ಪ್ರಣಯ್ ಗೆ ಮರುಜನ್ಮ: ಅಮೃತಾ ಮಡಿಲಲ್ಲೀಗ ಮುದ್ದು ಕಂದ!
ಹೈದರಾಬಾದ್, ಜನವರಿ 26: ಮರ್ಯಾದಾ ಹತ್ಯೆಗೆ ಬಲಿಯಾಗಿದ್ದ ತೆಲಂಗಾಣದ ಪ್ರಣಯ್ ಮರುಜನ್ಮ ಪಡೆದಿದ್ದಾರೆ.. ಹೌದು ಪುತ್ರನ ರೂಪದಲ್ಲಿ!
ಕಳೆದ ಸೆಪ್ಟೆಂಬರ್ ನಲ್ಲಿ ದೇಶನ್ನು ಬೆಚ್ಚಿ ಬೀಳಿಸಿದ ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಅವರ ಪತ್ನಿ ಅಮೃತಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪ್ರಣಯ್ ಸಾಯುವ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಅಮೃತಾ, 'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ' ಎಂದಿದ್ದರು.
'ಪ್ರಣಯ್ ನನಗೆ ನೀಡಿದ ಅತ್ಯಮೂಲ್ಯ ಉಡುಗೊರೆ ನನ್ನ ಗರ್ಭದಲ್ಲಿದೆ'
ಇದೀಗ ಆ ಉಡುಗೊರೆ ಅವರ ಕೈಗೆ ಸಿಕ್ಕಿದೆ! ಜ.14 ರಂದು ಅವರು ತೆಲಂಗಾಣದ ಆಸ್ಪತ್ರೆಯೊಂದರಲ್ಲಿ ಗಂಡು ಮಗುವಿಗೆ ಜನನ ನೀಡಿದ್ದು, ತಾಯಿ ಮತ್ತು ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ. ಅಮೃತಾ ಅವರನ್ನು ಅವರ ಅತ್ತೆ, ಅಂದರೆ ಪ್ರಣಯ್ ಅವರ ತಾಯಿಯೇ ನೋಡಿಕೊಳ್ಳುತ್ತಿದ್ದಾರೆ.
ಘಟನೆಯ ವಿವರ
ಮನೆಯವರ ವಿರೋಧದ ಹೊರತಾಗಿಯೂ ಅಂತರ್ಜಾತೀಯ ವಿವಾಹವಾಗಿದ್ದ ಅಮೃತಾ ಮತ್ತು ಪ್ರಣಯ್ ಸೆ.14 ರಂದು ಮಿರ್ಯಾಲಗುಡದ ಜ್ಯೋತಿ ಆಸ್ಪತ್ರೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯ ಹೊರಗಿದ್ದ ಪ್ರಣಯ್ ನನ್ನು ಕೆಲ ಅಪರಿಚಿತ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಪ್ರಣಯ್ ಸಾವಿಗೆ ತನ್ನ ತಂದೆ ಮಾರುತಿ ರಾವ್ ಅವರೇ ಕಾರಣ. ಅವರಲ್ಲದೆ ಇನ್ನ್ಯಾರೂ ಪ್ರಣಯ್ ನನ್ನು ಕೊಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂದು ಅಮೃತಾ ದೂರಿದ್ದರು.ನಂತರ ಪೊಲೀಸರು ಅವರನ್ನು ಬಂಧಿಸಿದ್ದರು.
ಪ್ರಣಯ್ ಕುಟುಂಬ ಒಪ್ಪಿಕೊಂಡಿತ್ತು
ಈ ಜೋಡಿಯನ್ನು ಪ್ರಣಯ್ ಅವರ ಕುಟುಂಬಸ್ಥರು ಮೊದಲು ಒಪ್ಪಿಕೊಂಡಿರಲಿಲ್ಲ. ಆದರೆ ಇಬ್ಬರೂ ಮದುವೆಯಾಗಿದ್ದಾರೆ ಎಂಬುದು ತಿಳಿದ ಮೇಲೆ ಕ್ರಮೇಣ ಈ ಜೋಡಿಯನ್ನು ಒಪ್ಪಿಕೊಂಡಿದ್ದರು. ಪ್ರಣಯ್ ಕುಟುಂಬ ಇವರನ್ನು ಒಪ್ಪಿಕೊಂಡ ನಂತರ ಆಗಸ್ಟ್ ನಲ್ಲಿ ಇಬ್ಬರ ಅದ್ಧೂರಿ ಆರತಕ್ಷತೆ ಸಹ ನಡೆದಿತ್ತು.
'ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!'
ಅಳಿಯನ ಹತ್ಯೆಗೆ ಸಂಚು ರೂಪಿಸುತ್ತಿದ್ದ ಮಾವ!
ತೆಲಂಗಾಣವನ್ನು ಬೆಚ್ಚಿ ಬೀಳಿಸಿದ ಈ ಘಟನೆಯಲ್ಲಿ ತಾಯಿ-ಮಗಳ ಫೋನ್ ಸಂಭಾಷಣೆಯೇ ಪ್ರಣಯ್ ಪ್ರಾಣಕ್ಕೆ ಮುಳುವಾಗಿದ್ದು ದುರಂತದ ವಿಷಯ. ಅಮೃತಾ ಗರ್ಭಿಣಿ ಎಂಬುದು ತಿಳಿಯುತ್ತಿದ್ದಂತೆಯೇ ಅವಳ ತಾಯಿ ಮನಸ್ತಾಪವನ್ನೆಲ್ಲ ಮರೆತು ಮಗಳಿಗೆ ಫೊನ್ ಮಾಡಲು ಆರಂಭಿಸಿದ್ದರು. ಮಗಳ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳುವಂತೆ ಕೇಳುತ್ತಿದ್ದರು. ಈ ಸಂದರ್ಭದಲ್ಲಿ ಒಂದೆರಡು ಬಾರಿ ಮಗಳೊಂದಿಗೆ ಮಾತನಾಡಿದ್ದ ಮಾರುತಿ ರಾವ್, ಗರ್ಭಪಾತ ಮಾಡಿಸಿಕೊಳ್ಳುವಂತೆಯೂ ಪೀಡಿಸಿದ್ದರು. ಆದರೆ ಅದಕ್ಕೆ ಅಮೃತಾ ಒಪ್ಪಿರಲಿಲ್ಲ. ಅಮೃತಾ ಮತ್ತು ಪ್ರಣಯ್ ಚಲನವಲನಗಳ ಬಗ್ಗೆ ಅಮೃತಾ ತಾಯಿಯ ಬಳಿ ಮಾರುತಿ ರಾವ್ ಮಾಹಿತಿ ಕಲೆಹಾಕುತ್ತಿದ್ದ. ಆದರೆ ಪತಿಯ ಮನಸ್ಸಿನಲ್ಲಿ ಪ್ರಣಯ್ ನನ್ನು ಸಾಯಿಸುವ ಕ್ರೂರ ಕೊಲೆಗಾರನಿದ್ದಾನೆ ಎಂಬುದು ಗೊತ್ತಿಲ್ಲದೆ, ಅಮೃತಾ ತಾಯಿ ಎಲ್ಲವನ್ನೂ ಮುಗ್ಧವಾಗಿ ಹಂಚಿಕೊಳ್ಳುತ್ತಿದ್ದರು.
ಮಗಳನ್ನೇ ವಿಧವೆಯನ್ನಾಗಿ ಮಾಡಿದ ತಂದೆ
ಅಂತರ್ಜಾತೀಯ ವಿವಾಹವಾಗಿ, ಪೋಷಕರ ವಿರೋಧದ ನಡುವೆಯೂ ಮನೆಬಿಟ್ಟು ತೆರಳಿದ ಕಾರಣಕ್ಕೆ ಅಮೃತಾ ಅವರ ತಂದೆ ಮಾರುತಿ ರಾವ್ ಅವರಿಗೆ, ತಮ್ಮ ಘನತೆಗೆ ಕುಂದುಂಟಾಗಿದೆ' ಎಂಬ ನೋವಿತ್ತು. ಆ ಹತಾಶೆಯಲ್ಲಿ ಸುಮಾರು ನಾಲ್ಕು ಬಾರಿ ಪ್ರಣಯ್ ನನ್ನು ಹತ್ಯೆಗೈಯ್ಯಲು ಅವರು ಮಾಡಿದ್ದ ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಸೆ.14 ರ ಅವರ ಪ್ರಯತ್ನ ಕೈಗೂಡಿತು. ಜಾತಿ, ಪ್ರತಿಷ್ಟೆಯ ಹುಚ್ಚಿಗೆ ತನ್ನ ಗರ್ಭಿಣಿ ಮಗಳನ್ನೇ ತಂದೆ ವಿಧವೆಯನ್ನಾಗಿ ಮಾಡಿದ್ದರು.