ಸಬ್ಸಿಡಿ ಎಲ್ ಪಿಜಿಗೆ ಆಧಾರ್ ಕಡ್ಡಾಯ : ಮೊಯ್ಲಿ
ಬೆಂಗಳೂರು, ಜ.19: ಸಬ್ಸಿಡಿ ದರದ ಎಲ್ ಪಿಜಿ ಮಧ್ಯವರ್ತಿಗಳ ಪಾಲಾಗದೆ ಗ್ರಾಹಕರಿಗೆ ಸಿಗಬೇಕು ಎಂಬ ಉದ್ದೇಶದಿಂದ ಆಧಾರ್ ಗುರುತಿನ ಚೀಟಿ ಮತ್ತು ಬ್ಯಾಂಕ್ ಖಾತೆ ಕಡ್ಡಾಯಗೊಳಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಉಂಟಾಗುವ ಅಡೆತಡೆಗಳನ್ನು ನಿವಾರಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಕೇಂದ್ರ ಸಚಿವ ಎಂ. ವೀರಪ್ಪಮೊಯ್ಲಿ ಹೇಳಿದ್ದಾರೆ. ಆದರೆ, ಆಧಾರ್ ಕಡ್ಡಾಯಗೊಳಿಸುವ ಬಗ್ಗೆ ಪ್ರಕರಣ ಇನ್ನೂ ಸುಪ್ರೀಂಕೋರ್ಟಿನಲ್ಲಿ ವಿಚಾರಣೆ ಹಂತದಲ್ಲಿದೆ.
ಮಧ್ಯವರ್ತಿಗಳ ಹಾವಳಿಯಿಂದ ಸರಕಾರದ ಸಹಾಯಧನ ಗ್ರಾಹಕರಿಗೆ ತಲುಪುತ್ತಿಲ್ಲ. ದೇಶದಲ್ಲಿ 15 ಕೋಟಿ ಗ್ಯಾಸ್ ಸಿಲಿಂಡರ್ ಬಳಕೆದಾರರಿದ್ದಾರೆ ಎಂಬ ಲೆಕ್ಕವಿದೆ. ಆದರೆ ನೈಜ ಗ್ರಾಹಕರಿರುವುದು ಕೇವಲ 10 ಕೋಟಿ ಮಾತ್ರ. 5 ಕೋಟಿ ನಕಲಿ ಗ್ರಾಹಕರಿಗೆ ಸರಕಾರ ಕೊಡುತ್ತಿರುವ 12-15 ಕೋಟಿಯಷ್ಟು ಸಹಾಯಧನ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ಮೋಯ್ಲಿ ಹೇಳಿದರು.
ಪೆಟ್ರೋಲಿಯಂ ದರ ಹೆಚ್ಚಾದಾಗ ಗ್ರಾಹಕರಿಗೆ ಹೊರೆಯಾಗದಂತೆ ಸರಕಾರ ಸಹಾಯಧನ ನೀಡುತ್ತದೆ. ಈಗ ಪ್ರತಿ ಸಿಲಿಂಡರ್ಗೆ 800 ರೂ. ನೀಡಲಾಗುತ್ತದೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಅದು ಗ್ರಾಹಕರಿಗೆ ತಲುಪುತ್ತಿಲ್ಲ. ಅದನ್ನು ತಪ್ಪಿಸಲು ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದಿದವರಿಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ವಿತರಿಸಲಾಗುವುದು. ಗ್ರಾಹಕರು ಇದನ್ನು ಅರಿಯಬೇಕು ಎಂದರು.

''ಯಾವ ಜಿಲ್ಲೆಯಲ್ಲಿ ಶೇ.80ರಷ್ಟು ಆಧಾರ್ ಕಾರ್ಡ್ ಹಾಗೂ ಶೇ.65ರಷ್ಟು ಬ್ಯಾಂಕ್ ಖಾತೆ ಆಗಿದೆಯೋ ಅಂತಹ ಜಿಲ್ಲೆಗಳಲ್ಲಿ ಮಾತ್ರ ಈ ಯೋಜನೆ ಜಾರಿಗೆ ತರಲಾಗುವುದು. ಅದಿಲ್ಲದ ಜಿಲ್ಲೆಗಳಲ್ಲಿ ಈಗಿರುವಂತೆಯೇ ಮುಂದುವರಿಯುತ್ತದೆ. ಆದರೆ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೊಂದುವಲ್ಲಿ ಗ್ರಾಹಕರಿಗಾಗುತ್ತಿರುವ ಅಡೆತಡೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಶೀಘ್ರದಲ್ಲೇ ಅದು ಬಗೆಹರಿಯಲಿದೆ,'' ಎಂದು ತಿಳಿಸಿದರು.
12 ಸಿಲಿಂಡರ್ ನಿರ್ಧಾರ: ಗ್ರಾಹಕರಿಗೆ ಸದ್ಯ ವಾರ್ಷಿಕ 9 ಸಿಲಿಂಡರ್ಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುತ್ತಿದೆ. ಇದನ್ನು 12ಕ್ಕೇರಿಸುವ ಬಗ್ಗೆ ಚಿಂತಿಸಲಾಗಿದೆ. ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಧಾರವಾಗಲಿದೆ ಎಂದು ಮೊಯ್ಲಿ ಹೇಳಿದರು.ರಾಹುಲ್ ಬೇಡಿಕೆಯಂತೆ ಸಬ್ಸಿಡಿ ದರದಲ್ಲಿ ಒದಗಿಸುವ ಎಲ್ಪಿಜಿ ಸಿಲಿಂಡರುಗಳ ಸಂಖ್ಯೆ ಹೆಚ್ಚಳಕ್ಕೆ ಮುಂದಾಗಿದೆ.












Click it and Unblock the Notifications