ತೆಲಂಗಾಣಕ್ಕೆ ತಿರುಪತಿ ತಿಮ್ಮಪ್ಪ ಸಾವಿರ ಕೋಟಿ ಬಾಕಿ!
ಹೈದರಾಬಾದ್, ಅಕ್ಟೋಬರ್, 19: ತೆಲಂಗಾಣ ರಾಜ್ಯಕ್ಕೆ ತಿರುಪತಿ ದೇವಸ್ಥಾನವು ಸಾವಿರ ಕೋಟಿ ರೂ. ಬಾಕಿ ಇದ್ದು, ಅದನ್ನು ಕೂಡಲೇ ಕೊಡಿಸಬೇಕೆಂದು ತೆಲಂಗಾಣ ಚಿಲಕೂರು ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸೌಂದರ ರಾಜನ್ ಹೈಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದಾರೆ.
ಅರ್ಜಿಯನ್ನು ಹೈಕೋರ್ಟ್ ಮಾನ್ಯ ಮಾಡಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ. ವಿಚಾರಣೆಯನ್ನು ಮೂರು ವಾರಗಳಿಗೆ ಮುಂದೂಡಿದೆ.

ಅವಿಭಜಿತ ಆಂಧ್ರಪ್ರದೇಶದಲ್ಲಿ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡೂ ರಾಜ್ಯಗಳಿಗೆ ಸೇರಿತ್ತು. ತೆಲಂಗಾಣದ ಸದಸ್ಯರೂ ಸಹ ಟಿಟಿಡಿಯಲ್ಲಿ ಇದ್ದರು. ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಅಷ್ಟೇ ಅಲ್ಲದೇ ತಿರುಮಲ ತಿರುಪತಿ ದೇವಸ್ಥಾನ ಆಡಳಿತದ ಹಲವು ದೇವಾಲಯಗಳು ತೆಲಂಗಾಣ ರಾಜ್ಯದಲ್ಲಿದ್ದು, ಅವುಗಳ ನಿರ್ವಹಣೆಗಾಗಿ ಅವಿಭಜಿತ ಆಂಧ್ರಪ್ರದೇಶವಿದ್ದಾಗ ಟಿಟಿಡಿ ಅನುದಾನ ನೀಡುತ್ತಿತ್ತು. ಎಂದು ಅವರು ಅರ್ಜಿಯಲ್ಲಿ ದಾಖಲಿಸಿದ್ದಾರೆ.
1987ರಿಂದ 2014ರವರೆಗೆ ತೆಲಂಗಾಣ ದೇವಸ್ಥಾನಗಳ ಅಭಿವೃದ್ಧಿಗಾಗಿ ಸಾಕಷ್ಟು ಮೊತ್ತದ ಹಣ ಬಿಡುಗಡೆ ಮಾಡಿಲ್ಲ. ಕೇವಲ 56ಲಕ್ಷರೂ. ನೀಡಿದೆ. ಆದ್ದರಿಂದ ಸಾವಿರ ಕೋಟಿ ರೂ. ಹಣವನ್ನು ನೀಡುವಂತೆ ಆದೇಶ ಹೊರಡಿಸಬೇಕೆಂದು ಅವರು ನ್ಯಾಯಲಯಕ್ಕೆ ಮನವಿ ಸಲ್ಲಿಸಿದ್ದಾರೆ.
ಟಿಟಿಡಿ ಅಧ್ಯಕ್ಷ ಚದಲವಾಡ ಕೃಷ್ಣಮೂರ್ತಿ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಸೌಂದರ್ ರಾಜನ್ ಅವರಿಗೆ ನೈತಿಕತೆ ಇದ್ದರೆ ಹೈದರಾಬದ್ ನಲ್ಲಿ ತಮ್ಮ ಸುಪರ್ದಿಯಲ್ಲಿರುವ ಚಿಲಕೂರು ಬಾಲಾಜಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಒಪ್ಪಿಸಬೇಕು" ಎಂದು ಹೇಳಿದ್ದಾರೆ.

ಪ್ರಚಾರಗಿಟ್ಟಿಸಲು ಮತ್ತು ವೈಯಕ್ತಿಕವಾಗಿ ತಾವು ಅಭಿವೃದ್ಧಿ ಹೊಂದಲು ಸೌಂದರ್ ರಾಜನ್ ಈ ರೀತಿ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ದೇವರ ಹಣದಲ್ಲಿ ಭಾಗ ಕೇಳುವುದು ತರವಲ್ಲ ಎಂದು ಹೇಳಿದ್ದಾರೆ.












Click it and Unblock the Notifications