2022-23ರಲ್ಲಿ ದಾಖಲಾಗಿರುವ ಯುಪಿಐ ವಂಚನೆ ಪ್ರಕರಣಗಳು ಬರೋಬ್ಬರಿ 95,000!
ನವದೆಹಲಿ, ಮಾರ್ಚ್. 23: ಈಗೇನಿದ್ದರೂ ಕ್ಯಾಶ್ ಲೇಸ್ ದುನಿಯಾ ನಮ್ಮದು ಅಂತ ಬೀಗುವವರು, ತಮ್ಮ ಜೇಬುಗಳಲ್ಲಿ ಒಂದು ರೂಪಾಯಿ ಇಲ್ಲದೆ ಮೋಬೈಲ್ ಕೈಯಲ್ಲಿ ಹಿಡಿದು ಹೋಗುವವರು ಒಮ್ಮೆ ಇತ್ತ ಗಮನಿಸಿ. ಏಕೀಕೃತ ಪಾವತಿ ವ್ಯವಸ್ಥೆ( (ಯುಪಿಐ) ವಹಿವಾಟು ನಿಮ್ಮ ಜೇಬುಗಳಿಗೆ ಕತ್ತರಿ ಹಾಕಬಹುದು.
ಹೌದು, ಪೋನ್ ಪೇ, ಗೂಗಲ್ ಪೇ, ವಾಟ್ಸಾಪ್ ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ವಿಧಾನಗಳ ಮೂಲಕ ಹಣಕಾಸಿನ ವ್ಯವಹಾರ ನಡೆಸುವ ಮುನ್ನ ನಮ್ಮ ಎಚ್ಚರ ನಮಗೆ ಇರಬೇಕು. ಏಕೆಂದರೇ ದೇಶದಲ್ಲಿ ಕಳೆದ ಒಂದೇ ವರ್ಷದಲ್ಲಿ ದಾಖಲಾಗಿರುವ ಯುಪಿಐ ವಂಚನೆ ಪ್ರಕರಣಗಳು ಬರೋಬ್ಬರಿ 95,000 ಕ್ಕೂ ಹೆಚ್ಚು. ಅಂದರೆ ಹಹಿತ್ತಿರ ಹತ್ತಿರ ಒಂದು ಲಕ್ಷ ಪ್ರಕರಣಗಳು.

2022-23 ರಲ್ಲಿ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ವಹಿವಾಟಿನ 95,000 ಕ್ಕೂ ಹೆಚ್ಚು ವಂಚನೆ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಸಂಸತ್ತಿಗೆ ಮಾಹಿತಿ ನೀಡಿದೆ. ಈ ಹಿಂದಿನ ವರ್ಷಗಳಲ್ಲಿ ಕೊಂಚ ಕಡಿಮೆ ಪ್ರಮಾಣದಲ್ಲಿದ್ದ ವಂಚನೆ ಪ್ರಕರಣಗಳು 2022-23 ರಲ್ಲಿ ಅತಿ ಹೆಚ್ಚು ದಾಖಲಾಗಿವೆ. ಇದು ಅಧಿಕೃತವಾಗಿ ದಾಖಲಾಗಿರುವವರು. ಆದರೆ, ದಾಖಲಾಗದೆ ಇರುವ ಪ್ರಕರಣಗಳು ಇನ್ನೇಷ್ಟೋ.
ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಹೆಚ್ಚು ಬಳಕೆಗೆ ಬಂದ ನಂತರ 2020-21 ರಲ್ಲಿ 77,000 ಪ್ರಕರಣಗಳು ಮತ್ತು 2021 - 22 ರಲ್ಲಿ 84,0000 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸಂಸತ್ತಿಗೆ ತಿಳಿಸಿದೆ. ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಪಾವತಿ ವಂಚನೆ ಪ್ರಕರಣಗಳ ಬಗ್ಗೆ ಸಂಸತ್ತಿಗೆ ಮಾಹಿತಿ ನೀಡುವಾಗ ಕೇಂದ್ರ ಹಣಕಾಸು ಸಚಿವಾಲಯ ಈ ದಾಖಲೆಗಳನ್ನು ನೀಡಿದೆ.
ಇನ್ನು, ದೇಶದಲ್ಲಿ ಯುಪಿಐ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿರುವದಕ್ಕೆ ಸಾಕ್ಷಿಯಾಗಿ ಕಳೆದ ವರ್ಷವೊಂದರಲ್ಲೇ 125 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಯುಪಿಐ ವಹಿವಾಟುಗಳು ಪೂರ್ಣಗೊಂಡಿವೆ ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (ಎನ್ಪಿಸಿಐ) ಅಂಕಿಅಂಶಗಳು ಬಹಿರಂಗಪಡಿಸಿವೆ. ಇದು ಕಳೆದ ಮೂರು ವರ್ಷಗಳಿಂದ ಯುಪಿಐ ಬಳಕೆದಾರರ ಸಂಖ್ಯೆಯಲ್ಲೂ ಏರಿಕೆಯಾಗಿದೆ.

ಭಾರತೀಯ ಡಿಜಿಟಲ್ ಪಾವತಿ ವ್ಯವಸ್ಥೆಯು ಜಾಗತಿಕ ಸ್ವೀಕಾರವನ್ನು ಪಡೆದುಕೊಂಡಿದೆ. ಸಿಂಗಾಪುರ್, ಯುಎಇ, ಮಾರಿಷಸ್, ನೇಪಾಳ ಮತ್ತು ಭೂತಾನ್ ಯುಪಿಐ ಅನ್ನು ಅಳವಡಿಸಿಕೊಂಡ ದೇಶಗಳಲ್ಲಿ ಸೇರಿವೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. ಭಾರತದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಪಾವತಿ ವಂಚನೆಯ ಪ್ರಕರಣಗಳ ಕುರಿತು ರಾಜ್ಯಸಭಾ ಸಂಸದ ಕಾರ್ತಿಕೇಯ ಶರ್ಮಾ ಅವರು ಎತ್ತಿರುವ ಪ್ರಶ್ನೆಗೆ ಉತ್ತರವಾಗಿ ಈ ಡೇಟಾವನ್ನು ಬಹಿರಂಗಪಡಿಸಲಾಗಿದೆ.
"ಯುಪಿಐ ಅಪ್ಲಿಕೇಶನ್ಗಳು ಬಳಕೆದಾರರು ಅಪರಿಚಿತ ಫಲಾನುಭವಿಗೆ ಪಾವತಿಯನ್ನು ಪ್ರಾರಂಭಿಸುವ ಅಪ್ಲಿಕೇಶನ್ನಲ್ಲಿ ಮಾಹಿತಿಯನ್ನು ಒದಗಿಸುತ್ತವೆ. ಇದು ಡಿವೈಸ್ -ಬೈಂಡಿಂಗ್ ಪರಿಕಲ್ಪನೆಯಲ್ಲಿ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಬಳಕೆದಾರರ ಮೊಬೈಲ್ ಸಂಖ್ಯೆಯು ಅವರ ಮೊಬೈಲ್ ಡಿವೈಸ್ನೊಂದಿಗೆ ಜೋಡಣೆಯಾಗಿರುತ್ತದೆ. ಇದರಿಂದ ಇಲ್ಲಿ ಯಾರಿಗೂ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ" ಹಣಕಾಸು ಖಾತೆ ರಾಜ್ಯ ಸಚಿವ ಡಾ ಭಾಗವತ್ ಕರಾಡ್ ಸಂಸತ್ತಿನಲ್ಲಿ ತಿಳಿಸಿದ್ದಾರೆ.
ಕುಂದುಕೊರತೆಗಳನ್ನು ದಾಖಲಿಸಲು ಸರ್ಕಾರವು ರಾಷ್ಟ್ರೀಯ ಸೈಬರ್ ಕ್ರೈಮ್ ವರದಿ ಮಾಡುವ ಪೋರ್ಟಲ್ನೊಂದಿಗೆ ಸಂಪರ್ಕದಲ್ಲಿದೆ ಎಂದು ಸಚಿವ ಡಾ ಭಾಗವತ್ ಕರಾಡ್ ತಿಳಿಸಿದ್ದಾರೆ.












Click it and Unblock the Notifications