ಪರಿಹಾರ ಮೊತ್ತ, ಪಿಂಚಣಿ ಬಗ್ಗೆ ಕೇಂದ್ರ ಸರ್ಕಾರದಿಂದ ಶುಭ ಸುದ್ದಿ
ನವದೆಹಲಿ, ಜನವರಿ 05: 2021ರಲ್ಲಿ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಕಂಡು ಬಂದಿದೆ. 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಸಂಬಳ ಏರಿಕೆಯಾಗಲಿದೆ. ಮುಂಬರುವ ಬಜೆಟ್ ಅಧಿವೇಶನದಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಸಾಧ್ಯತೆಯಿದೆ.
ಕೊವಿಡ್ 19 ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗದ ಕಾರಣ ನೌಕರರಿಗೆ ನಿರೀಕ್ಷಿತ ಮಟ್ಟದಲ್ಲಿ ಸಂಬಳ ಏರಿಕೆ, ಭತ್ಯೆ ಸೌಲಭ್ಯಗಳು ಸಿಕ್ಕಿಲ್ಲ. ಆದರೆ, ಈಗ ಹುದ್ದೆಯಲ್ಲಿರುವಾಗ ಅಪಘಾತವಾಗಿ ಅಂಗವೈಕಲ್ಯಕ್ಕೆ ಒಳಪಡುವ ಉದ್ಯೋಗಿಗೆ ಸಿಗಲಿರುವ ಪರಿಹಾರ ಮೊತ್ತದ ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ರಾಷ್ಟ್ರೀಯ ಕನಿಷ್ಠ ವೇತನ (National minimum floor wage) ಬದಲಾವಣೆಗೆ ಸೂಚಿಸಿರುವ ಸಲಹಾ ಮಂಡಳಿಯ ಶಿಫಾರಸ್ಸಿನ ಅನ್ವಯ ಕೇಂದ್ರ ಸರ್ಕಾರಿ ನೌಕರರ ಸಂಬಳ ಶೇ28ರಷ್ಟು ಏರಿಕೆಯಾಗುವ ನಿರೀಕ್ಷೆಯಿತ್ತು. ಆದರೆ, ಶೇ 21ಕ್ಕೆ ನಿಗದಿ ಪಡಿಸಿ ರಾಜ್ಯ ಸರ್ಕಾರಿ ನೌಕರರಿಗೂ ಹಂತ ಹಂತವಾಗಿ ಜಾರಿಗೊಳಿಸಲು ಸೂಚಿಸಲಾಗಿದೆ. 7ನೇ ವೇತನ ಆಯೋಗದ ಅನ್ವಯ ರಾಜ್ಯ ಸರ್ಕಾರಿ ನೌಕರರಿಗೂ ಸಮಾನ ವೇತನ, ಭತ್ಯೆ, ಕೆಲಸದ ಅವಧಿ, ರಜಾ ದಿನ ನಿಗದಿ ಮಾಡುವಂತೆ ಬೇಡಿಕೆ ಇದ್ದೆ ಇದೆ. ಪರಿಹಾರ ಮೊತ್ತ(Disability Compensation) ಹಾಗೂ ಪಿಂಚಣಿ ಬಗ್ಗೆ ಬದಲಾವಣೆ ಏನಾಗಿದೆ ಎಂಬುದನ್ನು ಮುಂದೆ ಓದಿ...

ಎಲ್ಲಾ ವರ್ಗದ ಸಿಬ್ಬಂದಿ, ಉದ್ಯೋಗಿಗಳಿಗೂ ಜಾರಿ
ಹುದ್ದೆಯಲ್ಲಿರುವಾಗ ಅಪಘಾತವಾಗಿ ಅಂಗವೈಕಲ್ಯಕ್ಕೆ ಒಳಪಡುವ ಉದ್ಯೋಗಿಗೆ ಸಿಗಲಿರುವ ಪರಿಹಾರ ಮೊತ್ತದ ಬಗ್ಗೆ ಹೊಸ ವರ್ಷದ ಆರಂಭದಲ್ಲೇ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರ ಈ ಪರಿಹಾರ ಮೊತ್ತವನ್ನು ಎಲ್ಲಾ ವರ್ಗದ ಸರ್ಕಾರಿ ಸಿಬ್ಬಂದಿ, ಉದ್ಯೋಗಿಗಳಿಗೂ ಜಾರಿಗೊಳಿಸಿದೆ. 2004ರ ಜನವರಿ 1ರಂದು ಉದ್ಯೋಗಕ್ಕೆ ಸೇರಿದ ಅಥವಾ ನಂತರ ನೇಮಕಗೊಂಡ ಎಲ್ಲರಿಗೂ ರಾಷ್ಟ್ರೀಯ ಪಿಂಚಣಿ ಯೋಜನೆ ಅನ್ವಯ ಪರಿಹಾರ ಸಿಗಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

2009ರ ಆದೇಶದಲ್ಲಿ ಏನಿತ್ತು?
ಪರಿಹಾರ ಮೊತ್ತ, ಪಿಂಚಣಿ ಬಗ್ಗೆ 2009ರಲ್ಲಿ ಹೊರಡಿಸಲಾದ ಆದೇಶದಂತೆ 2004ರ ಜನವರಿ 1ರಂದು ಹಾಗೂ ನಂತರ ನೇಮಕಗೊಂಡ ಸಿಬ್ಬಂದಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಅನ್ವಯ ಪಿಂಚಣಿ, ಪರಿಹಾರ ಇಲ್ಲಿ ತನಕ ಸಿಗುತ್ತಿರಲಿಲ್ಲ. ಈಗ ನಿಯಮವನ್ನು ಸರಳಗೊಳಿಸಿರುವ ಮೋದಿ ಸರ್ಕಾರ, ಎಲ್ಲಾ ಸ್ತರದ ಉದ್ಯೋಗಿಗಳಿಗೂ ಯೋಜನೆ ಪ್ರಯೋಜನವನ್ನು ವಿಸ್ತರಿಸಿದೆ. ಇದರಿಂದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ(ಸಿಎಪಿಎಫ್), ಬಿಎಸ್ಎಫ್, ಸಿಐಎಸ್ಎಫ್, ಬಿಎಸ್ ಎಫ್ ..ಮುಂತಾದ ಸೇವೆಗಳಲ್ಲಿರುವ ಸಿಬ್ಬಂದಿಗೆ ನೆರವಾಗಲಿದೆ.

2020ರಲ್ಲಿ ಬೋನಸ್ ಮಾತ್ರ ಪಡೆದ ನೌಕರರು
ಆರ್ಥಿಕ ಪರಿಸ್ಥಿತಿ ಹಾಗೂ ಕೊವಿಡ್ 19 ನಿರ್ಬಂಧ ಹೆಚ್ಚಾಗುವ ಮುನ್ನವೇ ಏಪ್ರಿಲ್ ತಿಂಗಳಲ್ಲೇ 2020ರಲ್ಲಿ ಸಂಬಳ ಏರಿಕೆ, ಡಿಎ ಹೆಚ್ಚಳ ನೀಡದಿರುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಿತ್ತು. ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಳ ಕಾಣುತ್ತಿದ್ದ ಸರ್ಕಾರಿ ನೌಕರರು ಈ ವರ್ಷ ಭಾರಿ ಹೊಡೆತ ತಿಂದಿದ್ದರು.
ಕೊನೆಗೆ ಸುಮಾರು 30 ಲಕ್ಷ ಸಿಬ್ಬಂದಿಗಳಿಗೆ ದೀಪಾವಳಿ ಬೋನಸ್ ಸಿಕ್ಕಿದರೆ, ಹಲವಾರು ನೌಕರರು ಎಲ್ ಟಿ ಸಿ, ಎಲ್ ಟಿಎ ಸೌಲಭ್ಯ ಬಳಸಲು ಉತ್ತೇಜಿಸಲಾಯಿತು. ಎಲ್ ಟಿಸಿ ನಗದು ವೋಚರ್ ಯೋಜನೆಯನ್ನು ಅಕ್ಟೋಬರ್ 12ರಂದು ಪರಿಚಯಿಸಲಾಯಿತು.

ಕನಿಷ್ಠ ವೇತನ ಏರಿಕೆ ಬೇಡಿಕೆ
ಕನಿಷ್ಠ ವೇತನವನ್ನು 18,000 ದಿಂದ 26,000 ರೂಪಾಯಿಗೆ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಿ ನೌಕರರು ಆಗ್ರಹಿಸಿದ್ದಾರೆ. 3.7 ಫಿಟ್ಮೆಂಟ್ ಫಾರ್ಮುಲಾದಂತೆ ಮೂಲ ವೇತನ ಏರಿಕೆಗೆ ಆಗ್ರಹಿಸಲಾಗಿದೆ. ಆದರೆ, 21,000 ರು ಗಳಿಗೆ ನಿಗದಿ ಪಡಿಸಿ 3.00 ಫಿಟ್ಮೆಂಟ್ ನಂತೆ ಮೂಲ ವೇತನ ಏರಿಕೆ ಮಾಡುವ ನಿರೀಕ್ಷೆಯಿದೆ. ಹೀಗಾಗಿ ಕನಿಷ್ಠ ವೇತನ 21 ಸಾವಿರ ರು ನಿಂದ 26 ಸಾವಿರ ರು ತನಕ ಏರಿಕೆ ಮಾಡುವ ಸಾಧ್ಯತೆಯಿದೆ ಎಂಬ ವರದಿ ಬಂದಿದ್ದರೂ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದು ಕಡಿಮೆ.ದೆಹಲಿ ಸರ್ಕಾರ ಮಾತ್ರ ಇತ್ತೀಚೆಗೆ ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಕನಿಷ್ಠ ವೇತನ, ಭತ್ಯೆ ಹೆಚ್ಚಳ ಮಾಡಿದೆ.












Click it and Unblock the Notifications