TRSಗೆ ರಾಜೀನಾಮೆ ನೀಡಿ ರಾಹುಲ್ ರನ್ನು ಭೇಟಿಯಾದ ತೆಲಂಗಾಣದ ಶ್ರೀಮಂತ ಸಂಸದ
ಹೈದರಾಬಾದ್, ನವೆಂಬರ್ 21: ಇತ್ತೀಚೆಗಷ್ಟೇ ಟಿಆರ್ ಎಸ್(ತೆಲಂಗಾಣ ರಾಷ್ಟ್ರೀಯ ಸಮಿತಿ) ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೊಂಡ ವಿಶ್ವೇಶ್ವರ ರೆಡ್ಡಿ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.
ತೆಲಂಗಾಣದ ಶ್ರೀಮಂತ ಸಂಸದರಾಗಿರುವ 55 ವರ್ಷ ವಯಸ್ಸಿನ ರೆಡ್ಡಿ, ಇಲ್ಲಿನ ರಂಗಾ ರೆಡ್ಡಿ ಜಿಲ್ಲೆಯ ಚೆವೆಲ್ಲಾ ಕ್ಷೇತ್ರದ ಸದಸ್ಯರಾಗಿದ್ದರು. ಪಕ್ಷದ ಮುಖಡರೊಂದಿಗಿನ ಭಿನ್ನಾಭಿಪ್ರಾಯದ ಕಾರಣ ಅಸಮಾಧಾನಗೊಂಡಿದ್ದ ರೆಡ್ಡಿ, ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ತಾವು ಲೋಕಸಭಾ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.
ಈ ನಡುವೆ ದೆಹಲಿಯಲ್ಲಿ ಬುಧವಾರ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದು, ಅವರು ಕಾಂಗ್ರೆಸ್ ಸೇರುತ್ತಾರೆ ಎಂಬ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದಂತಾಗಿದೆ.

ಟಿಆರ್ ಎಸ್ ನ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ ರೆಡ್ಡಿ ಅವರ ರಾಜೀನಾಮೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಭಾರೀ ಹಿನ್ನಡೆಯಾದರೆ ಅಚ್ಚರಿಯಿಲ್ಲ.
"ಪಕ್ಷಕ್ಕೆ ನನ್ನ ಅಗತ್ಯವಿದ್ದಾಗ ಅಂದರೆ 2014 ರಲ್ಲಿ ನಾನು ಪಕ್ಷಕ್ಕಾಗಿ ಹೋರಾಡಿದೆ. ಆದರೆ ನಂತರ ತೆಲಂಗಾಣ ಮತ್ತು ನಮ್ಮ ಸಿದ್ಧಾಂತವನ್ನು ವಿರೋಧಿಸುವವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಯಾರು ತೆಲಂಗಾಣದ ಬಗ್ಗೆ ಹೋರಾಡುತ್ತಾರೋ, ಅಂಥ ಸಿದ್ಧಾಂತ ಇಟ್ಟುಕೊಂಡಿದ್ದಾರೋ ಅವರ್ಯಾರೂ ಟಿಆರ್ ಎಸ್ ನಲ್ಲಿ ಇರಬೇಡಿ, ಅಲ್ಲಿದ್ದರೆ ಯಾವುದೇ ಪ್ರಯೋಜನವಿಲ್ಲ" ಎಂದು ರಾಜೀನಾಮೆ ನೀಡಿದ ನಂತರ ರೆಡ್ಡಿ ಹೇಳಿದ್ದರು.












Click it and Unblock the Notifications