ಆಂಧ್ರ ಮುಖ್ಯಮಂತ್ರಿ ನಾಯ್ಡುಗೆ ನಕ್ಸಲರ ಜೀವ ಬೆದರಿಕೆ
ಅಲಿಪಿರಿಯಲ್ಲಿ ನಡೆದ ಹತ್ಯೆ ಯತ್ನದಲ್ಲಿ ಚಂದ್ರಬಾಬು ನಾಯ್ಡು ಅಲ್ಪದರಲ್ಲೇ ಪಾರಾಗಿದ್ದರು. ಆದರೆ ಈ ಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮಾವೋವಾದಿ ವಕ್ತಾರ ಶ್ಯಾಮ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ
ಹೈದರಾಬಾದ್, ಅಕ್ಟೋಬರ್ 28: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮಾವೋವಾದಿಗಳು ಜೀವ ಬೆದರಿಕೆ ಹಾಕಿದ್ದಾರೆ. ಒಡಿಶಾದ ಮಲ್ಕನ್ಗಿರಿಯಲ್ಲಿ ನಡೆದ ಎನ್ಕೌಂಟರ್ಗೆ ಪ್ರತೀಕಾರ ತೀರಿಸುವುದಾಗಿ ಪ್ರತಿಜ್ಞೆ ಕೈಗೊಂಡಿರುವ ಮಾವೋವಾದಿಗಳು, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಅವರ ಪುತ್ರ ಎನ್. ಲೋಕೇಶ್ ಅವರನ್ನು ಬದುಕಲು ಬಿಡುವುದಿಲ್ಲ ಎಂದಿದ್ದಾರೆ.
'2003ರಲ್ಲಿ ತಿರುಪತಿಯ ಅಲಿಪಿರಿಯಲ್ಲಿ ನಡೆದ ಹತ್ಯೆ ಯತ್ನದಲ್ಲಿ ಚಂದ್ರಬಾಬು ನಾಯ್ಡು ಅಲ್ಪದರಲ್ಲೇ ಪಾರಾಗಿದ್ದರು. ಆದರೆ ಈ ಬಾರಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ' ಎಂದು ಮಾವೋವಾದಿ ವಕ್ತಾರ ಶ್ಯಾಮ್ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ ಎನ್ನಲಾದ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಲಾಗಿದೆ.[ಕಪ್ಪು ಹಣ ಘೋಷಣೆ: ಈ ಹೈದರಾಬಾದಿ ಬಳಿ 10 ಸಾವಿರ ಕೋಟಿ ರು!]

2003ನೇ ಇಸವಿಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಗುರಿಯಾಗಿಸಿ ತಿರುಪತಿಯ ಅಲಿಪಿರಿಯಲ್ಲಿ ನಕ್ಸಲರು ಬಾಂಬ್ ಸ್ಫೋಟಿಸಿದ್ದರು. ಆದರೆ ಯಾವುದೇ ಗಾಯಗಳಾಗದೆ ನಾಯ್ಡು ಪಾರಾಗಿದ್ದರು. ಒಂದು ವೇಳೆ ಅಗತ್ಯಬಿದ್ದರೆ ಆತ್ಮಹತ್ಯಾ ಬಾಂಬರ್ ಬಳಸಿ ನಿಮ್ಮ ಮೇಲೆ ದಾಳಿ ನಡೆಸುತ್ತೇವೆ. ಯಾವುದೇ ಪೊಲೀಸ್ ಅಥವಾ ಭದ್ರತಾ ಸಿಬ್ಬಂದಿಗೆ ರಕ್ಷಿಸಲು ಸಾಧ್ಯವಿಲ್ಲ ಎಂದೂ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ.[ಸಿಎಂ ವಿರುದ್ಧ ಅವಾಚ್ಯ ಶಬ್ದ, ನಟಿ ಕಮ್ ಶಾಸಕಿ ರೋಜಾ ಸಸ್ಪೆಂಡ್]
ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗೆ ಜೀವ ಬೆದರಿಕೆ ಇರುವ ಕಾರಣ ಅಮರಾವತಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಆಂಧ್ರ ಪ್ರದೇಶ -ಒಡಿಶಾ ಗಡಿಯಲ್ಲಿ ಇತ್ತೀಚೆಗೆ ನಡೆದ ಕಾರ್ಯಾಚರಣೆಯಲ್ಲಿ 30 ನಕ್ಸಲರು ಮೃತಪಟ್ಟಿದ್ದರು.












Click it and Unblock the Notifications