ತೆಲಂಗಾಣದಲ್ಲಿ ಹುತಾತ್ಮ ಯೋಧರ ಪತ್ನಿಗೆ ಸರ್ಕಾರಿ ಉದ್ಯೋಗ
ಹೈದ್ರಾಬಾದ್, ಆಗಸ್ಟ್.16: ಭಾರತ-ಚೀನಾದ ಗಾಲ್ವಾನ್ ಗಡಿ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಅವರ ