ತೃತೀಯ ರಂಗಕ್ಕೆ ಚಾಲನೆ ನೀಡಲು ಕೆಸಿಆರ್- ಮಮತಾ ಭೇಟಿ
ಹೈದರಾಬಾದ್, ಮಾರ್ಚ್ 19: ಬಿಜೆಪಿ ವಿರುದ್ಧ ಹೊಸದಾಗಿ ತೃತೀಯ ರಂಗ ರಚನೆಗೆ ವೇದಿಕೆ ಸಿದ್ಧವಾಗುತ್ತಿದೆ. ಅದರ ಭಾಗವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಸೋಮವಾರ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಆಗಲಿದ್ದಾರೆ. ಬಿಜೆಪಿ- ಕಾಂಗ್ರೆಸ್ಸೇತರ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ಇದಾಗಿದೆ.
ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ತೃತೀಯ ರಂಗ ರಚನೆ ಆಗಬೇಕು. ಅದರ ನೇತೃತ್ವವನ್ನು ವಹಿಸುವುದಕ್ಕೆ ತಾವು ಸಿದ್ಧ ಎಂದು ಚಂದ್ರಶೇಖರ್ ರಾವ್ ಈಚೆಗೆ ಘೋಷಣೆ ಮಾಡಿದ್ದರು. ರಾಜಕಾರಣದ ಬದಲಾವಣೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಕೆಸಿಆರ್ ಹಾಗೂ ಮಮತಾ ಬ್ಯಾನರ್ಜಿ ಅವರ ಭೇಟಿ ಕುತೂಹಲ ಮೂಡಿಸಿದೆ.
ಬಿಜೆಪಿ ಅಂತ್ಯಕಾಲದ ಆರಂಭವಾಗಿದೆ ಎಂದ ಮಮತಾ ಬ್ಯಾನರ್ಜಿ
"ನಿಮ್ಮ ಮಾತಿನಲ್ಲಿ ನಮಗೆ ಸಹಮತವಿದೆ. ನಿಮಗೆ ನಮ್ಮ ಬೆಂಬಲವಿದೆ" ಎಂದು ಈಚೆಗೆ ಮಮತಾ ಬ್ಯಾನರ್ಜಿ ಅವರು ಚಂದ್ರಶೇಖರ್ ರಾವ್ ಗೆ ಈಚೆಗೆ ಬೆಂಬಲ ಸೂಚಿಸಿದ್ದರು. ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಅಭಿವೃದ್ಧಿ ವಿಚಾರದಲ್ಲಿ ಹೀನಾಯವಾಗಿ ಸೋತಿವೆ ಎಂದು ಕೆಸಿಆರ್ ಆರೋಪಿಸಿದ್ದು, ಸಮಾನ ಮನಸ್ಕ ಪಕ್ಷಗಳನ್ನು ಒಟ್ಟು ಮಾಡಿಕೊಂಡು ದೇಶದ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು ಎಂದಿದ್ದಾರೆ.