ತೆಲಂಗಾಣದಲ್ಲಿ ಬಿಜೆಪಿಯ ಮಾನ ಉಳಿಸಿದ ರಾಜಾ ಸಿಂಗ್
ಹೈದರಾಬಾದ್, ಡಿಸೆಂಬರ್ 11: ತೆಲಂಗಾಣದಲ್ಲಿ ಟಿಆರ್ಎಸ್ ಪಕ್ಷ ಭಾರಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಗೆದ್ದಿದ್ದಕ್ಕಿಂತಲೂ ಹೆಚ್ಚು ಸ್ಥಾನವನ್ನು ಅದು ಈ ಬಾರಿ ಗೆಲ್ಲಲಿದೆ. ಕಾಂಗ್ರೆಸ್, ಟಿಡಿಪಿ ತಕ್ಕ ಮಟ್ಟಿಗೆ ಪ್ರದರ್ಶನ ನೀಡಿದೆ ಆದರೆ ಬಿಜೆಪಿ ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದೆ.
ಹೌದು, ತೆಲಂಗಾಣದಲ್ಲಿ ಚುನಾವಣೆ ನಡೆದ 119 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿರುವುದು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಅದು ಅಲ್ಲಿ ಗೆದ್ದಿರುವುದು ಉಗ್ರ ಹಿಂದೂವಾದಿ, ಗೋರಕ್ಷಕ ಎಂದು ಕರೆಸಿಕೊಳ್ಳುವ ಟಿ.ರಾಜಾ ಸಿಂಗ್.
ರಾಜಾ ಸಿಂಗ್ ಅವರು ಗೋಶ್ಮಹಲ್ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇವತು ತಮ್ಮ ಸಮೀಪದ ಪ್ರತಿಸ್ಪರ್ಧಿ ಟಿಆರ್ಎಸ್ ನ ಪ್ರೇಮ್ ಸಿಂಗ್ ರಾಥೋಡ್ ಅವರನ್ನು 17,750 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇವರನ್ನು ಹೊರತು ಪಡಿಸಿ ಇನ್ಯಾವ ಬಿಜೆಪಿ ಅಭ್ಯರ್ಥಿಗಳು ಗೆದ್ದಿಲ್ಲ.

ರಾಜಾಸಿಂಗ್ ಅವರು ವಿವಾದಿತ ನಾಯಕರೂ ಹೌದು, ತಮ್ಮ ಬೆಂಕಿ ಉಗುಳುವ ಹಿಂದೂ ಪರ ಉಗ್ರ ಭಾಷಣಗಳಿಂದ ಅವರು ಖ್ಯಾತರು. ಬೆಳಗಾವಿಯಲ್ಲಿ ಅವರ ಭಾಷಣದ ಸಂದರ್ಭದಲ್ಲಿ ಯುವಕರು ಕತ್ತಿಗಳನ್ನು ಜಳಪಿಸಿದ್ದರು ಆಗ ಇವರ ಮೇಲೂ ಪ್ರಕರಣ ದಾಖಲಾಗಿತ್ತು.
ಗೋ ರಕ್ಷಣೆ ಉದ್ದೇಶದಿಂದ ಥಳಿತ, ಬೆದರಿಕೆ ಒಡ್ಡಿದ ಪ್ರಕರಣಗಳೂ ಸಹ ರಾಜಾ ಸಿಂಗ್ ಅವರ ಮೇಲೆ ಇದೆ.
ತೆಲಂಗಾಣ ಮಾತ್ರವಲ್ಲ ಮಿಜೋರಂ ನಲ್ಲಿ ಸಹ ಬಿಜೆಪಿ ಕೇವಲ ಒಂದು ಸೀಟಿನಲ್ಲಿ ಮಾತ್ರವೇ ಜಯಗಳಿಸಿದೆ. ಅದೂ ಇದೇ ಮೊದಲ ಬಾರಿಗೆ ಅಲ್ಲಿ ಬಿಜೆಪಿ ಜಯಗಳಿಸಿದೆ. ಅಭ್ಯರ್ಥಿಯ ಹೆಸರು ಡಾಕ್ಟರ್ ಬುದ್ಧ ಧನ್ ಛಕ್ಮಾ ಇವರು ಕಾಂಗ್ರೆಸ್ನಲ್ಲಿ ಸಚಿವರಾಗಿದ್ದರು ಆ ನಂತರ ಪಕ್ಷ ತೊರೆದು ಬಿಜೆಪಿ ಸೇರಿದ್ದರು.












Click it and Unblock the Notifications