ತೆಲಂಗಾಣ; ಕೊರೊನಾ ವೈರಸ್ ಸೋಂಕಿಗೆ ವೈದ್ಯರೊಬ್ಬರು ಬಲಿ
ಹೈದರಾಬಾದ್, ಜೂನ್ 22 : ತೆಲಂಗಾಣ ರಾಜ್ಯದ ಕೈರತಾಬಾದ್ನಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದ್ದ ವೈದ್ಯರೊಬ್ಬರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ವೈದ್ಯರು ಸೋಂಕಿನಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ.
Recommended Video
ಜ್ವರದ ಕಾರಣ ಜೂನ್ 16ರಂದು ಜನರಲ್ ಫಿಜಿಶಿಯನ್ ಡಾ. ಗಣೇಶ್ವರರಾವ್ (65) ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 20ರಂದು ಹೈದರಾಬಾದ್ನ ಗಾಂಧಿ ಆಸ್ಪತ್ರೆಗೆ ಅವರನ್ನು ಸ್ಥಳಾಂತರ ಮಾಡಲಾಗಿತ್ತು.
ಡಾ. ಗಣೇಶ್ವರರಾವ್ ಕೋವಿಡ್ -19 ಪರೀಕ್ಷಾ ವರದಿ ಪಾಸಿಟೀವ್ ಬಂದಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇವರು ರಾಜ್ಯದಲ್ಲಿ ಕೋವಿಡ್ - 19 ಸೋಂಕಿನಿಂದ ಮೃತಪಟ್ಟ ಮೊದಲ ವೈದ್ಯರಾಗಿದ್ದಾರೆ. ಇವರು ಹೈದರಾಬಾದ್ನ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಸದಸ್ಯರಾಗಿದ್ದರು.

"ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುವ ವೈದ್ಯರು, ನರ್ಸ್ಗಳಿಗೆ ಕೋವಿಡ್ - 19 ಬೇಗನೆ ತಗುಲಬಹುದು. ಇದಕ್ಕಾಗಿಯೇ ಆಸ್ಪತ್ರೆಯ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ" ಎಂದು ಹೈದರಾಬಾದ್ ಐಎಂಎ ಜಂಟಿ ಕಾರ್ಯದರ್ಶಿ ಡಾ. ಅರ್ಜುನ್ ಹೇಳಿದ್ದಾರೆ.
ಜೂನ್ ಮೊದಲ ವಾರದಲ್ಲಿ ತೆಲಂಗಾಣ ಹೈಕೋರ್ಟ್ ಕೋವಿಡ್ -19 ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡದಿರುವುದಕ್ಕೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್ ವಿತರಣೆ ಮಾಡದಿರುವುದಕ್ಕೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.
ಹೈದರಾಬಾದ್ನ ಉಸ್ಮಾನಿಯಾ ಆಸ್ಪತ್ರೆಯ 50 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಅನಾರೋಗ್ಯ ಉಂಟಾದಾಗ ಕೋವಿಡ್ - 19 ಪರೀಕ್ಷೆ ನಡೆಲಾಗಿತ್ತು. ಬಳಿಕ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗೆ ಪರೀಕ್ಷೆ ನಡೆಸಲು ಆರೋಗ್ಯ ಇಲಾಖೆ ಸೂಚನೆ ನೀಡಿತ್ತು.
ತೆಲಂಗಾಣ ರಾಜ್ಯದಲ್ಲಿ ಕೊರೊವಾ ವೈರಸ್ ಸೋಂಕಿತರ ಸಂಖ್ಯೆ 7,802. ಇದುವರೆಗೂ ರಾಜ್ಯದಲ್ಲಿ 210 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3731.












Click it and Unblock the Notifications