ಟಿಆರ್ಎಸ್ ಸರ್ಕಾರದ ಆಡಳಿತ ಟೀಕಿಸಿದ ರಾಹುಲ್ ಗಾಂಧಿ
ಹೈದರಾಬಾದ್ ಜೂನ್ 2: "ಉತ್ತಮ ಭವಿಷ್ಯಕ್ಕಾಗಿ ಜನರ ಆಕಾಂಕ್ಷೆಗಳೊಂದಿಗೆ ನೂತನ ರಾಜ್ಯ ತೆಲಂಗಾಣ ಉದಯಿಸಿದೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ನೇತೃತ್ವದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಸರಕಾರದಿಂದ ತೀವ್ರ ದುರಾಡಳಿತವನ್ನು ರಾಜ್ಯ ಅನುಭವಿಸಿದೆ,'' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ತೆಲಂಗಾಣ ರಚನೆಯ ದಿನ (ಜೂನ್ 2) ಅಂಗವಾಗಿ ಮಾತನಾಡಿದ ಅವರು, "ತೆಲಂಗಾಣ ರಾಜ್ಯವನ್ನು ಮಾದರಿ ರಾಜ್ಯವಾಗಿ ಅಭಿವೃದ್ಧಿಪಡಿಸಲು ಹಾಗೂ ರಾಜ್ಯದ ರೈತರು, ಕಾರ್ಮಿಕರು, ಬಡವರು ಸೇರಿದಂತೆ ಎಲ್ಲರ ಏಳಿಗೆಗಾಗಿ ಕಾಂಗ್ರೆಸ್ ಬದ್ಧವಾಗಿದೆ,'' ಎಂದು ಹೇಳಿದರು.
ಜೆಡಿಎಸ್ ಮುಖಂಡನ ಹತ್ಯೆ: ಪೊಲೀಸ್ ಅಧಿಕಾರಿಗಳ ವಿರುದ್ಧ ಹೆಚ್.ಡಿ.ರೇವಣ್ಣ ಗರಂ
"ಭಾರತದ ನೂತನ ರಾಜ್ಯವಾದ ತೆಲಂಗಾಣವು ಉತ್ತಮ ಭವಿಷ್ಯಕ್ಕಾಗಿ ಜನರ ಅಭಿಲಾಷೆಗಳೊಂದಿಗೆ ಉದಯಿಸಿದೆ. ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾ ಗಾಂಧಿ ಜನರ ಧ್ವನಿಯನ್ನು ಆಲಿಸಿದ್ದಾರೆ ಹಾಗೂ ತೆಲಂಗಾಣದ ಕನಸನ್ನು ನನಸಾಗಿಸಲು ನಿಸ್ವಾರ್ಥವಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ನನಗೆ ಹೆಮ್ಮೆಯಿದೆ,'' ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Breaking: ಸೋನಿಯಾ ಗಾಂಧಿಗೆ ಕೊರೋನಾ ಪಾಸಿಟಿವ್
ತೆಲಂಗಾಣ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧ
"ಕಳೆದ ಎಂಟು ವರ್ಷಗಳಲ್ಲಿ ತೆಲಂಗಾಣವು ಟಿಆರ್ಎಸ್ ಸರಕಾರದಿಂದ ತೀವ್ರ ದುರಾಡಳಿತವನ್ನು ಅನುಭವಿಸಿದೆ. ತೆಲಂಗಾಣ ರಚನೆಯ ದಿನವಾದ ಇಂದು, ವೈಭವಯುತ ತೆಲಂಗಾಣ ನಿರ್ಮಿಸುವ ಕಾಂಗ್ರೆಸ್ನ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ. ತೆಲಂಗಾಣ ರಾಜ್ಯವನ್ನು ಅಭಿವೃದ್ಧಿ ಯೋಜನೆಗಳಿಂದ ಮಾದರಿ ರಾಜ್ಯವನ್ನಾಗಿ ಮಾಡಲು, ವಿಶೇಷವಾಗಿ ರೈತರು, ಕಾರ್ಮಿಕರು, ಬಡವರು ಸೇರಿದಂತೆ ಎಲ್ಲ ವರ್ಗದ ಜನರ ಏಳಿಗೆಗಾಗಿ ಶ್ರಮಿಸಲು ಕಾಂಗ್ರೆಸ್ ಬದ್ಧವಾಗಿದೆ,'' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಜೆಪಿ ಕೈಯಲ್ಲಿ ಟಿಆರ್ಎಸ್ ರಿಮೋಟ್
ಇನ್ನೊಂದೆಡೆ ಇತ್ತೀಚಿಗೆ ಹೈದರಾಬಾದ್ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, "ಟಿಆರ್ಎಸ್ ರಿಮೋಟ್ ಕಂಟ್ರೋಲ್ ಬಿಜೆಪಿ ಕೈಯಲ್ಲಿದೆ, ರಾಜ್ಯದಲ್ಲಿ ಆಡಳಿತಾರೂಢ ಟಿಆರ್ಎಸ್ ಸರಕಾರವು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ,'' ಎಂದು ಆರೋಪಿಸಿದ್ದರು.
