ಬಿಜೆಪಿಗೆ ಬಿಗ್ ಶಾಕ್! NDA ಜೊತೆ ಖಂಡಿತ ಕೈಜೋಡಿಸೋಲ್ಲ ಎಂದ TRS!
ಹೈದರಾಬಾದ್, ಅಕ್ಟೋಬರ್ 05: 'ಜಾತ್ಯಾತೀತ ತತ್ವದಲ್ಲಿ ನಂಬಿಕೆ ಇಟ್ಟ ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್ ಎಸ್) ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ 2019 ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದಿಲ್ಲ' ಎಂದು ಟಿಆರ್ ಎಸ್ ಮುಖಂಡ ಕೆ ಟಿ ರಾಮ ರಾವ್ ಹೇಳಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಟಿಆರ್ ಎಸ್ ಎನ್ ಡಿಎ ಜೊತೆ ಗುರುತಿಸಿಕೊಳ್ಳಬಹುದು ಎಂಬ ನಿರೀಕ್ಷೆಗೆ ಈ ಮೂಲಕ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ ಕೆಟಿ ರಾಮ ರಾವ್ ತಣ್ಣೀರೆರೆಚಿದ್ದಾರೆ.
2014 ರ ಲೋಕಸಭಾ ಚುನಾವಣೆಯಲ್ಲೂ ಟಿಆರ್ ಎಸ್ ಎನ್ ಡಿಎ ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಎನ್ ಡಿಎ ಜೊತೆ ಟಿಆರ್ ಎಸ್ ಗುರುತಿಸಿಕೊಳ್ಳಬಹುದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿತ್ತು. ಟಿಆರ್ ಎಸ್ ನಡೆ ಸ್ವತಃ ಬಿಜೆಪಿಗೂ ಆಘಾತವನ್ನುಂಟುಮಾಡಿದೆ.

ರಾಜ್ಯಸಭಾ ಉಪಾಧ್ಯಕ್ಷರ ಆಯ್ಕೆ ಸಮಯದಲ್ಲಿ ಬೆಂಬಲ
ಇತ್ತೀಚೆಗೆ ನಡೆದ ರಾಜ್ಯಸಭಾ ಉಪಾಧ್ಯಕ್ಷರ ಆಯ್ಕೆಯ ಸಮಯದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯನ್ನೇ ಟಿಆರ್ ಎಸ್ ಬೆಂಬಲಿಸಿತ್ತು. ಎರಡು ಪಕ್ಷಗಳು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬಹುದು ಎಂಬ ನಿರೀಕ್ಷೆಯನ್ನು ಇದು ಹುಟ್ಟುಹಾಕಿತ್ತು.

ಮೋದಿ-ಕೆಸಿಆರ್ ಭೇಟಿ
ಇತ್ತೀಚೆಗೆ ಅಂದರೆ ತೆಲಂಗಾಣ ವಿಧಾನಸಭೆ ವಿಸರ್ಜನೆಯಾಗುವ ಮೊದಲು ಎರಡು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆ ಚಂದ್ರಶೇಖರ್ ರಾವ್ ಭೇಟಿಯಾಗಿದ್ದರು. ನಂತರ ತೆಲಂಗಾಣ ವಿಧಾನಸಭೆಯನ್ನು ವಿಸರ್ಜಿಸಿದರು. ವಿಧಾನಸಭೆಯ ಕಾಲಾವಧಿ ಜೂನ್ 2019 ರವರೆಗಿದ್ದರೂ, ಇದ್ದಕ್ಕಿದ್ದಂತೆ ಈ ನಿರ್ಧಾರ ತಾಳಿದ್ದು ಅಚ್ಚರಿ ಸೃಷ್ಟಿಸಿತ್ತು. ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ, ಮಿಜೋರಾಂ ಮತ್ತು ಛತ್ತೀಸ್ ಗಢ ರಾಜ್ಯಗಳ ಚುನಾವಣೆಯೊಟ್ಟಿಗೇ ಈ ರಾಜ್ಯದ ಚುನಾವಣೆಯೂ ನಡೆಯಲಿ ಎಂಬ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗಿತ್ತು. ನಂತರ ಎನ್ ಡಿಎ ಮೈತ್ರಿಕೂಟಕ್ಕೂ ಟಿಆರ್ ಎಸ್ ಬೆಂಬಲ ನೀಡಬಹುದು ಎಂಬ ಊಹೆಗೆ ಕೆಸಿಆರ್-ಮೋದಿ ಭೇಟಿಪುಷ್ಠಿನೀಡಿತ್ತು.

