ದೆಹಲಿ ಮದ್ಯ ಹಗರಣದ ಹಣವನ್ನು ಗೋವಾ ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡ ಎಎಪಿ: ಇಡಿ ಹೇಳಿಕೆಯಲ್ಲಿ ಏನಿದೆ?
ಆಮ್ ಆದ್ಮಿ ಪಕ್ಷವು ದೆಹಲಿ ಮದ್ಯದ ಹಗರಣದಿಂದ ಬಂದ ಹಣವನ್ನು ಗೋವಾದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ಹೇಳಿದೆ. ಇನ್ನೂ ಏನೇನು ಆರೋಪ ಮಾಡಲಾಗಿದೆ ಎಂಬುದನ್ನು ತಿಳಿಯಿರಿ
ನವದೆಹಲಿ, ಫೆಬ್ರುವರಿ 02: ಆಮ್ ಆದ್ಮಿ ಪಕ್ಷವು ದೆಹಲಿ ಮದ್ಯದ ಹಗರಣದಿಂದ ಬಂದ ಹಣವನ್ನು ಗೋವಾದಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಿದೆ ಎಂದು ಜಾರಿ ನಿರ್ದೇಶನಾಲಯ ಗುರುವಾರ ಹೇಳಿದೆ. 'ಈ ಹಗರಣದಿಂದ ಬಂದ ಕಿಕ್ಬ್ಯಾಕ್ ಹಣವನ್ನು ಎಎಪಿಯ ಚುನಾವಣಾ ಪ್ರಚಾರಕ್ಕೆ ಬಳಸಲಾಗಿದೆ ಎಂಬುದಾಗಿ ತಿಳಿದುಬಂದಿದೆ' ಎಂದು ಪ್ರಕರಣದಲ್ಲಿ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಇಡಿ ಹೇಳಿದೆ. 2022ರಲ್ಲಿ ಗೋವಾ ವಿಧಾನಸಭೆ ಚುನಾವಣೆ ನಡೆದಿದ್ದು, ಎಎಪಿ ಎರಡು ಸ್ಥಾನಗಳನ್ನು ಗೆದ್ದಿದೆ.
ಇಡಿ ಪ್ರಕಾರ, ಎಎಪಿಯ ಸಮೀಕ್ಷಾ ತಂಡಗಳ ಭಾಗವಾಗಿದ್ದ ಸ್ವಯಂಸೇವಕರಿಗೆ ಸುಮಾರು 70 ಲಕ್ಷ ರೂಪಾಯಿ ನಗದು ಪಾವತಿ ಮಾಡಲಾಗಿದೆ. ಎಎಪಿಯ ಸಂವಹನ ಉಸ್ತುವಾರಿ ವಿಜಯ್ ನಾಯರ್, 'ಪ್ರಚಾರ ಸಂಬಂಧಿತ ಕೆಲಸದಲ್ಲಿ ತೊಡಗಿರುವ ಕೆಲವು ವ್ಯಕ್ತಿಗಳಿಗೆ ಪಾವತಿಗಳನ್ನು ನಗದು ರೂಪದಲ್ಲಿ ಸ್ವೀಕರಿಸಲು ಹೇಳಿದ್ದಾರೆ' ಎಂದು ತನಿಖಾ ಸಂಸ್ಥೆ ತಿಳಿಸಿದೆ.
ವೈಎಸ್ಆರ್ಸಿಪಿ ಸಂಸದ ಮಾಗುಂಟ ಶ್ರೀನಿವಾಸಲು ರೆಡ್ಡಿ, ಅವರ ಪುತ್ರ ರಾಘವ್ ಮಾಗುಂಟಾ, ಅರಬಿಂದೋ ಫಾರ್ಮಾ ನಿರ್ದೇಶಕ ಪಿ ಶರತ್ ಚಂದ್ರ ರೆಡ್ಡಿ, ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ ಕಲ್ವಕುಂಟ್ಲಾ ಅವರನ್ನೊಳಗೊಂಡ ಗುಂಪಿನಿಂದ ಎಎಪಿ ಪರವಾಗಿ ವಿಜಯ್ ನಾಯರ್ 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಅದು ಹೇಳಿದೆ.

ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ದಿನೇಶ್ ಅರೋರಾ ಅವರೊಂದಿಗೆ ಸಂಚು ರೂಪಿಸಿ ಹೈದರಾಬಾದ್ ಮೂಲದ ಉದ್ಯಮಿ ಅಭಿಷೇಕ್ ಬೋನಪಲ್ಲಿ ಅವರು ಹಣ ವರ್ಗಾವಣೆಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಕೇಂದ್ರ ಸಂಸ್ಥೆ ತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಪೂರಕ ಆರೋಪಪಟ್ಟಿ ಸಲ್ಲಿಸಿದ್ದು, ಗುರುವಾರ ದೆಹಲಿಯ ರೂಸ್ ಅವೆನ್ಯೂ ಕೋರ್ಟ್ಗೆ ಹಾಜರುಪಡಿಸಿದೆ. ಎಎಪಿಯ ವಿಜಯ್ ನಾಯರ್, ಉದ್ಯಮಿಗಳಾದ ಶರತ್ ರೆಡ್ಡಿ, ಬಿನೋಯ್ ಬಾಬು, ಅಭಿಷೇಕ್ ಬೋನಪಲ್ಲಿ ಮತ್ತು ಅಮಿತ್ ಅರೋರಾ ಅವರನ್ನು ಪೂರಕ ಚಾರ್ಜ್ ಶೀಟ್ನಲ್ಲಿ ಹೆಸರಿಸಲಾಗಿದೆ.
ಆರೋಪಪಟ್ಟಿಯಲ್ಲಿ ಮನೀಶ್ ಸಿಸೋಡಿಯಾ ಹೆಸರು ಇರಲಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ.

ಏತನ್ಮಧ್ಯೆ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ಮುಖ್ಯಸ್ಥರು ಇಡಿ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದು ಸಂಪೂರ್ಣವಾಗಿ ಕಾಲ್ಪನಿಕ ಎಂದು ಹೇಳಿದ್ದಾರೆ.
ದೆಹಲಿಯ ಎಲ್-ಜಿ ವಿನಯ್ ಕುಮಾರ್ ಸಕ್ಸೇನಾ ಅವರು ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಆ ನಂತರ ಮದ್ಯದ ಹಗರಣವು ಭಾರೀ ಸದ್ದು ಮಾಡಿತ್ತು.
ನವೆಂಬರ್ 17, 2021 ರಿಂದ ಜಾರಿಗೆ ಬಂದ ದೆಹಲಿ ಅಬಕಾರಿ ನೀತಿಯನ್ನು ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಜುಲೈ 2022 ರಲ್ಲಿ ರದ್ದುಗೊಳಿಸಿತು. ಹಗರಣದಲ್ಲಿನ ಹಣದ ಜಾಡು ಹಿಡಿದು ಇಡಿ ತನಿಖೆ ನಡೆಸುತ್ತಿದೆ.












Click it and Unblock the Notifications