ಅಮೆರಿಕದಲ್ಲಿ ಭಾರತೀಯನ ಹತ್ಯೆ : ಹರಿದುಬಂದ ಹಣಸಹಾಯ
ಹೈದರಾಬಾದ್, ಫೆಬ್ರವರಿ 24 : ಅಮೆರಿಕದ ಕನ್ಸಾಸ್ ನಲ್ಲಿ ಹತ್ಯೆಗೀಡಾದ ಭಾರತೀಯ ಶ್ರೀನಿವಾಸ ಕುಚಿಭೋತ್ಲಾ ಅವರ ಕುಟುಂಬಕ್ಕೆ ಸಂತಾಪ ಮತ್ತು ಸಾಂತ್ವನದ ಜೊತೆಗೆ ಭಾರೀ ಪ್ರಮಾಣದ ಹಣವೂ ಹರಿದುಬರುತ್ತಿದೆ.
ಶ್ರೀನಿವಾಸ ಅವರ ಕುಟುಂಬಕ್ಕೆ ಸಹಾಯವಾಗಲೆಂದು ಆರಂಭಿಸಿದ್ದ ಆನ್ ಲೈನ್ ಅಭಿಯಾನದಲ್ಲಿ ಕಳೆದ 13 ಗಂಟೆಗಳಲ್ಲಿ 2 ಲಕ್ಷ 60 ಸಾವಿರ ಡಾಲರ್ ಹಣ ಕ್ರೋಢೀಕರಣವಾಗಿದೆ. ಈ ದುರಂತಕ್ಕೆ ಡೊನಾಲ್ಡ್ ಟ್ರಂಪ್ ಸರಕಾರವೇ ಕಾರಣ ಎಂದು ಕುಟುಂಬದವರು ಆರೋಪಿಸುತ್ತಿದ್ದಾರೆ.[ಗೆಟ್ ಔಟ್ ಎಂದು ಕಿರುಚಿ ಅಮೆರಿಕದಲ್ಲಿ ಭಾರತೀಯನ ಹತ್ಯೆ]
32 ವರ್ಷದ ಶ್ರೀನಿವಾಸ ಅವರನ್ನು ಆ್ಯಡಂ ಪುರಿಂಟನ್ ಎಂಬಾತ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಈ ದಾಳಿಯಲ್ಲಿ ಶ್ರೀನಿವಾಸ್ ಅವರ ಸ್ನೇಹಿತ ವಾರಂಗಲ್ ನ ಅಲೋಕ್ ಮದಸಾನಿ ಎಂಬುವವರು ಗಾಯಗೊಂಡಿದ್ದಾರೆ. ಇವರನ್ನು ಉಳಿಸಲು ಯತ್ನಿಸಿದ ಇಯಾನ್ ಗ್ರಿಲ್ಲಟ್ ಎಂಬುವವರು ಕೂಡ ಗಾಯಗೊಂಡಿದ್ದಾರೆ.
ಇವರಿಬ್ಬರು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕಂಪನಿ ಜರ್ಮಿನ್ ನಲ್ಲಿ ಏವಿಯೇಷನ್ ಪ್ರೊಗ್ರಾಂ ಮ್ಯಾನೇಜರ್ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಬ್ಬರು ಅರಬ್ ದೇಶದವರು ಎಂದು ಅಪಾರ್ಥ ಮಾಡಿಕೊಂಡ ಆ್ಯಡಂ, 'ಅಮೆರಿಕದಿಂದ ತೊಲಗಿ' ಎಂದು ಕೂಗುತ್ತ ಗುಂಡು ಹಾರಿಸಿದ್ದ.
ಶ್ರೀನಿವಾಸ ಅವರ ಕುಟುಂಬಕ್ಕೆ ಸಹಾಯವಾಗಲೆಂದು ಗೋಫಂಡ್ಮಿ ವೆಬ್ ಸೈಟ್ ಚಂದಾ ಎತ್ತುವ ಅಭಿಯಾನವನ್ನು ಆರಂಭಿಸಿತ್ತು. ಇದಕ್ಕೆ ಭಾರೀ ಸ್ಪಂದನೆ ವ್ಯಕ್ತವಾಗಿದ್ದು, ವಿಶ್ವದ ಎಲ್ಲೆಡೆಯಿಂದ ಹಣದ ಸಹಾಯ ಹರಿದುಬಂದಿದೆ. ಇದನ್ನು ಶುರು ಮಾಡಿದ್ದು ಶ್ರೀನಿವಾಸ್ ಅವರ ಸ್ನೇಹಿತ ಕವಿಪ್ರಿಯ ಮುತ್ತುರಾಮಲಿಂಗಂ.
"ಶ್ರೀನಿವಾಸ್ ಅವರು ಸ್ನೇಹಪರರಾಗಿದ್ದರು, ಎಲ್ಲರಿಗೂ ಪ್ರೀತ್ಯಾದರ ತೋರುತ್ತಿದ್ದರು. ಯಾರ ಬಗ್ಗೆಯಾಗಲಿ ಗಾಸಿಪ್ ಹರಡುವುದಾಗಲಿ, ದ್ವೇಷ ಬಿತ್ತುವುದಾಗಲಿ ಮಾಡುತ್ತಿರಲಿಲ್ಲ. ಅವರು ಜಾಣರಾಗಿದ್ದರು ಮಾತ್ರವಲ್ಲ, ಅವರು ಮಾನವೀಯತೆಯ ಸಾಕಾರಮೂರ್ತಿಯಾಗಿದ್ದರು" ಎಂದು ಆ ಪುಟದಲ್ಲಿ ಬರೆಯಲಾಗಿದೆ.
"ಅವರ ಹೆಂಡತಿ ಸುನೈನಾ ಮತ್ತು ಅವರ ಕುಟುಂಬದವರು ತೀವ್ರ ಘಾಸಿಕೊಳಗಾಗಿದ್ದಾರೆ ಮತ್ತು ಅವರ ಮೇಲೆ ಭಾರೀ ಹಣಕಾಸಿನ ಹೊರೆ ಕೂಡ ಬಿದ್ದಿದೆ. ಶ್ರೀನಿವಾಸ್ ಅವರ ಅಂತ್ಯಸಂಸ್ಕಾರ, ಇತರ ಸಂಬಂಧಿ ಪ್ರಕ್ರಿಯೆಗಳು ಮತ್ತು ಅವರ ಕುಟುಂಬಕ್ಕೆ ಹಣಕಾಸಿನ ಸಹಾಯವಾಗಲೆಂದು ಈ ಅಭಿಯಾನ ಪ್ರಾರಂಭಿಸಲಾಗಿದೆ" ಎಂದು ಬರೆಯಲಾಗಿದೆ.
ಬಂಧುಗಳ ತೀವ್ರ ಆಕ್ರೋಶ : ಈ ಘಟನೆಗಾಗಿ ಹೈದರಾಬಾದ್ ನಲ್ಲಿರುವ ಅವರ ಬಂಧುಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂಥ ಘಟನೆ ನಮ್ಮ ಕುಟುಂಬದಲ್ಲಿ ನಡೆದಿರುವುದು ಇದೇ ಮೊದಲು. ಇದಕ್ಕೆಲ್ಲ ಟ್ರಂಪ್ ಸರಕಾರವೇ ಕಾರಣ ಎಂದು ಟೀಕಿಸಿದರು.
ಕೇಂದ್ರ ವಿದೇಶಾಂಗ ಸಚಿವೆ, ಸ್ಥಳೀಯ ಬಿಜೆಪಿ ಶಾಸಕ ಮತ್ತು ತೆಲಂಗಾಣ ಸರಕಾರ ಶ್ರೀನಿವಾಸ್ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತಿದ್ದು, ಆದಷ್ಟು ಬೇಗನೆ ಶ್ರೀನಿವಾಸ್ ಅವರ ದೇಹವನ್ನು ಭಾರತಕ್ಕೆ ತರಲು ಸಿದ್ಧತೆಗಳು ನಡೆಯುತ್ತಿವೆ.