Breaking; ಟಾಲಿವುಡ್ ಹಿರಿಯ ನಟ ವೆಂಕಟ ಕೃಷ್ಣಂರಾಜು ವಿಧಿವಶ
ಹೈದರಾಬಾದ್, ಸೆಪ್ಟೆಂಬರ್ 11: ಟಾಲಿವುಡ್ನ ಹಿರಿಯ ನಟ, ನಿರ್ಮಾಪಕ ವೆಂಕಟ ಕೃಷ್ಣಂ ರಾಜು (82) ವಿಧಿವಶರಾದರು. 183ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದ ಅವರು ಮೂರು ಬಾರಿ ರಾಜ್ಯ ಸರ್ಕಾರ ನೀಡುವ ನಂದಿ ಪ್ರಶಸ್ತಿ ಪಡೆದಿದ್ದರು.
ಅನಾರೋಗ್ಯದಿಂದ ಬಳಲುತ್ತಿದ್ದ ಉಪ್ಪಲಪತಿ ವೆಂಕಟ ಕೃಷ್ಣಂ ರಾಜುರನ್ನು ಶನಿವಾರ ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಭಾನುವಾರ ಮುಂಜಾನೆ 3.25ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು.
ವೆಂಕಟ ಕೃಷ್ಣಂ ರಾಜು ನಟ ಪ್ರಭಾಸ್ ದೊಡ್ಡಪ್ಪ. ತಮ್ಮ ಸಾಹಸಮಯ ಅಭಿನಯದಿಂದಲೇ ಟಾಲಿವುಡ್ನಲ್ಲಿ ರೆಬಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದರು. 1966ರಲ್ಲಿ 'ಚಿಲಕ ಗೋರಿಂಕ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ಸಕ್ರಿಯ ರಾಜಕಾರಣಿಯೂ ಆಗಿದ್ದ ವೆಂಕಟ ಕೃಷ್ಣಂ ರಾಜು ತಮ್ಮ ಅತ್ಯುತ್ತಮ ನಟನೆಗಾಗಿ ದಕ್ಷಿಣ ಭಾರತದ ಐದು ಫಿಲ್ಮಫೇರ್ ಪ್ರಶಸ್ತಿ ಪಡೆದಿದ್ದರು. ಆಂಧ್ರ ಪ್ರದೇಶ ಸರ್ಕಾರ ನೀಡುವ ಉತ್ತಮ ನಟ ಪ್ರಶಸ್ತಿಯನ್ನು ಸಹ ಪಡೆದಿದ್ದರು.
ಪತ್ನಿ, ಮೂವರು ಪುತ್ರಿಯರನ್ನು ವೆಂಕಟ ಕೃಷ್ಣಂ ರಾಜು ಅಗಲಿದ್ದಾರೆ. ಅಂತ್ಯಕ್ರಿಯೆಯನ್ನು ಸೋಮವಾರ ನಡೆಸಲಾಗುತ್ತದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. ತೆಲುಗು ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ.
ರಾಜಕೀಯ ಜೀವನ;1990ರಲ್ಲಿ ವೆಂಕಟ ಕೃಷ್ಣಂ ರಾಜು ರಾಜಕೀಯಕ್ಕೆ ಬಂದರು. ಬಿಜೆಪಿ ಸೇರಿದ ಅವರು ಕಕಿನಾಡ ಮತ್ತು ನರಸಾಪುರಂ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು. 1999 ರಿಂದ 2004ರ ತನಕ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿಯ ಕೆಲಸ ಮಾಡಿದ್ದರು.
2009ರಲ್ಲಿ ವೆಂಕಟ ಕೃಷ್ಣಂ ರಾಜು ನಟ ಚಿರಂಜೀವಿ ಸ್ಥಾಪನೆ ಮಾಡಿದ ಪ್ರಜಾ ರಾಜ್ಯಂ ಪಕ್ಷಕ್ಕೆ ಸೇರ್ಪಡೆಗೊಂಡರು. 2009ರ ಲೋಕಸಭೆ ಚುನಾವಣೆಯಲ್ಲಿ ರಾಜಮಂಡ್ರಿ ಕ್ಷೇತ್ರದಿಂದ ಕಣಕ್ಕಿಳಿದು ಸೋಲು ಕಂಡಿದ್ದರು.
ನಟಿಸಿದ ಚಿತ್ರಗಳು; ವೆಂಕಟ ಕೃಷ್ಣಂ ರಾಜು ಜೀವನ ತರಂಗಲು, ಕೃಷ್ಣವೇಣಿ, ಭಕ್ತ ಕಣ್ಣಪ್ಪ, ಅಮರ ದೀಪಂ, ಸತಿ ಸಾವಿತ್ರಿ, ಸೀತಾ ರಾಮುಲು, ಟ್ಯಾಕ್ಸಿ ಡ್ರೈವರ್, ರಂಗೂನ್ ರೌಡಿ, ತ್ರಿಶೂಲಂ, ಮರಣ ಶಾಸನ, ವಿಶ್ವನಾಥ ನಾಯಕುಡು ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು.












Click it and Unblock the Notifications