ವಿಶ್ಲೇಷಣೆ : ರಾಹುಲ್ ಮತ್ತು ನಾಯ್ಡು ಮೈತ್ರಿಕೂಟ ಬಾರಿಸುವುದೇ ಜಯಭೇರಿ?
Recommended Video

ಹೈದರಾಬಾದ್, ನವೆಂಬರ್ 29 : ಭಾರೀ ಆಡಂಬರದೊಂದಿಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರು ಮುಂಬರುವ ಚುನಾವಣೆಗಾಗಿ ಒಬ್ಬರನ್ನೊಬ್ಬರು ಅಪ್ಪಿಕೊಂಡು ಹಸ್ತಲಾಘವ ಮಾಡಿಕೊಂಡಿದ್ದಾರೆ.
ಆದರೆ, ಸುದೀರ್ಘ ಕಾಲದಿಂದ ವೈರತ್ವ ಮುಂದುವರಿಸಿಕೊಂಡು ಬಂದಿರುವ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಾರ್ಟಿ ತೆಲಂಗಾಣದಲ್ಲಿ ಮ್ಯಾಜಿಕ್ ಮಾಡುವುದಾ? ಅಸ್ತಿತ್ವದಲ್ಲೇ ಇಲ್ಲದ ಟಿಡಿಪಿ ಮತ್ತು ಹುಲ್ಲುಕಡ್ಡಿಯ ಆಸರೆ ಪಡೆದಿರುವ ಕಾಂಗ್ರೆಸ್ ಮೈತ್ರಿಕೂಟ ವಿಧಾನಸಭೆ ಚುನಾವಣೆಯಲ್ಲಿ ಮೋಡಿ ಮಾಡುವುದಾ?
ಎಲ್ಲಕ್ಕಿಂತ ಹೆಚ್ಚಾಗಿ, ನಾವಿಬ್ಬರೂ ವೈರಿಗಳಲ್ಲ, ನಾವಿಬ್ಬರೂ ಒಬ್ಬರನ್ನೊಬ್ಬರು ಇಷ್ಟ ಪಡುತ್ತೇವೆ, ನಾವಿಬ್ಬರೂ ಜೊತೆಗೂಡಿ ಏನೇನು ಸಾಧಿಸಲಿದ್ದೇವೆ ಎಂಬುದನ್ನು ನೀವು ಚುನಾವಣೆ ಆದನಂತರ ನೋಡಲಿದ್ದೀರಿ ಎಂದೆಲ್ಲ ರಾಹುಲ್ ಗಾಂಧಿ ಭಾಷಣ ಬಿಗಿದಿರುವುದು ಮತಗಳಿಕೆಯಲ್ಲಿ ಬದಲಾಗುವುದಾ?
ರಾಹುಲ್ ಗಾಂಧಿ ಮತ್ತು ಚಂದ್ರಬಾಬು ನಾಯ್ಡು ಮೈತ್ರಿಯಲ್ಲಿ ಪರಿಹಾರಕ್ಕಿಂತ ಸಮಸ್ಯೆಗಳೇ ಸಾಕಷ್ಟು ಹುಟ್ಟಿಕೊಂಡಿವೆ, ಉತ್ತರಗಳಿಗಿಂತ ಪ್ರಶ್ನೆಗಳೇ ಹೆಚ್ಚು ಎದ್ದು ಕಾಣಿಸುತ್ತಿವೆ. ಹಾಗಂತ ಈ ಮೈತ್ರಿ ವರ್ಕೌಟ್ ಆಗುವುದಿಲ್ಲ ಎಂದು ಹೇಳಲೂ ಸಾಧ್ಯವಿಲ್ಲ. ಆದರೆ, ಇದು ಮುಂದಿನ ಚುನಾವಣೆಗಳ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದರ ಮೇಲೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.

ರಾಜ್ಯ ಇಬ್ಭಾಗವಾಗಿದ್ದಕ್ಕೆ ಇಂಗದ ಆಕ್ರೋಶ
ವಸ್ತುಸ್ಥಿತಿ ಏನಿದೆಯೆಂದರೆ, ಯುಪಿಎ ಸರಕಾರ ಕೊನೆಯ ಕ್ಷಣಗಳನ್ನು ಎದುರಿಸುತ್ತಿದ್ದಾಗ, ಅಖಂಡ ಆಂಧ್ರ ಪ್ರದೇಶವನ್ನು ತೆಲಂಗಾಣ ಮತ್ತು ಆಂಧ್ರವನ್ನಾಗಿ ಹೋಳು ಮಾಡಿದ್ದಾಗ ಉಂಟಾದಂಥ ಗಾಯ ಜನರ ಮನಸ್ಸಿನಲ್ಲಿ ಇನ್ನೂ ಮಾಗಿಲ್ಲ. ರಾಜ್ಯ ಹೋಳಾಗಿ ಎರಡು ಭಾಗವಾದ ನಂತರ ಎರಡೂ ರಾಜ್ಯಗಳು ಅಭಿವೃದ್ಧಿ ಹೇಳಿಕೊಂಡಷ್ಟು ಕಂಡಿಲ್ಲ. ರಾಜ್ಯ ವಿಭಜನೆಯಾದ ನಂತರ ತೆಲಂಗಾಣ ಮತ್ತು ಆಂಧ್ರದಲ್ಲಿ ಕಾಂಗ್ರೆಸ್ ಪಕ್ಷ ಹೇಳಹೆಸರಿಲ್ಲದಂತೆ ನಿರ್ನಾಮವಾಗಿ ಹೋಗಿದೆ. 2013ರಲ್ಲಿ ನಡೆದ ವಿಧಾನಸಭೆ ಚುನಾವಣೆದಲ್ಲಿ 119 ಸ್ಥಾನಗಳಿರುವ ವಿಧಾನಸಭೆಯಲ್ಲಿ ಕಾಂಗ್ರೆಸ್ ಗಳಿಸಿದ್ದು ಕೇವಲ 13 ಸ್ಥಾನ ಮಾತ್ರ. ತೆಲುಗು ದೇಶಂ ಪಕ್ಷ ಗೆದ್ದಿದ್ದು 13 ಸ್ಥಾನಗಳು. ಈಗ ಇವೆರಡೂ ಪಕ್ಷಗಳು ಡಿಸೆಂಬರ್ 7ರಂದು ನಡೆಯಲಿರುವ ಚುನಾವಣೆಯಲ್ಲಿ ಕೈಜೋಡಿಸಿವೆ.

ಆಂಧ್ರದಲ್ಲಿಯೇ ನಾಯ್ಡುಗೆ ಪ್ರಬಲ ವಿರೋಧ
ಚಂದ್ರ ಬಾಬು ನಾಯ್ಡು ಅವರು ತೆಲಂಗಾಣದಲ್ಲಿ ಬಂದು ಮ್ಯಾಜಿಕ್ ಮಾಡುವುದಿರಲಿ, ಅವರು ತಮ್ಮ ರಾಜ್ಯದಲ್ಲಿಯೇ ಭಾರೀ ಪ್ರತಿರೋಧ ಎದುರಿಸುತ್ತಿದ್ದಾರೆ. ಆಂಧ್ರದಲ್ಲಿ ಪವನ್ ಕಲ್ಯಾಣ್ ಅವರು ರಾಜಕೀಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಿದ್ದು, ಅವರ 'ಜನಸೇನಾ' ಮತ್ತು ಜಗನ್ ಮೋಹನ್ ರೆಡ್ಡಿ ಅವರ ವೈಎಸ್ಆರ್ಸಿಪಿ ಚಂದ್ರಬಾಬು ನಾಯ್ಡು ಅವರಿಗೆ ರಾತ್ರಿ ನಿದ್ದೆಗೆಡಿಸುವುದರಲ್ಲಿ ಅನುಮಾನವೇ ಇಲ್ಲ. ಅಲ್ಲದೆ, ನಾಯ್ಡು ಆಡಳಿತದಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪಗಳು ದುಷ್ಪರಿಣಾಮ ಬೀರಿದರೂ ಅಚ್ಚರಿಯಿಲ್ಲ. ಇದು ಸಾಲದೆಂಬಂತೆ, ಮೆಗಾಸ್ಟಾರ್ ಚಿರಂಜೀವಿ ಅವರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಲು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿರಂಜೀವಿ ರಾಜಕೀಯದಲ್ಲಿ ಸಕ್ರೀಯರಾಗಿಲ್ಲದಿದ್ದರೂ, ಜನಪ್ರಿಯತೆಯಲ್ಲಿ ಇನ್ನೂ ಅವರು ಅಭಿಮಾನಿಗಳ ಪಾಲಿನ ಮೆಗಾಸ್ಟಾರ್.

ಬಿಜೆಪಿ ವಿರೋಧಿಗಳನ್ನು ಒಗ್ಗೂಡಿಸಲು ರಾಹುಲ್ ವಿಫಲ
ಮಹಾಘಟಬಂಧನ್ ವಿಷಯಕ್ಕೆ ಬಂದರೆ ರಾಹುಲ್ ಗಾಂಧಿ ನೇಪಥ್ಯಕ್ಕೆ ಸರಿದಿದ್ದು, ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸೆಂಟರ್ ಸ್ಟೇಜ್ ಆಕ್ರಮಿಸಿಕೊಂಡಿದ್ದಾರೆ. ಸತತವಾಗಿ ಎಲ್ಲ ಬಿಜೆಪಿ ವಿರೋಧಿ ನಾಯಕರನ್ನು ಭೇಟಿಯಾಗುತ್ತಿದ್ದು, ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಅವರನ್ನು ಹೊರತುಪಡಿಸಿದರೆ ಅವರ ಪ್ರಯತ್ನಕ್ಕೆ ಸಕಾರಾತ್ಮಕ ಸ್ಪಂದನೆ ದೊರೆತಿದೆ. ಬಿಜೆಪಿಯನ್ನು ವಿರೋಧಿಸುವ ಎಲ್ಲ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿ ಸಂಪೂರ್ಣ ವಿಫಲರಾಗಿದ್ದರಿಂದ ಚಂದ್ರಬಾಬು ನಾಯ್ಡು ಮುಂದಡಿ ಇಡುವುದು ಅನಿವಾರ್ಯವಾಗಿತ್ತು. ಅವರೀಗಾಗಲೆ, ಎಚ್ ಡಿ ದೇವೇಗೌಡ, ಅರವಿಂದ್ ಕೇಜ್ರಿವಾಲ್, ಫಾರೂಕ್ ಅಬ್ದುಲ್ಲಾ, ಮಾಯಾವತಿ, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್ ಮುಂತಾದ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ರಾಹುಲ್ ಮೈತ್ರಿ ಕೂಡ ಮಹತ್ವದ್ದಾಗಿದೆ. ಈ ಜೋಡಿ ತೆಲಂಗಾಣದಲ್ಲಿ ಗೆದ್ದರೆ ಇತರ ರಾಜ್ಯಗಳಲ್ಲಿಯೂ ಮೈತ್ರಿಪರ್ವ ಮುಂದುವರಿಯಲಿದೆ. ಇಲ್ಲದಿದ್ದರೆ ಕಾಂಗ್ರೆಸ್ ಜೊತೆ ಕೈಜೋಡಿಸಲು ಕೆಲ ಪಕ್ಷಗಳು ಹಿಂದೇಟು ಹಾಕುವುದರಲ್ಲಿ ಅನುಮಾನವೇ ಇಲ್ಲ.

ರಾಹುಲ್ ನಾಯ್ಡು ಮೈತ್ರಿಯಿಂದ ಭುಗಿಲೆದ್ದ ಅಸಮಾಧಾನ
ಮೇಲ್ಮಟ್ಟದ ರಾಜಕಾರಣದಲ್ಲಿ ಈ ಸನ್ನಿವೇಶವಿದ್ದರೆ, ತಳಮಟ್ಟದಲ್ಲಿ ಸ್ವಲ್ಪ ವಿಭಿನ್ನವಾಗಿಯೇ ಇದೆ. ಆಂಧ್ರ ಪ್ರದೇಶ ಇಬ್ಭಾಗವಾದ ನಂತರ, ಅದರಿಂದ ರೊಚ್ಚಿಗೆದ್ದಿದ್ದ ಕೆಲ ಕಾಂಗ್ರೆಸ್ ನಾಯಕರು ವೈಎನ್ಆರ್ಸಿಪಿ ಮತ್ತು ಟಿಡಿಪಿಯನ್ನು ಸೇರಿ ಕಾಂಗ್ರೆಸ್ಸಿಗೆ ಭಾರೀ ಹೊಡೆತ ನೀಡಿದ್ದರು. ಇದೀಗ ರಾಹುಲ್ ಮತ್ತು ಚಂದ್ರಬಾಬು ನಾಯ್ಡು ಕೈಜೋಡಿಸಿದ್ದನ್ನು ವಿರೋಧಿಸಿ ಇಬ್ಬರು ಮಾಜಿ ಸಚಿವರು ಕಾಂಗ್ರೆಸ್ಸಿಗೆ ಗುಡ್ ಬೈ ಹೇಳಿದ್ದಾರೆ. 2009ರಿಂದ 2014ರವರೆಗೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಪಕ್ಷ 2014ರಲ್ಲಿ ನಡೆದ ಚುನಾವಣೆಯಲ್ಲಿ ಸರ್ವನಾಶವಾಗಿ ಹೋಗಿದೆ. ಮತ್ತೊಂದೆಡೆ ಜಗನ್ ಮೋಹನ್ ರೆಡ್ಡಿ ಅವರ ಪಕ್ಷ ಬಲಿಷ್ಠವಾಗುತ್ತಿದೆ. ಕಳೆದ ಚುನಾವಣೆಯಲ್ಲಿ 176 ಕ್ಷೇತ್ರಗಳಲ್ಲಿ ವೈಎಸ್ಆರ್ಸಿಪಿ 65 ಸ್ಥಾನಗಳನ್ನು ಗೆದ್ದು ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು.

ಕಾಂಗ್ರೆಸ್ ಟಿಡಿಪಿ ಕಾರ್ಯಕರ್ತರಲ್ಲಿ ವೈರತ್ವ
ಆಂಧ್ರದ ಕಾಂಗ್ರೆಸ್ಸಿನಲ್ಲಿ ಕೆಲ ಕಟ್ಟಾ ನೆಹರೂವಾದಿಗಳು ಮಾತ್ರ ಉಳಿದುಕೊಂಡಿದ್ದಾರೆ. ಅವರಿಗೆ ಈ ಹೊಸಬಗೆಯ ಮೈತ್ರಿ ಬೇಕಾಗಿಲ್ಲ. ಆಂಧ್ರದಲ್ಲಿ ಕೂಡ ರಾಹುಲ್ ಮತ್ತು ಚಂದ್ರಬಾಬು ನಾಯ್ಡು ಮೈತ್ರಿ ಮಾಡಿಕೊಂಡರೂ ಅವರಿಗೆ ಈ ಸ್ವಾಮಿನಿಷ್ಠ ನಾಯಕರಿಂದ ತಕ್ಕರೀತಿಯಲ್ಲಿ ಬೆಂಬಲ ಸಿಗುವುದು ಅನುಮಾನ. ಚುನಾವಣೆಯಲ್ಲಿ ನಿಜವಾಗಿಯೂ ಕೆಲಸ ಮಾಡುವ ತಳಮಟ್ಟದ ಕಾರ್ಯಕರ್ತರಲ್ಲಿ ಕೂಡ ಈ ಮೈತ್ರಿಯ ಬಗ್ಗೆ ದುಸುಮುಸು ಇದ್ದೇ ಇದೆ ಎಂಬ ಮಾತು ಕೂಡ ಕೇಳಿಬಂದಿದೆ. ಚುನಾವಣಾ ರ್ಯಾಲಿಗಳಲ್ಲಿ ಎಷ್ಟು ಜನರನ್ನು ಸೇರಿಸಿದರೇನು, ಮತ ಹಾಕುವವವರು ಬೇರೆಯೇ ಆಗಿರುತ್ತಾರೆ. ಪ್ರತಿ ಕ್ಷೇತ್ರದಲ್ಲಿಯೂ ಆಯಾ ನಾಯಕರು ತಮ್ಮ ಬೆಂಬಲಿಗರ ಬಳಗವನ್ನು ಕಟ್ಟಿಕೊಂಡಿರುತ್ತಾರೆ. ಅಂಥ ಕಾಂಗ್ರೆಸ್ ಮತ್ತು ಟಿಡಿಪಿ ಕಾರ್ಯಕರ್ತರಲ್ಲಿ ಮೊದಲಿನಿಂದಲೂ ವೈಷಮ್ಯ ಇದ್ದೇ ಇದೆ, ಈಗಲೂ ಇದೆ. ಇನ್ನು ಜಯಭೇರಿ ಬಾರಿಸುವ ಮಾತೆಲ್ಲಿ ಬಂತು?
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications