ಟಿವಿ9 ಸಿಇಒ ರವಿ ಪ್ರಕಾಶ್ ವಿರುದ್ಧ ಫೋರ್ಜರಿ ಕೇಸ್ ದಾಖಲು
ಹೈದರಾಬಾದ್, ಮೇ 09: ಬಂಜಾರಾ ಹಿಲ್ಸ್ ನಲ್ಲಿರುವ ಟಿವಿ9 ಕಚೇರಿ ಹಾಗೂ ಸಿಇಒ ರವಿ ಪ್ರಕಾಶ್ ಮನೆ ಮೇಲೆ ತೆಲಂಗಾಣ ಪೊಲೀಸರು ದಾಳಿ ನಡೆಸಿದ್ದಾರೆ. ಅಲಂದಾ ಮೀಡಿಯಾ ಸಂಸ್ಥೆ ನೀಡಿದ ದೂರಿನನ್ವಯ ದಾಳಿ ನಡೆಸಲಾಗಿದ್ದು, ರವಿ ಪ್ರಕಾಶ್ ವಿರುದ್ಧ ಫೋರ್ಜರಿ ಕೇಸ್ ದಾಖಲಾಗಿದೆ.
ಟಿವಿ9 ತೆಲುಗು ಮಾಧ್ಯಮ ಸಂಸ್ಥೆಯನ್ನು ಅಲಂದಾ ಮೀಡಿಯಾ ನಿರ್ವಹಣೆ ಮಾಡುತ್ತಿತ್ತು. ಇದಕ್ಕೆ ಸಂಬಂಧಪಟ್ಟ ಪತ್ರಗಳು ನಾಪತ್ತೆಯಾಗಿವೆ, ಕೆಲ ಪತ್ರಗಳು ಫೋರ್ಜರಿ ಮಾಡಲಾಗಿದೆ ಎಂದು ಸೈಬಾರಾಬಾದ್ ಪೊಲೀಸ್ ಠಾಣೆಯಲ್ಲಿ ಅಲಂದಾ ಮಾಧ್ಯಮ ಸಂಸ್ಥೆ ಕೌಶಿಕ್ ರಾವ್ ಅವರು ದೂರು ಸಲ್ಲಿಸಿದ್ದರು. ರವಿ ಪ್ರಕಾಶ್ ವಿರುದ್ಧ ಐಟಿ ಕಾಯ್ದೆ 56, ಐಪಿಸಿ ಸೆಕ್ಷನ್ 406, 467 ಅನ್ವಯ ಪ್ರಕರಣ ದಾಖಲಾಗಿದೆ.
ಹೊಸದಾಗಿ ಮೂವರು ನಿರ್ದೇಶಕರನ್ನು ನೇಮಿಸುವ ವಿಷಯದಲ್ಲಿ ರವಿಪ್ರಕಾಶ್ ಹಾಗೂ ಅಲಂದಾ ಸಂಸ್ಥೆ ನಡುವೆ ಒಮ್ಮತ ಮೂಡಿರಲಿಲ್ಲ. ಆದರೆ, ನಿರ್ದೇಶಕರ ನೇಮಕ ಕುರಿತಂತೆ ನಕಲಿ ದಾಖಲೆ ಪತ್ರ ಸಿದ್ಧವಾಗಿತ್ತು. ಈ ಬಗ್ಗೆ ನೀಡಲಾಗಿದ್ದ ದೂರಿನನ್ವಯ ಪೊಲೀಸರು ಟಿವಿ9 ಕಚೇರಿ ಮತ್ತು ಸಿಇಒ ರವಿಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ರವಿಪ್ರಕಾಶ್ ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿದ್ದು, ಸದ್ಯ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯಿದೆ.