ಎಲ್ಲಿಯ ಶಾಶ್ವತಿ, ಎಲ್ಲಿಯ ಕಿರಣ್; ಎಲ್ಲಿಯ ಅಕ್ಷಯ್, ಎಲ್ಲಿಯ ಅಮೀರ್!
ಬೆಂಗಳೂರು, ನವೆಂಬರ್ 24 : ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ 'ಅಸಹಿಷ್ಣು' ಭಾರತದಿಂದ ಬೇರೆ ದೇಶಕ್ಕೆ ಹೋಗುವ ಮಾತನಾಡಿದ ಬಾಲಿವುಡ್ ನಟ ಅಮೀರ್ ಖಾನ್ ವಿರುದ್ಧ 'ಅಸಹಿಷ್ಣುತೆ' ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. 'ಯಾಕಾದ್ರೂ ಆಡಿದ್ನಪ್ಪಾ ಈ ಮಾತು' ಎಂದು ಅಮೀರ್ ಎಂದುಕೊಳ್ಳುವ ಮಟ್ಟಿಗೆ ಟೀಕಾಸ್ತ್ರಗಳು ಅವರ ಮೇಲೆ ಎಸೆಯಲಾಗುತ್ತಿದೆ.
ಸರ್ಫರೋಶ್, ಲಗಾನ್, ಮಂಗಲ್ ಪಾಂಡೆಯಂಥ ದೇಶಭಕ್ತಿಯ ಚಿತ್ರಗಳನ್ನು ನೀಡಿರುವ ಅಮೀರ್ ಅವರು ಮನದಾಳದ ಮಾತು ಆಡಿದ್ದರೂ, 'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಎಂಬ ಗಾದೆಯಂತೆ, ಆಡಿದ ಮಾತಿನಿಂದಾಗಿ ಅನಗತ್ಯ ವಿವಾದ ಅವರ ಬೆನ್ನು ಬಿದ್ದಿದೆ. ಈ ನಡುವೆ ಅಮೀರ್ ವಿರುದ್ಧ ದೆಹಲಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. [ಅಮೀರ್ ಗೆ ಅಸಹಿಷ್ಣುತೆ ಬಿಸಿ ಏಕೆ?]
ಅಮೀರ್ ಮತ್ತು ಅವರ ಹೆಂಡತಿ ಕಿರಣ್ ರಾವ್ ಅವರು ದೇಶ ಬಿಟ್ಟು ಹೋಗುವ ನಿರ್ಧಾರ ಬೆಂಬಲಿಸಿ ಎಂದು ಚೇಂಜ್.ಆರ್ಗ್ ನಲ್ಲಿ ಅರ್ಜಿಯನ್ನು ಹೂಡಲಾಗಿದ್ದು, ಅಮೀರ್ ವಿರುದ್ಧ ಸಿಡಿದೆದ್ದವರು ಅರ್ಜಿಗೆ ಸಹಿ ಹಾಕುತ್ತಿದ್ದಾರೆ. ಭಾರತದಲ್ಲಿರುವವರು ಸುರಕ್ಷಿತವಾಗಿರಬೇಕು. ಅಸುರಕ್ಷಿತತೆ ಅನುಭವಿಸುತ್ತಿರುವವರು ದೇಶ ಬಿಟ್ಟು ತೊಲಗಲಿ, ಬೇರೆಡೆ ನೆಲೆ ಕಂಡುಕೊಳ್ಳಲಿ ಎಂದು ಅರ್ಜಿಯಲ್ಲಿ ಹೇಳಲಾಗಿದೆ. [ಬಿರುಗಾಳಿ ಎಬ್ಬಿಸಿರುವ ಅಮೀರ್ ಮಾತು] [ಭಾರತದಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದೆಯೆ?]

ಅಮೀರ್ ವಿದೇಶ ಪ್ರಯಾಣಕ್ಕೆ ಟಿಕೆಟ್!
ಮಿ. ಪರ್ಫೆಕ್ಟ್ ಹೇಳಿರುವ ಬಾಲಿಶ ಹೇಳಿಕೆ ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯದ ವಸ್ತುವೂ ಆಗಿದೆ. ಹಲವರು, ಬೇಕಿದ್ದರೆ ಅಮೀರ್ ಯಾವುದೇ ದೇಶವನ್ನು ಆಯ್ದುಕೊಳ್ಳಲಿ, ಅವರ ಬಳಿ ಹಣವಿಲ್ಲದಿದ್ದರೆ ಅವರ ವಿಮಾನ ಟಿಕೆಟ್ ಗಾಗಿ ನಾವು ಹಣ ನೀಡುತ್ತೇವೆ ಎಂದು ಕೆಲವರು ಟ್ವಿಟ್ಟರ್ ನಲ್ಲಿ ಕೊಂಕು ನುಡಿದಿದ್ದಾರೆ.

ಎಲ್ಲಿಯ ಕಿರಣ್, ಎಲ್ಲಿಯ ಶಾಶ್ವತಿ?
ದೆಹಲಿಯಲ್ಲಿ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ ಅಮೀರ್ (ಅವರ ಹೆಂಡತಿ) ನುಡಿದ ದೇಶಬಿಡುವ ನುಡಿಗಳನ್ನು, ಇತ್ತೀಚೆಗೆ ಧೀರವಾಗಿ ಹೋರಾಡಿ ಹುತಾತ್ಮನಾದ ಕರ್ನಲ್ ಸಂತೋಷ್ ಮಹದಿಕ್ ಅವರ ಹೆಂಡತಿ ಶಾಶ್ವತಿ ಮಹದಿಕ್ ಅವರ ಮಾತುಗಳೊಂದಿಗೆ ಹೋಲಿಸಿ ಛೀಮಾರಿ ಹಾಕಲಾಗುತ್ತಿದೆ.

ದೇಶಕ್ಕಾಗಿ ಮಕ್ಕಳ ಅರ್ಪಣೆ ಎಂದ ತಾಯಿ
"ಮಕ್ಕಳ ಸುರಕ್ಷತೆಗಾಗಿ ಈ ದೇಶವನ್ನೇ ಬಿಟ್ಟು ಹೋದರೆ ಹೇಗೆ?" ಎಂದು ಅಮೀರ್ ಹೆಂಡತಿ ಕಿರಣ್ ರಾವ್ ಹೇಳಿದ್ದರೆ, "ದೇಶದ ರಕ್ಷಣೆಗಾಗಿ ನನ್ನ ಮಕ್ಕಳನ್ನು ಭಾರತೀಯ ಸೇನೆಗೆ ಸೇರಿಸುತ್ತೇನೆ" ಎಂದು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರೊಡನೆ ಹೋರಾಡಿ ಮಡಿದ ಕರ್ನಲ್ ಸಂತೋಷ್ ಹೆಂಡತಿ ಶಾಶ್ವತಿ ಹೆಮ್ಮೆಯಿಂದ ಹೇಳಿದ್ದಾರೆ. ಯಾರ ಮಾತು ತೂಕದ್ದು ನೀವೇ ತುಲನೆ ಮಾಡಿ!

ಅಮೀರ್ ತೋರುವ ಉತ್ಪನ್ನ ಕೊಳ್ಳಲ್ಲ!
ಅಮೀರ್ ಹೇಳಿಕೆ ವಿರುದ್ಧದ ಪ್ರತಿಭಟನೆ ಯಾವ ಮಟ್ಟಕ್ಕೆ ಹೋಗುತ್ತಿದೆ ಎಂಬುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. "ಅಮೀರ್ ಖಾನ್ ಬ್ರಾಂಡ್ ಅಂಬಾಸಿಡರ್ ಆಗಿರುವ ಯಾವ ಉತ್ಪನ್ನವನ್ನೂ ನಾನು ಸ್ನಾಪ್ ಡೀಲ್ ನಲ್ಲಿ ಕೊಳ್ಳುವುದಿಲ್ಲ. ಸ್ನೇಹಿತರೇ, ನೀವೂ ಹಾಗೆಯೇ ಮಾಡಿ" ಎಂದು ಸುಶೀಲ್ ಚೌಹಾಣ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಅಕ್ಷಯ್ ಹೀರೋ, ಅಮೀರ್ ಜೀರೋ
ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರಿಂದ ಸಂಕಷ್ಟದಲ್ಲಿರುವ ರೈತರ ಕುಟುಂಬಗಳಿಗೆ 90 ಲಕ್ಷ ರು. ದಾನ ಮಾಡಿದ ಅಕ್ಷಯ್ ಕುಮಾರ್ ಎಲ್ಲಿ, 'ಸತ್ಯಮೇವ ಜಯತೆ' ಎನ್ನುತ್ತ ಮೊಸಳೆ ಕಣ್ಣೀರು ಸುರಿಸುತ್ತಿರುವ ಈ ಅಮೀರ್ ಖಾನ್ ಎಲ್ಲಿ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಂತಮೂರ್ತಿಗಳೂ ಹೀಗೇ ಅಂದಿದ್ದರು
ಹಿಂದೆ, ಇದೇ ರೀತಿ ದೇಶ ತೊರೆಯುವ ಮಾತನಾಡಿದ್ದ ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡ ಸಾಹಿತಿ, ದಿವಂಗತ ಯು.ಆರ್. ಅನಂತಮೂರ್ತಿ ಅವರು ಕೂಡ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದರು. ನರೇಂದ್ರ ಮೋದಿ ಪ್ರಧಾನಿಯಾದರೆ ನಾನು ದೇಶವನ್ನೇ ತೊರೆಯುತ್ತೇನೆ ಎಂದು ಹೇಳಿಕೆ ನೀಡಿದ್ದರು.












Click it and Unblock the Notifications