಧಿ ಇಲ್ಲದೆ ಪಕ್ಷಕ್ಕಾಗಿ ಮೋದಿ ಪರ ಬ್ಯಾಟಿಂಗ್ ಆರಂಭಿಸಿದ್ದಾರೆಯೇ? ಕಾದು ನೋಡಬೇಕಿದೆ.












Click it and Unblock the Notifications