ತೆಲಂಗಾಣ ರಾಜ್ಯ ಆಯ್ತು, ಈಗ ಸಾಮ್ರಾಜ್ಯಕ್ಕೆ ಹೋರಾಟ
ಹೈದರಾಬಾದ್, ಮಾರ್ಚ್ 14: ಪ್ರತ್ಯೇಕ ರಾಜ್ಯಕ್ಕಾಗಿ ಹೊಡದಾಡಿ ಬಡಿದಾಡಿ ಯಶಸ್ಸು ಸಾಧಿಸಿದ ನಂತರ ಇದೀಗ ಅಲ್ಲಿನ ಸಾಮ್ರಾಜ್ಯಕ್ಕಾಗಿ ಕ್ಯಾತೆ ಶುರುವಾಗಿದೆ. ಇದು ಆಂಧ್ರದ ತೆಲಂಗಾಣ ಚಿತ್ರಣ.
ತೆಲಂಗಾಣ ಪ್ರತ್ಯೇಕ ರಾಜ್ಯಕ್ಕಾಗಿ ಕಾಂಗ್ರೆಸ್ ಜತೆ ಕೈಜೋಡಿಸಿದ್ದ ತೆಲಂಗಾಣ ರಾಜ್ಯ ಸಮಿತಿಯ ಅಧಿನಾಯಕ ಚಂದ್ರಶೇಖರ್ ಇದೀಗ ಕಾಂಗ್ರೆಸ್ ಜತೆ ಕೂಡಿಕೆ ಸರಿಬರುತ್ತಿಲ್ಲವೆಂದು ಬಿಜೆಪಿಯತ್ತ ಹಸ್ತ ಚಾಚಿದೆ. (ಚುನಾವಣೆ ಘೋಷಣೆ: ಆಂಧ್ರ-ತೆಲಂಗಾಣ ಕಥೆಯೇನು?)

ಒಟ್ಟಿನಲ್ಲಿ ಆಂಧ್ರದಲ್ಲಿ ಜನಮನವನ್ನು ಒಡೆದು ಚೂರು ಮಾಡಿದ ಅಪಖ್ಯಾತಿಗೆ ಗುರಿಯಾಗಿ, ಇಂಗುತಿಂದ ಮಂಗನಂತಾಗಿರುವ ಕಾಂಗ್ರೆಸ್ ಪಕ್ಷವು ಇದೀಗ ಅಖಂಡ ಆಂಧ್ರದಲ್ಲಿ ಏಕಾಂಗಿಯಾಗಿದೆ. ಇತ್ತ ಮತದಾರರು ಕೈಹಿಡಿಯುವ ಲಕ್ಷಣಗಳಿಲ್ಲ. ಅತ್ತ ರಾಜಕೀಯವಾಗಿ ಪಕ್ಷಗಳು/ನಾಯಕರು ಸಾಲುಸಾಲಾಗಿ ಕಾಂಗ್ರೆಸ್ಸಿನಿಂದ ದೂರವಾಗಿದ್ದಾರೆ.
ಹಾಗೆ ನೋಡಿದರೆ ಕಾಂಗ್ರೆಸ್ಸಿಗೆ TRS ಒಂದೇ ಆಶಾಕಿರಣ/ ಆಧಾರವಾಗಿದ್ದುದು. ಆದರೆ ಚುನಾವಾಣೆ ಪೂರ್ವ ಇಷ್ಟಿಷ್ಟು ಟಿಕೆಟ್ ಹಂಚಿಕೊಳ್ಳೋಣ ಎಂದು ಕೊಡು-ಕೊಳ್ಳುವಿಕೆಗೆ ಕುಳಿತ ಉಭಯ ಪಕ್ಷಗಳ ನಾಯಕರು ಕೊನೆಗೆ ತನಗೇ ಹೆಚ್ಚು ಪಾಲು ಬೇಕೆಂದು ಹಠ ತೊಟ್ಟಿದ್ದಕ್ಕೆ ಇಬ್ಬರೂ ಈಗ ಬೇರ್ಪಟ್ಟಿದ್ದಾರೆ. ತತ್ಫಲವಾಗಿ ಚಿತ್ರಣದಲ್ಲಿಲ್ಲದ ಬಿಜೆಪಿ ಈಗ ಪ್ರಾಮುಖ್ಯತೆ ಪಡೆಯತೊಡಗಿದೆ.
ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗಾಗಿ ಈ ಕಿತ್ತಾಟ ನಡೆದಿದೆ. ಮೂಖ್ಯವಾಗಿ TRS ನಾಯಕ ಚಂದ್ರಶೇಖರ್ ಗೆ ಹೆಚ್ಚು ಸೀಟುಗಳ ಅವಶ್ಯಕತೆಯಿದ್ದು, ತೆಲಂಗಾಣದಲ್ಲಿ ಮೊದಲ ಸರಕಾರ ತಮ್ಮದೇ ಆಗಬೇಕೆಂದೂ/ ತಾನೇ ಮುಖ್ಯಮಂತ್ರಯೂ ಆಗಬೇಕು ಎಂಬ ಸಹಜ ಬೇಡಿಕೆ/ ಬಯಕೆ ಗರಿಗೆದರಿದೆ. ಹಾಗಾಗಿ, ಕಾಂಗ್ರೆಸ್ಸಿನಿಂದ ದೂರವಾಗಿದೆ.
ಇನ್ನು, ಬಿಜೆಪಿಗೆ ತೆಲಂಗಾಣದ ಮೇಲೆ ಅಧಿಕಾರ ಸ್ಥಾಪಿಸಬೇಕೆಂಬ ಉಮೇದಿಯೇನೂ ಇಲ್ಲ. ಆದರೆ ದಿಲ್ಲಿ ಮೇಲೆ ಕಣ್ಣಿಟ್ಟಿರುವ ಬಿಜೆಪಿಗೆ ತೆಲಂಗಾಣದಿಂದ ಹೆಚ್ಚು ಸಂಸದೀಯ ಕ್ಷೇತ್ರಗಳನ್ನು ಗೆದ್ದುಕೊಂಡು ಹೋಗುವ ಲೆಕ್ಕಾಚಾರ. ತೆಲಂಗಾಣ ರಚನೆಗೆ ಸಂಸತ್ತಿನಲ್ಲಿ ಬಿಜೆಪಿ ನೆರವಾಗಿತ್ತು ಎಂಬುದು ಬಿಜೆಪಿಗೆ ಗುಡ್ ವಿಲ್ ಆಗಿದೆ. (ಬಿಜೆಪಿ ಕೈಹಿಡಿದ ಎನ್ ಟಿ ರಾಮರಾವ್ ಪುತ್ರಿ ಪುರಂದರೇಶ್ವರಿ)
ಒಟ್ಟಿನಲ್ಲಿ ಕಾಂಗ್ರೆಸ್ಸಿಗೆ ಇದು ದೊಡ್ಡ ಹೊಡೆತವಾಗಿದೆ. ಆಂಧ್ರದ ಉಸ್ತುವಾರಿ ಹೊತ್ತಿರುವ ದಿಗ್ವಿಜಯ್ ಸಿಂಗ್ ಅವರು ಇದೀಗ ಹೈದರಾಬಾದಿನಲ್ಲಿ ಠಿಕಾಣಿ ಹೂಡಿದ್ದು, ಪಕ್ಷ ಎಡವಿದ್ದೆಲ್ಲಿ? ಎಂದು ಯುದ್ಧ ಕಾಲದಲ್ಲಿ ಯೋಚಿಸುತ್ತಾ ಕುಳಿತಿದ್ದಾರೆ.












Click it and Unblock the Notifications