ತೆಲಂಗಾಣ ಸರ್ಕಾರ ವೆಂಟಿಲೇಟರ್ನಲ್ಲಿದೆ, ಶೀಘ್ರದಲ್ಲಿಯೇ ಪತನವಾಗಲಿದೆ: ಬಿಜೆಪಿ ರಾಜ್ಯಾಧ್ಯಕ್ಷ
ಹೈದರಾಬಾದ್, ಸೆ.20: ತೆಲಂಗಾಣ ಸರ್ಕಾರವು "ವೆಂಟಿಲೇಟರ್" ನಲ್ಲಿದೆ ಮತ್ತು ಅದು ಶೀಘ್ರದಲ್ಲೇ "ಪತನಗೊಳ್ಳುತ್ತದೆ" ಎಂದು ಬಿಜೆಪಿ ತೆಲಂಗಾಣ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ ತೆಲಂಗಾಣ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಸೋಮವಾರ ದಮ್ಮಾಯಿಗುಡದಲ್ಲಿ ಸಾರ್ವಜನಿಕರ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ (ಕೆಸಿಆರ್) ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸ್ಪೀಕರ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ಸದನದಿಂದ ತೆಲಂಗಾಣ ಬಿಜೆಪಿ ಶಾಸಕ ಅಮಾನತು
ಮೇಡ್ಚಲ ಕ್ಷೇತ್ರದಲ್ಲಿ ಯಪ್ರಾಲ್ನಿಂದ ದಮ್ಮಾಯಿಗುಡ್ಡಕ್ಕೆ ಪಾದಯಾತ್ರೆ ನಡೆಸಿ, ಬಳಿಕ ಸಾರ್ವಜನಿಕ ಸಭೆಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರ ಪತನವಾಗುವ ಭವಿಷ್ಯ ನುಡಿದರು..
ಈ ವೇಳೆ ಜವಾಹರ್ ನಗರದಲ್ಲಿನ ಡಂಪಿಂಗ್ ಯಾರ್ಡ್ ಸಮಸ್ಯೆಯ ಬಗ್ಗೆ ಚಂದ್ರಶೇಖರ್ ರಾವ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಟಿಆರ್ಎಸ್ ಸರ್ಕಾರವು "ವೆಂಟಿಲೇಟರ್" ನಲ್ಲಿದೆ ಎಂದು ಹೇಳಿದ್ದಾರೆ.
ಡಂಪಿಂಗ್ ಯಾರ್ಡ್ ಸಮಸ್ಯೆಯಿಂದ ಜನರ ಮೇಲೆ ಪರಿಣಾಮ
''ಟಿಆರ್ಎಸ್ ಸರ್ಕಾರ ವೆಂಟಿಲೇಟರ್ನಲ್ಲಿದ್ದು ಸರಕಾರ ಪತನವಾಗಲಿದೆ, ಡಂಪಿಂಗ್ ಯಾರ್ಡ್ ಸಮಸ್ಯೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಸಮಸ್ಯೆ ಬಗೆಹರಿಸುವ ಹೊಣೆಯನ್ನು ಬಿಜೆಪಿ ವಹಿಸುತ್ತದೆ. ಪಾದಯಾತ್ರೆ ಮುಗಿಸಿ ನಾನೇ ಇಲ್ಲಿಗೆ ಬಂದಿದ್ದೇನೆ, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ಗೆ ಪ್ರೀತಿ ಗೌರವವಿದ್ದರೆ ಅವರು ಇಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಿತ್ತು. ಅವರು ಈಗಲೇ ಬಂದು ತಕ್ಷಣ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು" ಎಂದು ಬಂಡಿ ಸಂಜಯ್ ಆಗ್ರಹಿಸಿದ್ದಾರೆ.
ಟಿಆರ್ಎಸ್ ಕಟ್ಟಿಹಾಕಿ, ಬಿಜೆಪಿಗೆ ಅಧಿಕಾರ ಕೊಡಿ!
