ನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಹಣ ನೀಡದಿದ್ದರೆ ಬಾಂಬ್ ಬ್ಲಾಸ್ಟ್, ಜೀವ ಹಾನಿ ಬೆದರಿಕೆ ಹಾಕಿದ್ದ ದಾವುದ್ ಗ್ಯಾಂಗ್ ಸದಸ್ಯ
ಬೆಂಗಳೂರು, ಜನವರಿ 16: ಕರ್ನಾಟಕ ರಾಜ್ಯದ ಬೆಳಗಾವಿ ಜೈಲಿನಿಂದ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಪ್ರಕರಣದಲ್ಲಿ ಹೊಸತೊಂದು ಟ್ವಿಸ್ಟ್ ಸಿಕ್ಕಿದ್ದು, ಮಹತ್ವದ ಸತ್ಯಾಂಶಗಳು ಬಯಲಾಗಿವೆ.
ನಿತಿನ್ ಗಡ್ಕರಿ ಅವರ ನಾಗಪುರದ ಕಚೇರಿಗೆ ಕರೆ ಮಾಡಿದ್ದ ಆರೋಪಿಗಳು ತಾವು ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಗ್ಯಾಂಗ್ನ ಸದಸ್ಯ ಎಂದು ಹೇಳಿಕೊಂಡು ಜೀವ ಬೆದರಿಕೆ ಹಾಕಿದ್ದಾರೆ. ಬಾಂಬ್ ಬ್ಲಾಸ್ಟ್ ಮೂಲಕ ಜೀವ ತೆಗೆಯುವ ಬಗ್ಗೆಯು ಬೆದರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ 100 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂಬ ಸತ್ಯ ವಿಚಾರಣೆಯಿಂದ ಬಯಲಾಗಿದೆ ಎಂದು ನಾಗಪುರದ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಕೊಲೆ ಸೇರಿದಂತೆ ಮೂರು ಪ್ರಕರಣದಲ್ಲಿ ಜಯೇಶ್ ಪೂಜಾರಿ ಎಂಬಾತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಈತನೇ ಶುಕ್ರವಾರ ಬೆಳಗಾವಿ ಹಿಂಡಲಗಾ ಜೈಲಿನೊಳಗಿದ್ದೇ ನಾಗಪುರದ ಕಚೇರಿಗೆ ಕರೆ ಮಾಡಿ ಕೇಂದ್ರ ಸಚಿವರಿಗೆ ಜೀವ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಆದರೆ ಅತನಿಗೆ ಮೊಬೈಲ್ ಹೇಗೆ ಸಕ್ಕಿದೆ. ಯಾರು ನೀಡಿದ್ದಾರೆ?. ಎಂಬಿತ್ಯಾದಿ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅದನ್ನು ಗಂಭೀರವಾಗಿ ಪರಿಗಣಿಸಿದ ಮಹಾರಾಷ್ಟ್ರದ ನಾಗಪುರ ಪೊಲೀಸರು ಸಾಕ್ಷ್ಯಾಧಾರಗಳು ಬೆನ್ನು ಹತ್ತಿ ಶನಿವಾರ ಬೆಳಗಾವಿಗೆ ಆಗಮಿಸಿ ತನಿಖೆ ನಡೆಸಿದ್ದಾರೆ ಈ ಕುರಿತು ಪಿಟಿಐ ವರದಿ ಮಾಡಿದೆ.
ವರದಿಯಲ್ಲಿ ತಿಳಿಸಿರುವ ಪ್ರಕಾರ, ಜೈಲಿನಿಂದ ಕರೆ ಮಾಡಿದವರನ್ನು ಕೊಲೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಮರಣದಂಡನೆ ಶಿಕ್ಷೆಗೆ ಒಳಗಾದಿ ಖೈದಿ ಜಯೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ತನಿಖೆ ಬಾಕಿ ಇರುವ ಕಾರಣಕ್ಕೆ ಬೆದರಿಕೆ ಕರೆಗಳ ಹಿಂದಿನ ಉದ್ದೇಶವನ್ನು ಪೊಲೀಸರು ಬಹಿರಂಗಪಡಿಸಿಲ್ಲ. ನಾಗಪುರ ಪೊಲೀಸರ ತಂಡವು ಸೋಮವಾರ ಜಯೇಶ್ ಪೂಜಾರಿ ವಿಚಾರಣೆಗೆ ಒಳಪಡಿಸಲು ವಶಕ್ಕೆ ನೀಡುವಂತೆ ಕೋರಿ ಬೆಳಗಾವಿಯ ಜೈಲು ಆಡಳಿತಕ್ಕೆ ಮನವಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಗಡ್ಕರಿ ಕಚೇರಿಗೆ ಒಂದೇ ದಿನ 3 ಬೆದರಿಕೆ ಕರೆಗಳು
ನಿತಿನ್ ಗಡ್ಕರಿ ಅವರ ನಾಗಪುರ್ ಖಮ್ಲಾ ಪ್ರದೇಶದಲ್ಲಿರುವ ಕಚೇರಿಗೆ ಶನಿವಾರ ಬೆಳಗ್ಗೆ 11.25ಗಂಟೆಯಿಂದ ಮಧ್ಯಾಹ್ನ 12.30 ರವರೆಗೆ ಸಾರ್ವಜನಿಕ ಸಂಪರ್ಕ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ ಕನಿಷ್ಠ ಮೂರು ಜೀವ ಬೆದರಿಕೆ ಕರೆಗಳು ಬಂದಿವೆ. ಈ ಕಾರಣಕ್ಕೆ ಬಿಜೆಪಿಗೆ ಸೇರಿದ ನಾಗಪುರದ ಸಂಸದರ ಮನೆ ಮತ್ತು ಕಚೇರಿಗೆ ಭಾರೀ ಭದ್ರತೆ ಒದಗಿಸಲಾಗಿದೆ.
ಕರೆ ಮಾಡಿದ ವ್ಯಕ್ತಿ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ಕೇಂದ್ರ ಸಚಿವರಿಗೆ ಹಾನಿ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯವಾಗಿ ಕರೆ ಮಾಡಿದ ವ್ಯಕ್ತಿ ತಾನು ಡಿ ಗ್ಯಾಂಗ್ನ ಸದಸ್ಯ ಎಂದು ಹೇಳಿದ್ದಲ್ಲದೇ, 100 ಕೋಟಿಗೆ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ಬೇಡಿಕೆಯನ್ನು ಈಡೇರಿಸದಿದ್ದರೆ ಬಾಂಬ್ ಬ್ಲಾಸ್ಟ್ ಮೂಲಕ ಸಚಿವರಿಗೆ ಜೀವಕ್ಕೆ ಹಾನಿ ಮಾಡುವ ಬಗ್ಗೆ ತಿಳಿಸಿದ್ದಾನೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.