ತೆಲಂಗಾಣದಲ್ಲಿ ರಾಜರ ಆಳ್ವಿಕೆ
"ತೆಲಂಗಾಣದಲ್ಲಿ ಸದ್ಯಕ್ಕೆ ಒಬ್ಬ ಮುಖ್ಯಮಂತ್ರಿ ಆಳ್ವಿಕೆ ನಡೆಸುತ್ತಿಲ್ಲ. ರಾಜ ಆಳ್ವಿಕೆ ನಡೆಸುತ್ತಿದ್ದಾರೆ. ತೆಲಂಗಾಣ ರಾಜ್ಯವು ರಚನೆಯಾದ ಸಂದರ್ಭದಲ್ಲಿ ಅದು ಮಾದರಿ ರಾಜ್ಯವಾಗಲಿದೆ ಎಂದು ಕಾಂಗ್ರೆಸ್ ಭಾವಿಸಿತ್ತು. ಆದರೆ ರಾಜ್ಯದ ಜನರ ಕನಸನ್ನು ಕೆಸಿಆರ್ ನಾಶ ಮಾಡಿದ್ದಾರೆ,'' ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದರು.
"ಕಾಂಗ್ರೆಸ್ ಪಕ್ಷವು ಎಂದಿಗೂ ಭ್ರಷ್ಟ ಟಿಆರ್ಎಸ್ ಪಕ್ಷದೊಂದಿಗೆ ಕೈಜೋಡಿಸುವುದಿಲ್ಲ. ಕೇವಲ ಒಂದು ಕುಟುಂಬಕ್ಕೆ ಅನುಕೂಲ ಮಾಡಿಕೊಡಲು ತೆಲಂಗಾಣ ರಚನೆಯಾಗಿಲ್ಲ. ತೆಲಂಗಾಣಕ್ಕೆ ದ್ರೋಹ ಬಗೆದಿರುವ ಪಕ್ಷದೊಂದಿಗೆ ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಿಲ್ಲ,'' ಎಂದು ಹೇಳಿದ್ದರು.
ಭಷ್ಟ್ರರನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ
"ರಾಜ್ಯದಲ್ಲಿ ರೈತರ ಆತ್ಮಹತ್ಯೆಯಿಂದಾಗಿ ಸಾವಿರಾರು ವಿಧವೆಯರು ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಅಂಥವರ ಜೀವನದ ಜವಾಬ್ದಾರಿ ಹೊತ್ತುಕೊಳ್ಳುವವರು ಯಾರು?. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವು ಟಿಆರ್ಎಸ್ ಸರಕಾರವನ್ನು ಅಧಿಕಾರದಿಂದ ದೂರ ಇಡಲಿದ್ದೇವೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಟಿಆರ್ಎಸ್ ನಡುವೆ ನೇರ ಹಣಾಹಣಿಯಾಗಿದೆ. ತೆಲಂಗಾಣದ ಕನಸನ್ನು ಹಾಳು ಮಾಡಿ ಕೋಟ್ಯಾಂತರ ರುಪಾಯಿ ದೋಚಿರುವವರನ್ನು ಜನರು ಕ್ಷಮಿಸುವುದಿಲ್ಲ'' ಎಂದು ರಾಹುಲ್ ಗಾಂಧಿ ಗುಡುಗಿದ್ದರು.
ತೃತೀಯ ರಂಗ ರಚನೆಗೆ ಕೆಸಿಆರ್ ಮುಂದು
ಇನ್ನೊಂದೆಡೆ 2024ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅನ್ನು ಹೊರಗಿಟ್ಟು ತೃತೀಯ ರಂಗವನ್ನು ಬಲಪಡಿಸುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡಲು ತೆಲಂಗಾಣ ಕೆ. ಸಿ. ಚಂದ್ರಶೇಖರ್ ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಈ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಜೆಡಿಎಸ್ ಸೇರಿದಂತೆ ಸಮಾನ ಮನಸ್ಕ ಪಕ್ಷಗಳ ಮುಖ್ಯಸ್ಥರನ್ನು ಕೆ. ಸಿ. ಚಂದ್ರಶೇಖರ್ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ. ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ಮುಖ್ಯಮಂತ್ರಿಗಳು ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಅವರು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ.
ತೃತೀಯ ರಂಗ ರಚನೆ ಕುರಿತು ವಿಜಯದಶಮಿ ದಿನದಂದು ಅಧಿಕೃತ ಘೋಷಣೆ ಹೊರಬೀಳಲಿದೆ ಎನ್ನುವ ಮಾಹಿತಿ ಇದೆ. ಟಿಆರ್ಎಸ್, ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್, ಸಮಾಜವಾದಿ ಪಕ್ಷ, ಜೆಡಿಎಸ್ ಸೇರಿದಂತೆ ಕೆಲವು ಚಿಕ್ಕ ಪುಟ್ಟ ಪ್ರದೇಶಿಕ ಪಕ್ಷಗಳು ತೃತೀಯ ರಂಗದಲ್ಲಿ ಇರಲಿವೆ ಎಂಬುದು ತಿಳಿದುಬಂದಿದೆ.