''ಕೆಸಿಆರ್ ಅವರು ಮೇಡ್ಚಲ್ ಆರ್ಟಿಸಿ ಡಿಪೋವನ್ನು ಅಡಮಾನವಿಟ್ಟು ಅಲ್ಲಿ ಶಾಪಿಂಗ್ ಮಾಲ್ಗಳನ್ನು ಕಟ್ಟುತ್ತಿದ್ದಾರೆ. ಡಂಪಿಂಗ್ ಯಾರ್ಡ್ ಸಮಸ್ಯೆ ಬಗೆಹರಿಸಲು ಮೂರು ವಿಷಯ ಹೇಳುತ್ತೇನೆ, ಟಿಆರ್ಎಸ್ ಹಿಡಿದು ಡಂಪಿಂಗ್ ಯಾರ್ಡ್ ಬಳಿ ಕಟ್ಟಿಹಾಕಿ, ಬಿಜೆಪಿಗೆ ಅಧಿಕಾರ ಕೊಡಿ ನೋಡೋಣ. ಡಂಪಿಂಗ್ ಯಾರ್ಡ್ ಸಮಸ್ಯೆಯನ್ನು ಹೇಗೆ ಪರಿಹರಿಸಲಾಗುತ್ತದೆ" ಎಂದು ಸವಾಲೆಸೆದಿದ್ದಾರೆ.
"ಕೆಸಿಆರ್ ಅವರನ್ನು ಅಂಬೇಡ್ಕರ್ ಎಂದು ಹೊಗಳುವ ಕೆಲವು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳಿಗೆ ನಾಚಿಕೆಯಾಗಬೇಕು. ಕೆಸಿಆರ್ ಅವರು ಅಂಬೇಡ್ಕರ್ ಬರೆದ ಸಂವಿಧಾನವನ್ನು ಅವಮಾನಿಸುವ ವ್ಯಕ್ತಿ" ಎಂದು ಬಂಡಿ ಸಂಜಯ್ ಆರೋಪಿಸಿದ್ದಾರೆ.
ಕೆಸಿಆರ್ ದಲಿತರಿಗಾಗಿ ಏನನ್ನೂ ಮಾಡಿಲ್ಲ!
ಸಂಸದ ಬಂಡಿ ಸಂಜಯ್ ಕುಮಾರ್, ಕೆಸಿಆರ್ ವಿರುದ್ಧ ಭ್ರಷ್ಟಾಚಾರ ಆರೋಪವನ್ನು ಹೊರಿಸಿದ್ದಾರೆ. "ಕೆಸಿಆರ್ ಕುಟುಂಬಕ್ಕೆ ಇಡಿ ಎಂದರೆ ಕೋವಿಡ್ ಮತ್ತು ಸಿಬಿಐ ಎಂದರೆ ಕಾಲು ನೋಯುತ್ತದೆ. ಬೋಡುಪ್ಪಲ್ನಲ್ಲಿ 7000 ಫ್ಲಾಟ್ಗಳಿಗೆ ನೋಂದಣಿ ಇಲ್ಲ. ಈ ಪ್ರದೇಶದಲ್ಲಿ 100 ಹಾಸಿಗೆಗಳ ಆಸ್ಪತ್ರೆ ಅಥವಾ ಪದವಿ ಕಾಲೇಜು ಇಲ್ಲ. ಭೂಕಬಳಿಕೆ ನಡೆಯುತ್ತಿದೆ" ಎಂದು ಆರೋಪಿಸಿದ್ದಾರೆ.
"ಕೇಂದ್ರ ಸರ್ಕಾರದ ಹಣವನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ಕಮಿಷನ್ಗಾಗಿ ಟ್ರ್ಯಾಕ್ಟರ್ಗಳನ್ನು ಖರೀದಿಸಲಾಗುತ್ತಿದೆ. ಅವರು ನೂರಾರು ಕೋಟಿ ಆಸ್ತಿಯನ್ನು ಗಳಿಸುತ್ತಿದ್ದಾರೆ" ಎಂದು ಸಂಜಯ್ ಹೇಳಿದ್ದಾರೆ.
ಈ ವೇಳೆ ತೆಲಂಗಾಣ ಬಿಜೆಪಿ ಅಧ್ಯಕ್ಷ ಕೆಸಿಆರ್ ಅವರನ್ನು "ದಲಿತ ಬಂಧು" ಎಂದು ಕರೆಯುವ ಮೂಲಕ ವ್ಯಂಗ್ಯವಾಡಿದರು. ಕೆಸಿಆರ್ ಅವರು ದಲಿತರಿಗಾಗಿ ಏನನ್ನೂ ಮಾಡಿಲ್ಲ ಎಂದು ಆರೋಪಿಸಿದರು.
ದಲಿತರಿಗೆ ಮೂರುಭೂಮಿ ಎಕರೆ ಏಕೆ ನೀಡುತ್ತಿಲ್ಲ..? ದಲಿತ ಬಂಧು ಎನಿಸಿಕೊಳ್ಳುವವ ಯಾಕೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡಿಲ್ಲ?" ಎಂದು ಸಂಜಯ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುವಾಗ ಕೆಸಿಆರ್ ಅವರನ್ನು ಪ್ರಶ್ನಿಸಿದ್ದಾರೆ.
ಚುನಾವಣೆಯ ಕಾರಣದಿಂದ ಎಸ್ಟಿ ಮಿಸಲಾತಿ ವಿಷಯ
"ಎಲ್ಲಾ ಮಾಫಿಯಾಗಳ ಕೇಂದ್ರ ಬಿಂದು ಟಿಆರ್ಎಸ್. ಮೇಡ್ಚಲ ಕ್ಷೇತ್ರದಲ್ಲಿ ಎಷ್ಟು ಬಡವರಿಗೆ ಡಬಲ್ ಬೆಡ್ರೂಂ ಮನೆ ನೀಡಲಾಗಿದೆ? ಇಲ್ಲಿ ಎಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಮತ್ತು ನಿರುದ್ಯೋಗ ಭತ್ಯೆ ಸಿಕ್ಕಿದೆ?" ಎಂದು ಕಿಡಿ ಕಾರಿದ್ದಾರೆ.
ಕೆಸಿಆರ್ ಅವರು ಚುನಾವಣೆಯ ಕಾರಣದಿಂದ ಪರಿಶಿಷ್ಟ ಪಂಗಡಗಳ (ಎಸ್ಟಿ) ಮೀಸಲಾತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಸಂಜಯ್ ಆರೋಪಿಸಿದ್ದಾರೆ.
"ಮುಂಗೋಡು ಉಪಚುನಾವಣೆಯಲ್ಲಿ ಎಸ್ಟಿ ಮತಗಳು ಜಾಸ್ತಿ ಇದ್ದು, ಅದಕ್ಕಾಗಿಯೇ ಎಸ್ಟಿ ಮೀಸಲಾತಿ ಬಗ್ಗೆ ಮಾತನಾಡುತ್ತಾರೆ, ಜನರಿಗೆ ಮೋಸ ಮಾಡುತ್ತಿದ್ದಾರೆ. 8 ವರ್ಷಗಳಿಂದ ಎಸ್ಟಿಗಳಿಗೆ ಏಕೆ ಮೀಸಲಾತಿ ನೀಡಿಲ್ಲ ಎಂಬುದಕ್ಕೆ ಉತ್ತರ ನೀಡಬೇಕು. ದ್ರೌಪದಿ ಮುರ್ಮು ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ, ಕೆಸಿಆರ್ ಅದನ್ನು ಬಯಸಲಿಲ್ಲ" ಎಂದು ತೆಲಂಗಾಣ ಬಿಜೆಪಿ ಮುಖ್ಯಸ್ಥರು ಹೇಳಿದ್ದಾರೆ.
''ಪ್ರಜಾ ಸಂಗ್ರಾಮ ಯಾತ್ರೆಗೆ ವಿಶೇಷ ಸ್ಪಂದನೆ ಸಿಗುತ್ತಿದ್ದು, ಕೆಸಿಆರ್ ಭಯದಿಂದ ನಡುಗುತ್ತಿದ್ದು, ಯಾತ್ರೆಗೆ ತಡೆಯೊಡ್ಡಲು ಮುಂದಾಗಿದ್ದಾರೆ. ಬಿಜೆಪಿಗೆ ಅವಕಾಶ ನೀಡಿ, ಈ ತಿಂಗಳು 22ರಂದು ಇಬ್ರಾಹಿಂಪಟ್ಟಣದಲ್ಲಿ ನಡೆಯುವ ಸಾರ್ವಜನಿಕ ಸಭೆಗೆ ನೀವೆಲ್ಲರೂ ಆಗಮಿಸಬೇಕಾಗಿ ವಿನಂತಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮನವಿ ಮಾಡಿದ್ದಾರೆ.