ನೋಟು ನಿಷೇಧ, ಜಗತ್ತಿನ ಶ್ರೀಮಂತ ದೇಗುಲದ ಆದಾಯ ನಿತ್ಯ 2 ಕೋಟಿ ಖೋತಾ
ನೋಟು ನಿಷೇಧದ ಪರಿಣಾಮ ತಿರುಪತಿ ತಿಮ್ಮಪ್ಪನ ನಿತ್ಯದ ಆದಾಯದ ಮೇಲೂ ಆಗಿದೆ. ಈ ಹಿಂದೆ ಆಗುತ್ತಿದ್ದ ಆದಾಯದಲ್ಲಿ ಎರಡು ಕೋಟಿ ಕಡಿಮೆ ಆಗಿದೆಯಂತೆ. ಆ ಕಾರಣಕ್ಕೆ ಟಿಕೆಟ್ ಹಾಗೂ ವಿವಿಧ ಸೇವಾ ದರಗಳನ್ನು ಏರಿಸಲು ಚಿಂತನೆ ನಡೆದಿದೆ
ತಿರುಮಲ, ಫೆಬ್ರವರಿ 18: ತಿರುಪತಿ ತಿಮ್ಮಪ್ಪನಿಗೂ ನೋಟು ನಿಷೇಧದ ಪರಿಣಾಮ ತಾಗಿದಂತಿದೆ. ಏಳು ಬೆಟ್ಟ ಏರಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಇನ್ನು ಮುಂದೆ ಟಿಕೆಟ್ ಬೆಲೆ ಏರಿಕೆ ಮತ್ತು ಇತರ ಸೇವೆಗಳ ಬೆಲೆ ಏರಿಕೆ ತಟ್ಟಲಿದೆ. ಏಕೆಂದರೆ ನೋಟು ನಿಷೇಧದ ನಂತರ ತಿರುಮಲ ತಿರುಪತಿ ದೇವಸ್ಥಾನದ ನಿತ್ಯದ ಆದಾಯದಲ್ಲೇ ಕುಸಿತವಾಗಿದೆ.
ಆ ಕಾರಣಕ್ಕೆ ದೇವರ ದರ್ಶನದ ಟಿಕೆಟ್ ದರ ಸೇರಿದಂತೆ ಇತರ ಸೇವೆಗಳ ಶುಲ್ಕದಲ್ಲಿ ಏರಿಕೆ ಮಾಡಲು ಚಿಂತನೆ ನಡೆದಿದೆ. ನೋಟು ನಿಷೇಧದ ಮುಂಚೆ ದೇವಸ್ಥಾನಕ್ಕೆ ನಿತ್ಯ 5 ಕೋಟಿ ಆದಾಯ ಇತ್ತು. ಅದರಲ್ಲಿ ಬ್ಯಾಂಕ್ ನಲ್ಲಿ ಇಟ್ಟಿದ್ದ ಠೇವಣಿ ಮೇಲಿನ ಬಡ್ಡಿಯೂ ಸೇರಿತ್ತು. ಹುಂಡಿಗೆ ಬೀಳುತ್ತಿದ್ದ ಹಣ, ಟಿಕೆಟ್ ಮಾರಾಟ, ಪ್ರಸಾದ ಇತ್ಯಾದಿ ಮೂಲದಿಂದ ಆದಾಯ ಸಮೃದ್ಧವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನಕ್ಕೆ ಆಧಾರ್ ಕಾರ್ಡ್ ಕಡ್ಡಾಯ!]

ಅದರೆ, ಯಾವಾಗ ನೋಟು ನಿಷೇಧವಾಯಿತೋ ಹಲವು ದಿನಗಳಿಂದ ನಿತ್ಯ ಒಂದರಿಂದ ಎರಡು ಕೋಟಿ ರುಪಾಯಿಯಷ್ಟು ಆದಾಯ ಕಡಿಮೆಯಾಗಿದೆ. ಆದ್ದರಿಂದ ಭಕ್ತರಿಗೆ ಹೊರೆಯಾಗದ ರೀತಿಯಲ್ಲಿ ಆದಾಯವನ್ನು ಸರಿದೂಗಿಸಲು ಯೋಚಿಸುತ್ತಿದ್ದೇವೆ ಎಂದು ಟಿಟಿಡಿ ಅಧ್ಯಕ್ಷ ಚದಲವಾಡ ಕೃಷ್ಣಮೂರ್ತಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಅದಕ್ಕಾಗಿ ಟಿಕೆಟ್ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾಡಲು ಯೋಚಿಸಲಾಗುತ್ತಿದೆ. ಈ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ಕಳುಹಿಸಲಾಗಿದೆ. ಆದರೆ ಅದಕ್ಕೆ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಒಪ್ಪಿಗೆ ನೀಡಿಲ್ಲ. ಟಿಟಿಡಿಯ ಟಿಕೆಟ್ ದರ 50ರಿಂದ 5000ದವರೆಗೆ ಇದೆ.[ತಿರುಪತಿ ಲಡ್ಡುಗೂ ಪರವಾನಗಿಯೇ? ಗೋವಿಂದಾ ಗೋವಿಂದ]
"ಆದಾಯ ಸರಿದೂಗಿಸಲು ಟಿಕೆಟ್ ದರದಲ್ಲಿ ಅಥವಾ ವಿವಿಧ ಸೇವೆಗಳ ದರದಲ್ಲಿ 5 ರಿಂದ 10 ರುಪಾಯಿ ಏರಿಕೆ ಮಾಡಲು ಚಿಂತನೆ ನಡೆಸಿದ್ದೇವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications