ಜನಸೇನಾ ಪಕ್ಷಕ್ಕೆ ಮಾನ್ಯತೆ, ಕಣಕ್ಕಿಳಿಯುವರೇ ಪವರ್ ಸ್ಟಾರ್
ಹೈದ್ರಾಬಾದ್, ಡಿ.11: ಟಾಲಿವುಡ್ ನ ಜನಪ್ರಿಯ ನಟ ಪವನ್ ಕಲ್ಯಾಣ್ ಅವರ ನೇತೃತ್ವದಲ್ಲಿ ಸ್ಥಾಪನೆಯಾಗಿರುವ ಜನಸೇನಾ ಪಾರ್ಟಿ ಗೆ ಚುನಾವಣಾ ಆಯೋಗದ ಮಾನ್ಯತೆ ಸಿಕ್ಕಿದೆ. ಆಯೋಗದಲ್ಲಿ ನೂತನ ಪಕ್ಷದ ನೋಂದಾವಣಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಸಕ್ರಿಯ ರಾಜಕೀಯರಂಗಕ್ಕೆ ಧುಮುಕಬಹುದಾಗಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಟಿಡಿಪಿ ನಡುವಿನ ಮರು ಮೈತ್ರಿ ಹಾಗೂ ಚುನಾವಣಾ ಪ್ರಚಾರದಲ್ಲಿ ಸಕ್ರಿಯರಾಗಿದ್ದ ಪವನ್ ಕಲ್ಯಾಣ್ ಅವರು ಭಾರಿ ಸಂಚಲನ ಮೂಡಿಸಿದ್ದರು. ಅದರೆ, ಆಗಿನ್ನೂ ಪವನ್ ಅವರ ಪಕ್ಷಕ್ಕೆ ಆಯೋಗದಿಂದ ಹಸಿರು ನಿಶಾನೆ ಸಿಕ್ಕಿರಲಿಲ್ಲ.ಈಗ ಈ ಪಕ್ಷ ಚುನಾವಣಾ ರಾಜಕೀಯಕ್ಕಿಳಿಯಲು ಹಸಿರು ನಿಶಾನೆ ತೋರಿಸಿದಂತಾಗಿದೆ. [ಪವರ್ ಸ್ಟಾರ್ ಪಕ್ಷದ ಹೆಸರು ಘೋಷಿಸಿದ್ದು ಯಾವಾಗ?]

ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 29ಎ ಅನ್ವಯ ಭಾರತ ಚುನಾವಣಾ ಆಯೋಗವು ಜನಸೇನಾ ಪಾರ್ಟಿಯನ್ನು ನೋಂದಣಿ ಮಾಡಿಕೊಂಡು 2014ರ ನವೆಂಬರ್ 24ರಿಂದ ಅನ್ವಯವಾಗುವಂತೆ ಪ್ರಮಾಣಪತ್ರ ನೀಡಿದೆ. ನೋಂದಣಿ ಸಂಖ್ಯೆ 56/118/2014 ಪಿಪಿಎಸ್-1 ಎಂದು ಜನಸೇನಾ ಪಾರ್ಟಿಯ ಮುಖಂಡರು ಪ್ರಕಟಿಸಿದ್ದಾರೆ.
ಎಲ್ಲಾ ಮೋದಿಗಾಗಿ: ಮೋದಿ- ಚಂದ್ರ ಬಾಬು ನಾಯ್ಡು ಹಾಗೂ ಪವನ್ ಕಲ್ಯಾಣ್ ಒಂದೇ ವೇದಿಕೆ ಹಂಚಿಕೊಂಡಿದ್ದು ಆಂಧ್ರದಲ್ಲಿ ಎನ್ಡಿಎ ವಿಜಯಕ್ಕೆ ಮುನ್ನುಡಿ ಬರೆಯಿತು. [ಮೋದಿಗೆ ಬೆಂಬಲ ಘೋಷಿಸಿದ ಪವರ್ ಸ್ಟಾರ್]
ತೆಲುಗಿನ ಪವರ್ ಸ್ಟಾರ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿ ಅಣ್ಣ ಚಿರಂಜೀವಿ ಅವರ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಿದ್ದರು. ಮೋದಿ ಅವರ ಸಲಹೆಯಂತೆ ಸೀಮಾಂಧ್ರ ಹಾಗೂ ಕರ್ನಾಟಕದ ಗಡಿಭಾಗಗಳಲ್ಲಿ ಸಂಚರಿಸಿ ಬಿಜೆಪಿ ಹಾಗೂ ತೆಲುಗುದೇಶಂ ಪಾರ್ಟಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ನಾನು ರಾಜಕೀಯ ರಂಗಕ್ಕೆ ಇಷ್ಟು ಹತ್ತಿರವಾಗುತ್ತಿರುವುದು ಮೋದಿ ಅವರಿಗಾಗಿ ಮಾತ್ರ, ನಾನು ಸ್ಥಾನ ಮಾನ ಸಿಗಬೇಕೆಂದು ಬಯಸುವುದಿಲ್ಲ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದರು.

ಪವನ್ ಕಲ್ಯಾಣ್ ಪ್ರಚಾರ ಆರಂಭಿಸಿದ ಮೇಲೆ ಕಾಪು ಸಮುದಾಯದ ಮತಗಳು ಟಿಡಿಪಿ ಕಡೆಗೆ ಹರಿದು ಬರಲು ಆರಂಭಿಸಿತು. ಚುನಾವಣಾ ಸಮೀಕ್ಷೆಗಳ ವರದಿಗಳಂತೆ ಚಂದ್ರಬಾಬು ನಾಯ್ಡು ಅಧಿಕಾರಕ್ಕೆ ಬಂದರು. ಅದರೆ, ಪವನ್ ಅವರು ತಮಗೆ ಸಿಗಬಹುದಿದ್ದ ರಾಜ್ಯಸಭೆ ಟಿಕೆಟ್ ಪಡೆಯದೆ ದೂರವುಳಿದಿದ್ದು ಮೋದಿ ಮೆಚ್ಚುಗೆಗೂ ಪಾತ್ರವಾಗಿತ್ತು.
ಜನಸೇನಾ ಪಕ್ಷದಲ್ಲಿ ಸದ್ಯಕ್ಕೆ ಸಿಬಿಐ ಮಾಜಿ ಜಂಟಿ ನಿರ್ದೇಶಕ ಲಕ್ಷ್ಮಿ ನಾರಾಯಣ, ಚಿತ್ರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಈನಾಡು ಸಮೂಹದ ಚೇರ್ಮನ್ ರಾಮೋಜಿ ರಾವ್ ಅವರು ಸದ್ಯಕ್ಕೆ ಪವನ್ ಕೋರ್ ಸಮಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.












Click it and Unblock the Notifications