ಏಳು ದಿನ ಸಿಐಡಿ ಕಸ್ಟಡಿಗೆ ರಾಘವೇಂದ್ರ ತೀರ್ಥ
ಚಿತ್ತೂರು ಮಾರ್ಚ್ 11: ಕಾಶೀಮಠದ ಉಚ್ಛಾಟಿತ ಸ್ವಾಮಿ ರಾಘವೇಂದ್ರ ತೀರ್ಥ ಆಲಿಯಾಸ್ ಶಿವಾನಂದ ಪೈಗೆ ಆಂಧ್ರಪ್ರದೇಶದ ಚಿತ್ತೂರಿನ ನಾಲ್ಕನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 7 ದಿನಗಳ ಸಿಐಡಿ ಪೊಲೀಸ್ ಕಸ್ಟಡಿ ವಿಧಿಸಿದೆ. ಶಿವಾನಂದ ಪೈಯನ್ನು ಇದೇ ಮಾರ್ಚ್ 5 ರಂದು ಹೊಸೂರು ಚೆಕ್ ಪೋಸ್ಟಿನಲ್ಲಿ ಬಂಧಿಸಲಾಗಿತ್ತು.
ಕಾಶೀಮಠಕ್ಕೆ ಸಂಬಂಧಪಟ್ಟ ವಸ್ತುಗಳು ಮತ್ತು ಆಭರಣಗಳನ್ನು ಆರೋಪಿ ಇನ್ನೂ ಕೂಡ ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡಿರುವುದರಿಂದ ಅದನ್ನು ಹಸ್ತಾಂತರಿಸುವಂತೆ ಪ್ರಾಸಿಕ್ಯೂಶನ್ ತನ್ನ ವಾದದಲ್ಲಿ ಹೇಳಿತ್ತು. ಸಿಐಡಿ ವಿಚಾರಣೆಯ ಸಂದರ್ಭದಲ್ಲಿ ಆರೋಪಿ ತನಗೆ ತಲೆಮರೆಸಿಕೊಳ್ಳಲು ನೆರವಾದವರ ಹೆಸರುಗಳನ್ನು ಹೇಳಿರುವುದರಿಂದ ಮತ್ತು ಆತ ಕಾಶೀಮಠದ ಹಣ ಮತ್ತು ಆಸ್ತಿಯನ್ನು ದುರ್ಬಳಕೆ ಮಾಡಿರುವುದನ್ನು ಆತನೇ ವಿಚಾರಣೆಯಲ್ಲಿ ಒಪ್ಪಿಕೊಂಡಿರುವುದರಿಂದ ಅದರ ಬಗ್ಗೆ ಇನ್ನೂ ಮಾಹಿತಿ ಕಲೆ ಹಾಕುವ ಅಗತ್ಯ ಇದೆ ಎಂದು ಸಿಐಡಿ ವಕೀಲರು ವಾದಿಸಿದ್ದರು.
ನಾಲ್ಕು ವರ್ಷಗಳ ಹಿಂದೆ ಆಂಧ್ರಪ್ರದೇಶದ ಕಡಪದ ಇಂದಿರಾನಗರದಲ್ಲಿ ರಾಘವೇಂದ್ರ ತೀರ್ಥ ಆಲಿಯಾಸ್ ಶಿವಾನಂದ ಪೈಯನ್ನು ಪೊಲೀಸರು ಬಂಧಿಸಿದ್ದರು. ಆ ಸಂದರ್ಭದಲ್ಲಿ ಈತನಿಂದ ಶ್ರೀ ಸಂಸ್ಥಾನಕ್ಕೆ ಸೇರಿದ ದೇವರ ವಿಗ್ರಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಜಾಮೀನು ಪಡೆದ ಆರೋಪಿ ಕಾಶೀಮಠಕ್ಕೆ ಒಳಪಟ್ಟ ಕೋಟ್ಯಂತರ ಬೆಲೆಬಾಳುವ ಚಿನ್ನಾಭರಣ, ವಜ್ರವೈಢೂರ್ಯ ಇನ್ನಿತರ ಅಮೂಲ್ಯ ವಸ್ತುಗಳೊಂದಿಗೆ ಪರಾರಿಯಾಗಿದ್ದ. ಈ ಬಗ್ಗೆ ಕೇರಳ ಮತ್ತು ಬೇರೆ ರಾಜ್ಯಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಆತನಿಗೆ ವಿಚಾರಣೆಗೆ ಹಾಜರಾಗಲು ನ್ಯಾಯಾಲಯ ಅನೇಕ ಬಾರಿ ಸಮನ್ಸ್ ಕಳುಹಿಸಿದರೂ ಆರೋಪಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಪೊಲೀಸರ ಬಂಧನದಿಂದಲೂ ತಪ್ಪಿಸಿಕೊಳ್ಳುತ್ತಾ ಅವರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಮೊನ್ನೆ ಮಾರ್ಚ್ 5 ರಂದು ಟೊಮೆಟೊ ವ್ಯಾಪಾರಿ ಸೆಲ್ವಿ ಎನ್ನುವವರ ಮನೆಯಲ್ಲಿ ರಹಸ್ಯ ಭೇಟಿ ಮುಗಿಸಿ ಬರುವಾಗ ಹೊಸೂರು ಚೆಕ್ ಪೋಸ್ಟಿನ ಬಳಿ ಈತನನ್ನು ಹೈದ್ರಾಬಾದಿನ ಸಿಐಡಿ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈತನಿಂದ ಹಣ, 10 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.