ಧೂಳಿನ ಮಾರುತಕ್ಕೆ ಉತ್ತರ ಹಾಗೂ ಮಧ್ಯಪ್ರದೇಶದಲ್ಲಿ 34 ಮಂದಿ ಬಲಿ
ಬೆಂಗಳೂರು, ಜೂನ್ 8: ಉತ್ತರ ಭಾರತ ಹಾಗೂ ಮಧ್ಯಭಾರತದಲ್ಲಿ ಬಿಸಿಗಾಳಿ ಪ್ರಮಾಣ ಇನ್ನೂ ತಗ್ಗಿಲ್ಲ, ಧೂಳಿನ ಮಾರುತಕ್ಕೆ ಉತ್ತರ ಹಾಗೂ ಮಧ್ಯಪ್ರದೇಶದಲ್ಲಿ 34 ಮಂದಿ ಮೃತಪಟ್ಟಿದ್ದಾರೆ.
ಕೆಲವೇ ಗಂಟೆಗಳಲ್ಲಿ ಮುಂಗಾರು ಕೇರಳವನ್ನು ಪ್ರವೇಶಿಸಲಿದ್ದು, ವಿವಿಧ ರಾಜ್ಯಗಳಲ್ಲಿ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶದಲ್ಲಿ ಸೆಕೆ ಮುಂದುವರೆದಿದೆ. ಜೂನ್ 15ರವರೆಗೂ ಹೀಗೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಧೂಳು ಮಾರುತವಿರುವ ಕಾರಣ ಮನೆಯ ಒಳಗೇ ಇರುವಂತೆ ಸೂಚಿಸಲಾಗುತ್ತಿದೆ. ಉತ್ತರ ಹಾಗೂ ಮಧ್ಯಪ್ರದೇಶದಲ್ಲಿ 57 ಮಂದಿಗೆ ಗಂಭೀರ ಗಾಯವಾಗಿದ್ದು, 34 ಮಂದಿ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶವೊಂದರಲ್ಲೇ 13 ವರ್ಷದ ಬಾಲಕನನ್ನೂ ಒಳಗೊಂಡಂತೆ 26 ಮಂದಿ ಸಾವನ್ನಪ್ಪಿದ್ದಾರೆ.

ಮಧ್ಯಪ್ರದೇಶದ ರತ್ನಂ, ಜಬಲ್ಪುರ್, ದಾಮೋರದಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ. ದಿಂಡೋರ್ ಹಾಗೂ ಸಿಯೋನಿಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ. ಗರಿಷ್ಠ ಉಷ್ಣಾಂಶ 45 ಡಿಗ್ರಿ ದಾಟಿದ ಬಳಿಕ ಕಳೆದ ಒಂದು ವಾರದಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜೂನ್ 10ರ ಬದಲು ಜೂನ್ 17ರಿಂದ ಶಾಲೆಗೆ ಬರುವಂತೆ ಸೂಚಿಸಲಾಗಿದೆ.
ರಾಜಸ್ಥಾನದಲ್ಲಿ 46.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ಕೋಟಾದಲ್ಲಿ 46.1 ಡಿಗ್ರಿ ಸೆಲ್ಸಿಯಸ್, ಬಿಕಾನೇರ್ನಲ್ಲಿ 45.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಪಂಜಾಬ್ನ ಅಮೃತಸರದಲ್ಲಿ 41.4 ಡಿಗ್ರಿ ಸೆಲ್ಸಿಯಸ್, ಲುದಿಯಾನಾದಲ್ಲಿ 41ಡಿಗ್ರಿ ಸೆಲ್ಸಿಯಸ್, ಚಂಡೀಗಢದಲ್ಲಿ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications