Viral Video: ಅಮಿತ್ ಶಾ ಚಪ್ಪಲಿ ಹಿಡಿದ ತೆಲಂಗಾಣದ ಬಿಜೆಪಿಗನಿಗೆ ವೈರಲ್ ಏಟು!
ಹೈದ್ರಾಬಾದ್, ಆಗಸ್ಟ್ 22: "ತೆಲಂಗಾಣದ ಮಾನ-ಮರ್ಯಾದೆ ಮತ್ತು ಆತ್ಮಗೌರವವನ್ನೇ ಹಾಳು ಮಾಡಿ ಬಿಟ್ಟರು. ಗುಜರಾತಿ ನಾಯಕರ ಗುಲಾಮರಂತೆ ವರ್ತಿಸಿ ಬಿಟ್ಟರು. ಇಂಥವರಿಗೆ ಏನು ಹೇಳಬೇಕು," ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಆಗುತ್ತಿರುವುದು ಇದೇ ಸುದ್ದಿ.
ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ತೋರಿದ ವರ್ತನೆಯು ಇಡೀ ರಾಜ್ಯದ ನಾಯಕರನ್ನು ಕೆರಳಿ ಕೆಂಡದಂತೆ ಮಾಡಿ ಬಿಟ್ಟಿದೆ. ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದ ಕೇಂದ್ರ ಗೃಹ ಸಚಿವರ ಎದುರು ತೋರಿದ ವರ್ತನೆಯು ನಾಚಿಕೆ ಹುಟ್ಟಿಸುವಂತಿದೆ ಎಂದು ಜನರ ಆದಿಯಾಗಿ ನಾಯಕರು ಕಾಮೆಂಟ್ ಹಾಕುತ್ತಿದ್ದಾರೆ.
ರಾಮೋಜಿರಾವ್ ಮಧ್ಯಸ್ಥಿಕೆಯಲ್ಲಿ ಚಂದ್ರಬಾಬು ನಾಯ್ಡು -ಅಮಿತ್ ಷಾ ಭೇಟಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಎದುರಿಗೆ ತೆಲಂಗಾಣದ ಆ ಲೀಡರ್ ತೋರಿದ ವರ್ತನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲೂ ಸಖತ್ ವೈರಲ್ ಆಗಿ ಬಿಟ್ಟಿದೆ. ಆ ವಿಡಿಯೋದ ಜೊತೆಗೆ ನಾಯಕರ ರಿಯಾಕ್ಷನ್ ಹೇಗಿದೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿರಿ.
ಕೇಂದ್ರ ಸಚಿವರ ಬೂಟು ಎತ್ತಿಕೊಟ್ಟ ಬಿಜೆಪಿ ನಾಯಕ
ಕಳೆದ ಭಾನುವಾರ ತೆಲಂಗಾಣದ ಸಿಕಂದರಾಬಾದ್ ಜಿಲ್ಲೆಯ ಉಜ್ಜೈನಿಯ ಮಹಾಕಾಳಿ ದೇವಸ್ಥಾನಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಕೊಟ್ಟಿದ್ದರು. ಈ ವೇಳೆ ತೆಲಂಗಾಣದ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಜೊತೆಗೆ ತೆರಳಿದ್ದರು. ದೇವಸ್ಥಾನದಲ್ಲಿ ದರ್ಶನ ಪಡೆದು ಹೊರಗೆ ಬಂದ ಅಮಿತ್ ಶಾ, ಅಲ್ಲಿಯೇ ಬಿಟ್ಟಿದ್ದ ಚಪ್ಪಲಿಯನ್ನು ಅದೇ ಬಂಡಿ ಸಂಜಯ್ ಕುಮಾರ್ ತಮ್ಮ ಕೈಯಲ್ಲಿ ಎತ್ತಿ ಇನ್ನೊಂದು ಬದಿಗೆ ಇಟ್ಟರು. ನಂತರದಲ್ಲಿ ಆ ಚಪ್ಪಲಿಗಳನ್ನು ಅಮಿತ್ ಶಾ ತೊಟ್ಟುಕೊಂಡು ಮುಂದೆ ಸಾಗಿದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತೀವ್ರ ವಿರೋಧ ಮತ್ತು ಆಕ್ಷೇಪಕ್ಕೆ ಕಾರಣವಾಗಿದೆ.
|
ಬಂಡಿ ಸಂಜಯ್ ಕುಮಾರ್ ವರ್ತನೆಗೆ ಟಿಆರ್ಎಸ್ ಕೆಂಡ
ಅಮಿತ್ ಶಾ ಚಪ್ಪಲಿಯನ್ನು ಕೈಯಲ್ಲಿ ಎತ್ತಿಕೊಟ್ಟಿರುವ ವಿಡಿಯೋವನ್ನು ತೆಲಂಗಾಣ ರಾಷ್ಟ್ರೀಯ ಸಮಿತಿ ಮುಖಂಡ ಕೆಟಿ ರಾಮರಾವ್ ಶೇರ್ ಮಾಡಿದ್ದಾರೆ. ಬಿಜೆಪಿ ಮುಖ್ಯಸ್ಥರು ತಾವು ಗುಜರಾತಿ ನಾಯಕರ ಗುಲಾಮರು ಎಂಬುದನ್ನು ತೋರಿಸಿಕೊಂಡಿದ್ದಾರೆ ಎಂದು ಕೆಂಡ ಕಾರಿದ್ದಾರೆ. ಗುಜರಾತಿ ಗುಲಾಮರು, ಆ ದೆಹಲಿಯವರ ಶೂಗಳನ್ನು ಹಿಡಿಯುವುದನ್ನು ತೆಲಂಗಾಣದ ಜನರು ಕಣ್ಣಾರೆ ಕಂಡಿದ್ದಾರೆ. ತೆಲಂಗಾಣದ ಜನತೆಯ ಸ್ವಾಭಿಮಾನವನ್ನು ಅವಮಾನಿಸಿದವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಟಿಆರ್ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಟ್ವೀಟ್ ಮಾಡಿದ್ದಾರೆ.
ಗುಲಾಮಗಿರಿಯ ಅತ್ಯುತ್ತಮ ಘಟ್ಟ ಎಂದರೆ ಇದುವೇ!
ಟಿಆರ್ಎಸ್ನ ಸಾಮಾಜಿಕ ಮಾಧ್ಯಮ ಸಂಚಾಲಕ ವೈ ಸತೀಶ್ ರೆಡ್ಡಿ ಕೂಡ ಬಿಜೆಪಿ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಮಿತ್ ಶಾಗೆ ಅವರ ಚಪ್ಪಲಿಯನ್ನು ಎತ್ತಿಕೊಟ್ಟ ಬಂಡಿ ಸಂಜಯ್ ಕುಮಾರ್ ವರ್ತನೆಯು 'ಗುಲಾಮಗಿರಿ ಅತ್ಯುತ್ತಮವಾದ' ಘಟ್ಟ ಎಂದು ಬಣ್ಣಿಸಿದ್ದಾರೆ. ತೆಲಂಗಾಣದ ಎಐಸಿಸಿ ಉಸ್ತುವಾರಿ ಮಾಣಿಕ್ಕಂ ಠಾಗೋರ್, 'ತೆಲುಗಿನ ಸ್ವಾಭಿಮಾನ' ಎಂಬ ಕಾಮೆಂಟ್ನೊಂದಿಗೆ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. "ಬಿಜೆಪಿಯಲ್ಲಿ ಹಿಂದುಳಿದ ವರ್ಗದ ನಾಯಕರ ಸ್ಥಾನ ಏನು ಎಂದು ಸತ್ಯವನ್ನು ನೋಡಿ," ಎಂದು ಬರೆದಿದ್ದಾರೆ.
ತೆಲಂಗಾಣಕ್ಕೆ ಹೋಗಿದ್ದು ಏಕೆ ಅಮಿತ್ ಶಾ?
ಭಾನುವಾರವಷ್ಟೇ ತೆಲಂಗಾಣಕ್ಕೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಕಂದರಾಬಾದ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮುನುಗೋಡು ವಿಧಾನಸಭಾ ಕ್ಷೇತ್ರದ ಉಪ-ಚುನಾವಣೆಯ ಹಿನ್ನೆಲೆ ಬಿಜೆಪಿ ಪ್ರಚಾರಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಈ ವೇಳೆ ಕೇಂದ್ರ ಸರ್ಕಾರದ ಬೆಂಬಲದ ಹೊರತಾಗಿಯೂ ತೆಲಂಗಾಣ ಸಾಲದ ಸುಳಿಯಲ್ಲಿ ಸಿಲುಕಿದೆ. ಕೆಸಿಆರ್ ಕುಟುಂಬದ ಸದಸ್ಯರನ್ನು ಹೊರತುಪಡಿಸಿ, ರಾಜ್ಯದ ಯಾವುದೇ ಯುವಕರು ತಮ್ಮ ಸರ್ಕಾರ ನೀಡಿದ ಭರವಸೆಯಂತೆ ಉದ್ಯೋಗವನ್ನು ಪಡೆದುಕೊಂಡಿಲ್ಲ ಎಂದು ಅಮಿತ್ ಶಾ ಆರೋಪಿಸಿದರು.