ತಿನಿಸೆಂದು ರಬ್ಬರ್ ಆಟಿಕೆ ನುಂಗಿ ಬಾಲಕನ ದುರ್ಮರಣ
ಎಲೂರು (ಆಂಧ್ರಪ್ರದೇಶ), ನವೆಂಬರ್ 02 : ರಬ್ಬರ್ ಆಟಿಕೆಯನ್ನು ತಿನ್ನುವ ಪದಾರ್ಥವೆಂದು ತಿಳಿದು, ನಾಲ್ಕು ವರ್ಷದ ಬಾಲಕನೊಬ್ಬ ಅದನ್ನು ತಿನ್ನಲು ಹೋಗಿ ಗಂಟಲಲ್ಲಿ ಸಿಲುಕಿಕೊಂಡು ಮೃತನಾದ ದುರ್ಘಟನೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.
ಮೀಸಲ ನಿರೀಕ್ಷಣ ಕುಮಾರನ ತಂದೆ ಲಕ್ಷ್ಮಣರಾವ್ ಅವರು ತನ್ನ ಮಗನಿಗಾಗಿ ಪ್ಯಾಕೆಟ್ ತಿಂಡಿಯನ್ನು ತಂದಿದ್ದಾರೆ. ಹಲವಾರು ಪ್ಯಾಕೆಟ್ ಗಳಲ್ಲಿ ಇರುವಂತೆ ಅದರಲ್ಲಿಯೂ ರಬ್ಬರ್ ಆಟಿಕೆಯೊಂದಿತ್ತು. ಅದನ್ನೇ ತಿನಿಸೆಂದು ರಬ್ಬರ್ ಆಟಿಕೆಯನ್ನು ಬಾಲಕ ತಿಂದುಬಿಟ್ಟಿದ್ದಾನೆ.

ಅದು ಗಂಟಲಲ್ಲಿ ಸಿಲುಕಿಕೊಂಡು ನಿರೀಕ್ಷಣ ಕುಮಾರ ಒದ್ದಾಡಲು ಆರಂಭಿಸಿದ್ದಾನೆ. ಕೂಡಲೆ ಆತನನ್ನು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆ ತಲುಪುವಷ್ಟರಲ್ಲಿ ಆತ ಅಸುನೀಗಿದ್ದ ಎಂದು ವೈದ್ಯರು ತಿಳಿಸಿದ್ದಾರೆ.
ಲಕ್ಷ್ಮಣ ರಾವ್ ಅವರು ನೀಡಿರುವ ದೂರಿನ ಆಧಾರದ ಮೇಲೆ ವೆಸ್ಟ್ ಗೋದಾವರಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಅಂಗಡಿ ಮಾಲಿಕ ಮತ್ತು ಆ ತಿನಿಸಿನ ಕಂಪನಿಯ ಮೇಲೆ ದೂರನ್ನು ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರವಷ್ಟೇ ಇಲಿ ಪಾಶಾಣವಿದ್ದ ಕುರ್ಕುರೆಯನ್ನು ಆಶಾ ಕಾರ್ಯಕರ್ತೆಯೊಬ್ಬಳು ತಿನ್ನಿಸಿದ್ದರಿಂದ ಅಂಗನವಾಡಿಯಲ್ಲಿ ಓದುತ್ತಿದ್ದ ನಾಲ್ಕು ವರ್ಷದ ಬಾಲಕನೊಬ್ಬ ಸಾವಿಗೀಡಾಗಿದ್ದ. ಈಗ ಮತ್ತೊಂದು ದುರ್ಘಟನೆ ಸಂಭವಿಸಿದೆ.
ಕುರ್ಕುರೆ, ಲೇಸ್, ಜೆಮ್ಸ್ ಮುಂತಾದ ಖಾದ್ಯ ಪಾಕೀಟುಗಳಲ್ಲಿ ಸಿಗುವ ರಬ್ಬರ್ ಆಟಿಕೆಗಳೇ ಮಕ್ಕಳಿಗೆ ಪ್ರಮುಖ ಆಕರ್ಷಣೆ. ಇವು ಏನೂ ಅರಿಯದ ಪುಟ್ಟ ಮಕ್ಕಳಿಗೆ ಸಿಕ್ಕು ಅನಾಹುತವಾಗುವ ಸಂಭವವೇ ಹೆಚ್ಚಿರುತ್ತದೆ. ಇಂಥವುಗಳನ್ನು ಮಕ್ಕಳಿಗೆ ಸಿಗದಂತೆ ಎಚ್ಚರವಹಿಸಬೇಕಾಗಿರುವುದು ಪೋಷಕರ ಜವಾಬ್ದಾರಿ ಕೂಡ.












Click it and Unblock the Notifications