ಬಿಜೆಪಿ -ಟಿಡಿಪಿ ಬಿರುಕಿಗೆ ಯಾವ 'ಸ್ಟಾರ್' ಕಾರಣ?
ಹೈದರಾಬಾದ್,ಏ.18: ಸೀಮಾಂಧ್ರದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಉಂಟಾದ ಮನಸ್ತಾಪ ಈಗ ಬಿಜೆಪಿ-ಟಿಡಿಪಿ ಮೈತ್ರಿಗೆ ಕುತ್ತಾಗಿದೆ. ಈ ಬಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಬಹಿರಂಗವಾಗಿ ಘೋಷಿಸಿದ್ದಾರೆ. ಅದರೆ, ನಾಯ್ಡು ಮನ ಓಲೈಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಬಿಜೆಪಿಯ ಕೆಲ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ತೆಲುಗುದೇಶಂ ಅಪಸ್ವರ ಎತ್ತಿದ್ದು ಗುಟ್ಟಾಗಿ ಉಳಿದಿಲ್ಲ. ಈ ಸಂಬಂಧ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಲು ತೆಲುಗುದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ಮುಂದಾಗಿದ್ದರು.ಆದರೆ, ಅಷ್ಟರಲ್ಲೇ ಸೀಮಾಂಧ್ರದಲ್ಲಿ ನಡೆಯಬೇಕಿರುವ ಸಮಾವೇಶದಲ್ಲಿ ನಾಯ್ಡು ಜತೆ ವೇದಿಕೆ ಹಂಚಿಕೊಳ್ಳಲು ಮೋದಿ ಅವರು ನಿರಾಕರಿಸಿದರು.
ಶುಕ್ರವಾರದ ಇತ್ತೀಚಿನ ಬೆಳವಣಿಗೆ: ಟಿಡಿಪಿ ಹಾಗೂ ಬಿಜೆಪಿ ನಡುವೆ ಆಂಧ್ರಪ್ರದೇಶದಲ್ಲಿ ಚುನಾವಣಾ ಸೀಟು ಹಂಚಿಕೆ ಕುರಿತಾಗಿ ಬಿಕ್ಕಟ್ಟು ಶಮನಗೊಂಡಿದೆ ಎಂದು ಬಿಜೆಪಿಯ ವಕ್ತಾರ ಪ್ರಕಾಶ್ ಜಾವಡೇಕರ್ ಘೋಷಣೆ. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಜತೆ ಪ್ರಕಾಶ್, ವೆಂಕಯ್ಯ ನಾಯ್ಡು ಮಾತುಕತೆ. ಬಿಜೆಪಿ ಮತ್ತು ಟಿಡಿಪಿ ನಡುವೆ ಮೈತ್ರಿ ಮುಂದೆಯುತ್ತದೆ ಎಂದು ಹೇಳಿದ್ದಾರೆ.
ಆಂಧ್ರಪ್ರದೇಶದ ಸೀಮಾಂಧ್ರ ಮತ್ತು ತೆಲಂಗಾಣ, ಈ ಎರಡೂ ಭಾಗಗಳಿಗೆ ಲೋಕಸಭಾ ಚುನಾವಣೆ ಜತೆಗೆ ವಿಧಾನಸಭೆ ಚುನಾವಣೆಯೂ ನಡೆಯುತ್ತದೆ. ಸೀಮಾಂಧ್ರ ಭಾಗದಲ್ಲಿ ತೆಲುಗುದೇಶಂ ಬಿಜೆಪಿಯೊಂದಿಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದೆ.
