ಮಗನ ಹೆಣದೊಂದಿಗೆ ರಾತ್ರಿ ಇಡೀ ರಸ್ತೆಯಲ್ಲೇ ಕಳೆದ ತಾಯಿ
ಹೈದರಾಬಾದ್, ಸೆಪ್ಟೆಂಬರ್ 15: ಹೇಳಲು ಹೈದರಾಬಾದ್ ಮುತ್ತಿನ ನಗರಿ. ಆದರೆ ಅಲ್ಲಿ ಬುಧವಾರ ಮಾನವೀಯತೆಯೇ ಸತ್ತು ಮಲಗಿತ್ತು. ಮಳೆ, ಗುಡುಗು-ಮಿಂಚಿನ ನಡುವೆ ಹೆತ್ತ ತಾಯಿ ತನ್ನ ಮಗನ ಹೆಣದ ಜತೆ ಬೀದಿಯಲ್ಲಿ ನಿಂತಿದ್ದರು.
ಒಂದೆಡೆ ನಿರಂತರವಾಗಿ ಸುರಿಯುತ್ತಿರುವ ಮಳೆ. ಇನ್ನೊಂದು ಕಡೆ ಕರುಳ ಕುಡಿಯ ಅಕಾಲಿಕ ಸಾವು. ಇದರ ಮಧ್ಯೆ ಆ ಮಹಾತಾಯಿ ದುಃಖದಿಂದ ಬೀದಿಯಲ್ಲೇ ನಿಂತಿದ್ದರೂ, ಹೆಣವನ್ನು ಮನೆಯೊಳಕ್ಕೆ ಬಿಡಲೊಲ್ಲದ ಮನೆ ಮಾಲಿಕನ ಕಲ್ಲು ಹೃದಯ ಮಾತ್ರ ಕರಗಲೇ ಇಲ್ಲ.

ಇದೆಲ್ಲಾ ನಡೆದಿದ್ದು ಕುಕಟ್ ಪಲ್ಲಿಯ ವೆಂಕಟೇಶ್ವರ ನಗರದಲ್ಲಿ. ಈಶ್ವರಮ್ಮ ಎಂಬವರ ಮಗ ಬುಧವಾರ ಸಂಜೆ ಇಲ್ಲಿನ ನಿಲೋಫರ್ ಆಸ್ಪತ್ರೆಯಲ್ಲಿ ಡೆಂಗ್ಯೂವಿನಿಂದ ಅಸುನೀಗಿದ್ದ. ಮನೆಯ ಮಾಲಿಕ ಹೆಣವನ್ನು ಮನೆಯ ಒಳಗೆ ತರಲು ಬಿಡದ ಕಾರಣ ರಾತ್ರಿಯಿಡೀ ತಾಯಿ ಮಗನ ಹೆಣದೊಂದಿಗೆ ಬೀದಿಯಲ್ಲೇ ಕಳೆದಿದ್ದಾರೆ.
ರಾತ್ರಿಯಿಡೀ ಮಳೆ, ಗುಡುಗು-ಮಿಂಚು ಬರುತ್ತಿದ್ದರೂ ತಾಯಿ ಈಶ್ವರಮ್ಮನನ್ನು ಹೆಣದ ಜತೆ ಮನೆಯೊಳಕ್ಕೆ ಬರಲು ಕಲ್ಲು ಹೃದಯದ ಮನೆ ಮಾಲಿಕ ಮಾತ್ರ ಬಿಟ್ಟಿಲ್ಲ.

ಕೊನೆಗೆ ತಾಯಿ ಮಗನ ಹೆಣದ ಜತೆ ಬೀದಿಯಲ್ಲೇ ಕಳೆದಿದ್ದನ್ನು ನೋಡಿದ ಅಕ್ಕಪಕ್ಕದ ಮನೆಯವರು ಹೆಣಕ್ಕೆ ಬಾಕ್ಸ್ ಮತ್ತು ಪ್ಲಾಸ್ಟಿಕ್ ಹೊದಿಗೆ ಹೊಂದಿಸಿಕೊಟ್ಟಿದ್ದಾರೆ. ಅಲ್ಲದೆ ಗುರುವಾರ ಸ್ಥಳೀಯರೇ ಧನ ಸಹಾಯ ಮಾಡಿ ಈಶ್ವರಮ್ಮನ ಮಗನ ಅಂತ್ಯಸಂಸ್ಕಾರಕ್ಕೂ ಸಹಾಯ ಹಸ್ತ ಚಾಚಿದ್ದಾರೆ.
ಹೀಗೆ ಬುಧವಾರ ರಾತ್ರಿ ಅಘಾತಕಾರಿ ಮತ್ತು ಅವಮಾನಕಾರಿ ಘಟನೆಗೆ ಹೈದರಾಬಾದ್ ಸಾಕ್ಷಿಯಾಗಿದೆ. ಇನ್ನು "ಇದೊಂದು ಮಾನವ ಹಕ್ಕು ವಿರೋಧಿ ಘಟನೆ, ಮನೆ ಮಾಲಿಕನ ವಿರುದ್ಧ ಕ್ರಿಮನಲ್ ದೂರು ದಾಖಲಿಸಬೇಕು. ನಾವು ಈ ಸಂಬಂಧ ಮಾನವ ಹಕ್ಕು ಆಯೋಗದ ಮೊರೆ ಹೋಗಲಿದ್ದೇವೆ," ಎಂದು ಸ್ಥಳೀಯ ಮಕ್ಕಳ ಹಕ್ಕುಗಳ ಹೋರಾಟಗಾರ ಅಚ್ಚುತ್ ರಾವ್ ಹೇಳಿದ್ದಾರೆ.












Click it and Unblock the Notifications