ಸೀಮಾಂಧ್ರ: ಕತ್ತಲೆ ಸರಿದು ಬೆಳಕು ಹರಿದಿದೆ
ಹೈದರಾಬಾದ್, ಅ.18: ಸುಮಾರು 66 ದಿನಗಳ ನಂತರ ಸೀಮಾಂಧ್ರ ಭಾಗದಲ್ಲಿ ಕತ್ತಲೆ ಸರಿದು ಬೆಳಕು ಹರಿಯುತ್ತಿದೆ. ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಆಂಧ್ರಪ್ರದೇಶ ಸರ್ಕಾರಿ ಉದ್ಯೋಗಿಗಳು ಹಮ್ಮಿಕೊಂಡಿದ್ದ ಮುಷ್ಕರ ಗುರುವಾರ ತಾತ್ಕಾಲಿಕವಾಗಿ ಅಂತ್ಯಗೊಳಿಸಲಾಗಿದೆ.
ಸೀಮಾಂಧ್ರ(ರಾಯಲ ಸೀಮೆ ಹಾಗೂ ಕೋಸ್ತಾ ಆಂಧ್ರ) ಭಾಗದ ಸುಮಾರು 400,000 ಸರ್ಕಾರಿ ಉದ್ಯೋಗಿಗಳು ಅ.12ರಿಂದ ಮುಷ್ಕರ ನಿರತರಾಗಿದ್ದರು. ಇದರಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು.
200,000 ಕ್ಕೂ ಅಧಿಕ ಶಿಕ್ಷಕರು, ಸರ್ಕಾರಿ ಸಾರಿಗೆ ನೌಕರರು ಕಳೆದ ವಾರ ಮುಷ್ಕರವನ್ನು ಅಂತ್ಯಗಾಣಿಸಿದ್ದರು. ಸೀಮಾಂಧ್ರ ಭಾಗದ 13 ಜಿಲ್ಲೆಗಳಿಗೆ ಬಂದ್ ಬಿಸಿ ತಟ್ಟಿದ್ದಲ್ಲದೆ ನೆರೆ ರಾಜ್ಯ ಕರ್ನಾಟಕ, ತಮಿಳುನಾಡು, ಒರಿಸ್ಸಾಗೂ ಭಾರಿ ನಷ್ಟ ಉಂಟಾಗಿತ್ತು.

ಸಾರಿಗೆ ಸಂಪರ್ಕ ನಷ್ಟ: ಸೀಮಾಂಧ್ರದಲ್ಲಿ ನಡೆದ ಸಮೈಖ್ಯಾಂಧ್ರ ಹೋರಾಟದಿಂದಾಗಿ ಜು.30ರಿಂದ ಅ.12ರವರೆಗೆ ಉಭಯ ರಾಜ್ಯಗಳ ಸಾರಿಗೆ ಇಲಾಖೆಗಳಿಗೆ ಕೋಟ್ಯಂತರ ಆದಾಯ ನಷ್ಟವುಂಟಾಗಿದೆ.
ಬಳ್ಳಾರಿ, ಹೊಸಪೇಟೆ, ದಾವಣಗೆರೆ, ಕೊಪ್ಪಳ, ಬಾಗಲಕೋಟೆ, ಹುಬ್ಬಳ್ಳಿ, ಬೆಂಗಳೂರು, ಕೋಲಾರ ಇನ್ನಿತರೆಡೆಗಳಿಂದ ಆಂಧ್ರಕ್ಕೆ ನಿತ್ಯ 116 ಬಸ್ಗಳು ಸಂಚರಿಸುತ್ತಿದ್ದು, ಪ್ರತಿದಿನ 3 ಲಕ್ಷನಂತೆ ಬಂದ್ ಆದ 76 ದಿನಕ್ಕೆ ಅಂದಾಜು 3 ಕೋಟಿ ನಷ್ಟ ಸಂಭವಿಸಿದೆ. ಈ ಪೈಕಿ ಆಂಧ್ರಕ್ಕೆ ಅತಿಹೆಚ್ಚು ಬಸ್ಗಳನ್ನು ಒದಗಿಸುತ್ತಿದ್ದ ಬಳ್ಳಾರಿ ವಿಭಾಗಕ್ಕೆ ಹೆಚ್ಚು ನಷ್ಟವುಂಟಾಗಿದೆ ಎಂದು ನಂತಪುರ ವಿಭಾಗೀಯ ವ್ಯವಸ್ಥಾಪಕ ಜಿ. ವೆಂಕಟೇಶ್ವರರಾವ್ ಹೇಳಿದ್ದಾರೆ.
ಸಾರಿಗೆ ಸಂಪರ್ಕದಲ್ಲಿ ಉತ್ತಮ ಬಾಂಧವ್ಯ ಹೊಂದಿರುವ ಕರ್ನಾಟಕ- ಆಂಧ್ರ ರಾಜ್ಯಗಳ ಸಾರಿಗೆ ಸಂಸ್ಥೆಗಳನ್ನು ಮತ್ತಷ್ಟು ಚುರುಕುಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವೆಂಕಟೇಶ್ವರರಾವ್ ತಿಳಿಸಿದರು.
ಹೈದ್ರಾಬಾದ್ ನಗರ ಕೇಂದ್ರಾಡಳಿತ ಪ್ರದೇಶವಾಗುವುದಿಲ್ಲ. ಸೀಮಾಂಧ್ರ ಭಾಗಕ್ಕೆ ಭಾರಿ ಆರ್ಥಿಕ ಪ್ಯಾಕೇಜ್, ಹೊಸ ರಾಜಧಾನಿಯನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆಯನ್ನು ಸಭೆಯಲ್ಲಿ ನೀಡಲಾಗಿದೆ. ಆದರೆ ಹೈದ್ರಾಬಾದ್ ಅನ್ನು 10 ವರ್ಷಗಳ ಕಾಲ ಉಭಯ ರಾಜ್ಯಗಳ ರಾಜಧಾನಿಯಾಗಿ ಮಾಡುವ ಪ್ರಸ್ತಾಪದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೇಂದ್ರ ಮಂತ್ರಿಗಳ ಸಮೂಹ ಇತ್ತೀಚೆಗೆ ಭರವಸೆ ನೀಡಿದ್ದರು.
ಮುಖ್ಯವಾಗಿ ನೈಸರ್ಗಿಕ ಸಂಪತ್ತು(ಕಲ್ಲಿದ್ದಲು, ಜಲ ಸಂಪನ್ಮೂಲ, ಅನಿಲ ಹಾಗೂ ಇಂಧನ) ಬಳಕೆ, ವಿದ್ಯುತ್ ಉತ್ಪಾದನೆ ಹಾಗೂ ಪ್ರಸರಣ ಮುಂತಾದ ವಿಷಯಗಳ ಬಗ್ಗೆ ಸಭೆಯಲ್ಲಿ ಸೂಕ್ಷ್ಮವಾಗಿ ಚರ್ಚಿಸಲಾಗಿದೆ. ಸಂಪನ್ಮೂಲ ಹಂಚಿಕೆ ವಿಷಯದಲ್ಲಿ ಮತ್ತೊಮ್ಮೆ ಗೊಂದಲ, ಆತಂಕ ಸೃಷ್ಟಿಯಾಗದಂತೆ ಮಾಡುವುದು ಸರ್ಕಾರದ ಸದ್ಯದ ಸವಾಲಾಗಿದೆ. (ಐಎಎನ್ಎಸ್)












Click it and Unblock the Notifications