ಸೀಮಾಂಧ್ರದ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ತೆಲುಗುದೇಶಂ ಬೆಂಬಲದೊಂದಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ, ಬಿಜೆಪಿಯ ವಿಧಾನಸಭಾ ಅಭ್ಯರ್ಥಿಗಳು ತೀರಾ ದುರ್ಬಲರಾಗಿದ್ದಾರೆ ಎಂಬುದು ಟಿಡಿಪಿ ಆರೋಪ. ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಲೋಕಸಭೆಗೆ ಸ್ಪರ್ಧಿಸಿರುವ ತೆಲುಗುದೇಶಂ ಅಭ್ಯರ್ಥಿಗಳಿಗೆ ಗೆಲವು ಕಷ್ಟವಾಗಬಹುದು ಎಂದು ಟಿಡಿಪಿ ವಾದಿಸುತ್ತಿದೆ. ನಾಯ್ಡು ಕೋಪಕ್ಕೆ ಏನು ಕಾರಣ? ಮೋದಿ ಲೆಕ್ಕಾಚಾರ ತಪ್ಪಿದ್ದೆಲ್ಲಿ? ಸ್ಟಾರ್ ಪ್ರಚಾರಕ ಬೆಂಬಲಿಗ ಪವನ್ ಕಲ್ಯಾಣ್ ಎಂಟ್ರಿಯಿಂದ ಟಿಡಿಪಿಯಲ್ಲಾದ ಬದಲಾವಣೆ ಏನು? ಮುಂದೆ ಓದಿ..
ಟಿಡಿಪಿ ಮುನಿಸು ನಿರ್ಲಕ್ಷಿಸಿದ ಬಿಜೆಪಿ
ತೆಲುಗುದೇಶಂ ಪಕ್ಷದ ಅಪಸ್ವರಕ್ಕೆ ಅಲ್ಲಿನ ಬಿಜೆಪಿ ನಾಯಕರು ಖಾರವಾಗಿಯೇ ಪ್ರತಿಕ್ರಿಯಿಸಿದ್ದರು. ನಮ್ಮ ಪಕ್ಷದ ಅಭ್ಯರ್ಥಿಗಳ ಆಯ್ಕೆ ನಮಗೆ ಬಿಟ್ಟಿದ್ದು. ಈ ವಿಷಯದಲ್ಲಿ ಮಿತ್ರ ಪಕ್ಷ ತೆಲಗುದೇಶಂ ಮೂಗು ತೂರಿಸಬಾರದು ಎಂದು ಪ್ರತಿವಾದ ಹೂಡಿತ್ತು.
ಮುಖ್ಯವಾಗಿ ಕೇಂದ್ರದ ಮಾಜಿ ಸಚಿವೆ, ಪ್ರಸಿದ್ಧ ನಟ-ರಾಜಕಾರಣಿ ಎನ್ಟಿರ್ ಅವರ ಪುತ್ರಿ ಡಿ. ಪುರಂದೇಶ್ವರಿಗೆ ರಾಜಂಪೇಟ್ ಕ್ಷೇತ್ರದಿಂದ ಟಿಕೆಟ್ ನೀಡಲು ಬಿಜೆಪಿ ಇಚ್ಛಿಸಿದ್ದು ಟಿಡಿಪಿ ಅಸಮಾಧಾನಕ್ಕೆ ಕಾರಣವಾಗಿದೆ.
ಎನ್ ಡಿಎ ತೆಕ್ಕೆಗೆ ಬಂದಿದ್ದ ತೆಲಗುದೇಶಂ
11 ವರ್ಷಗಳ ಬಳಿಕ ಮತ್ತೆ ಎನ್ ಡಿಎ ತೆಕ್ಕೆಗೆ ಬಂದಿದ್ದ ತೆಲಗುದೇಶಂ, ಈಗ ಈ ಮೈತ್ರಿಯಿಂದಾಗಿ ಸ್ಥಳೀಯ ಕಾರ್ಯಕರ್ತರ ಭಿನ್ನಮತವನ್ನೂ ಎದುರಿಸಬೇಕಾಗಿದೆ. ಹೀಗಾಗಿ, ಈ ಸಮಸ್ಯೆಯನ್ನು ಆದಷ್ಟು ಶೀಘ್ರ ಬಗೆಹರಿಸಿಕೊಳ್ಳಲು ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ.
ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಜಗನ್ಮೋಹನ್ ರೆಡ್ಡಿ ವಿರುದ್ಧ ಪ್ರಬಲ ಸ್ಪರ್ಧೆ ನೀಡಲು ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂಬುದು ನಾಯ್ಡು ವಾದ. ಆದರೆ, ಟಿಕೆಟ್ ಹಂಚಿಕೆ ಸಮಸ್ಯೆ ಉಲ್ಬಣಗೊಳ್ಳುತ್ತಿದ್ದು ಮೈತ್ರಿಗೆ ಕುತ್ತಾಗಿದೆ.
ತೆಲಂಗಾಣ ಮೋದಿ-ಪವನ್-ನಾಯ್ಡು ಸಮಾವೇಶ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದ್ದ ಆಂಧ್ರಪ್ರದೇಶದ ಹೊಸ ಪಕ್ಷ ಜನಸೇನಾದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಈಗ ಮೊದಲ ಬಾರಿಗೆ ಬಿಜೆಪಿ ಪರ ಪ್ರಚಾರಕ್ಕೆ ಇಳಿಯುತ್ತಿದ್ದಾರೆ. ಕರ್ನಾಟಕದಲ್ಲಿ ತೆಲುಗಿನ ಪವರ್ ಸ್ಟಾರ್ ಮೂರು ಕಡೆ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಆದರೆ, ತೆಲಂಗಾಣ ರಚನೆ ವಿರೋಧಿಸುವ ಪವನ್ ಅವರು ಒಂದೇ ವೇದಿಕೆಯಲ್ಲಿ ಮೋದಿ ಜತೆಯಲ್ಲಿ ನಾಯ್ಡು ಅವರೊಂದಿಗೆ ಏ.22ರಂದು ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. ಇದಕ್ಕೆ ನಾಯ್ಡು ಕೂಡಾ ಅಪಸ್ವರ ಹಾಡಿದ್ದರು. ಪವನ್ ಜತೆ ವೇದಿಕೆ ಹಂಚಿಕೊಳ್ಳಲು ನಾಯ್ಡು ನಿರಾಕರಿಸಿದರೆ, ನಾಯ್ಡು ಜತೆ ವೇದಿಕೆ ಏರಲು ಮೋದಿ ಒಪ್ಪಲಿಲ್ಲ ಎಂಬ ಸತ್ಯ ಹೊರಬಿದ್ದಿದೆ.
ರಾಜನಾಥ್ ಸೃಷ್ಟಿಸಿದ ವೇದಿಕೆ ಕುಸಿತ?
ದಕ್ಷಿಣ ಭಾರತದಲ್ಲಿ ಕರ್ನಾಟಕ ಬಿಟ್ಟರೆ ಉಳಿದೆಡೆ ಕಾಂಗ್ರೆಸ್, ಎಡಪಕ್ಷ, ಪ್ರಾದೇಶಿಕ ಪಕ್ಷಗಳದ್ದೇ ಅಲೆ ಇರುವುದನ್ನು ಗಮಿಸಿದ ಬಿಜೆಪಿ ತನ್ನ ಅಧ್ಯಕ್ಷ ರಾಜನಾಥ್ ಸಿಂಗ್ ಅವರನ್ನು ಮೊದಲಿಗೆ ತಮಿಳುನಾಡಿಗೆ ಕಳುಹಿಸಿತ್ತು.
ರಾಜನಾಥ್ ಸಿಂಗ್ ಬುದ್ಧಿ ಖರ್ಚು ಮಾಡಿ ಎನ್ ಡಿಎ ಮಿತ್ರಪಕ್ಷಗಳನ್ನು ಹಾಗೂ ಹೀಗೂ ಒಟ್ಟು ಮಾಡಿದರು. ನಂತರ ಬಂದ ಮೋದಿ ಅವರು ರಜನಿಕಾಂತ್, ವಿಜಯ್ ಬೆಂಬಲ ಕೋರಿದರು. ಹೀಗಾಗಿ ದಕ್ಷಿಣದೆಲ್ಲೆದೆ ಮೋದಿ ಅಲೆ ಏಳುವ ಲಕ್ಷಣ ಕಂಡು ಬಂದಿತು. ಕೇರಳದಲ್ಲಿ ಮೋದಿ ಮಾಡಿದ ಭಾಷಣ ಕೂಡಾ ಪರಿಣಾಮಕಾರಿ ಎನ್ನಲಾಗಿದೆ. ಆದರೆ, ಆಂಧ್ರಪ್ರದೇಶದ ಲೆಕ್ಕಾಚಾರ ಉಲ್ಟಾ ಹೊಡೆಯುವ ಸಾಧ್ಯತೆಯಿದೆ.
ಎನ್ ಡಿಟಿವಿ ಸಮೀಕ್ಷೆ ಸೇರಿದಂತೆ ಆಂಧ್ರ ಸ್ಥಿತಿ ಗತಿ
ಎನ್ ಡಿಟಿವಿ ಸೇರಿದಂತೆ ಹಲವು ಸಮೀಕ್ಷೆ ವರದಿಯನ್ನು ನೋಡಿದರೆ ಮೋದಿ ಅಲೆ ಖಾಯಂ ಆಗಿ ಉಳಿಯಲು ಪ್ರಾದೇಶಿಕ ಪಕ್ಷಗಳ ಬೆಂಬಲ ಅತ್ಯಗತ್ಯ ಎಂದು ತಿಳಿದು ಬರಲಿದೆ. ಕರ್ನಾಟಕ ಬಿಟ್ಟರೆ ಬಿಜೆಪಿ ಸ್ವಂತವಾಗಿ ತಮಿಳುನಾಡು, ಕೇರಳ ಹಾಗೂ ಸೀಮಾಂಧ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಶತಾಯ ಗತಾಯ ಟಿಡಿಪಿ ಓಲೈಕೆಗೆ ಬಿಜೆಪಿ ಮುಂದಾಗಿದೆ. ಚುನಾವಣಾ ಪೂರ್ವ ಮೈತ್ರಿ ಮುರಿದರೂ ಚುನಾವಣೋತ್ತರ ಮೈತ್ರಿ ಸಾಧ್ಯತೆ ಬಗ್ಗೆ ಕೂಡಾ ಮಾತುಗಳು ಕೇಳಿಬಂದಿದೆ.
ಸೀಮಾಂಧ್ರದಲ್ಲಿ ಈಗ ಬಿಜೆಪಿ-ಟಿಡಿಪಿ ಸ್ಟಾರ್ ವಾರ್
ನಟ ಬಾಲಕೃಷ್ಣ, ಹರಿಕೃಷ್ಣ, ಜ್ಯೂ ಎನ್ಟಿಆರ್ ನೇರವಾಗಿ ಟಿಡಿಪಿ ಪರ ಇದ್ದಾರೆ. ಹರಿಕೃಷ್ಣ ಟಿಕೇಟ್ ಆಕಾಂಕ್ಷಿ ಕೂಡಾ. ಮೋದಿ ಅವರು ನಾಗಾರ್ಜುನ, ಪವನ್ ಕಲ್ಯಾಣ್ ಅವರನ್ನು ತಮ್ಮ ಬೆಂಬಲಕ್ಕೆ ಬಿಟ್ಟಿದ್ದಾರೆ. ಎನ್ಟಿಆರ್ ಕುಟುಂಬ ಈಗ ಅಕ್ಕಿನೇನಿ ಹಾಗೂ ಪವನ್ ಫ್ಯಾನ್ಸ್ ಜತೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವ ಪ್ರಸಂಗ ಎದುರಾಗಿದೆ. ಮೋದಿ ಪ್ರಧಾನಿಯಾಗಲಿ ಎಂಬ ಒಂದು ಅಂಶ ಸ್ಟಾರ್ ಗಳನ್ನು ಕೂಡಿಸಲೂ ಬಹುದು, ಒಡೆಯಲೂ ಬಹುದು. ಏನಾಗುತ್ತೋ ಕಾದುನೋಡೋಣ