ಸಿದ್ಧಾಂತಗಳು ಒಂದಾಗುವುದಿಲ್ಲ!
ಬಿಜೆಪಿ ಮತ್ತು ಟಿಆರ್ ಎಸ್ ಪಕ್ಷಗಳದ್ದು ಭಿನ್ನ ಸಿದ್ಧಾಂತ. ನಾವು ಜಾತ್ಯತೀತ ಸಿದ್ಧಾಂತವನ್ನು ನಂಬುತ್ತೇವೆ. ನಮಗೆ ಧ್ರುವೀಕರಣದಲ್ಲಿ ನಂಬಿಕೆ ಇಲ್ಲ. ವಿಭಜನೆಯ ಸಿದ್ಧಾಂತ ನಮ್ಮದಲ್ಲ. ಆದ್ದರಿಂದ ನಾವು ಬಿಜೆಪಿಯೊಂದಿಗೆ ಕೈಜೋಡಿಸುವ ಪ್ರಶಸ್ನೆಯೇ ಉದ್ಭವಿಸುವುದಿಲ್ಲ' ಎಂದು ಕೆ ಟಿ ಆರ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿಗೆ ಆಘಾತ
ತೆಲಂಗಾಣದಲ್ಲಿ 17 ಲೋಕಸಭಾ ಕ್ಷೇತ್ರಗಳಿವೆ. ಅದರಲ್ಲಿ 13 ಕ್ಷೇತ್ರಗಳಲ್ಲಿ ಟಿಆರ್ ಎಸ್ ಜಯಗಳಿಸಿದೆ. ದಕ್ಷಿಣದ ರಾಜ್ಯಗಳಲ್ಲಿ ತನ್ನ ಪ್ರಾಬಲ್ಯ ಸಾಧಿಸಲು ಟಿಆರ್ ಎಸ್ ಬೆಂಬಲ ಬಿಜೆಪಿಗೆ ಅತ್ಯಗತ್ಯ. ಏಕೆಂದರೆ ಈಗಾಗಲೇ ಆಂಧ್ರಪ್ರದೇಶದ ಟಿಡಿಪಿ(ತೆಲುಗು ದೇಶಂ ಪಕ್ಷ) ಎನ್ ಡಿಎ ಮೈತ್ರಿಕೂಟದಿಂದ ಹೊರಬಿದ್ದಿದೆ. ಆದರೆ ಕೆಟಿ ಆರ್ ಇಂಥ ಹೇಳಿಕೆ ನೀಡಿರುವುದು ಬಿಜೆಪಿಗೆ ಆಘಾತವನ್ನುಂಟು ಮಾಡಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಪಡೆಯಲು ಟಿಆರ್ ಎಸ್ ಇಂಥ ಹೇಳಿಕೆ ನೀಡಿರಬಹುದಾ? ವಿಧಾನಸಭಾ ಚುನಾವಣೆಯ ನಂತರ ಎನ್ ಡಿಎ ಸರ್ಕಾರಕ್ಕೆ ಬೆಂಬಲ ನೀಡಲು ಮುಂದಾದರೂ ಅಚ್ಚರಿ ಇಲ್ಲ ಎಂಬ ಸನ್ನಿವೇಶ ನಿರ್ಮಾಣವಾಗುತ್ತದೆಯಾ? ಕಾದುನೋಡಬೇಕು.












Click it and Unblock the Notifications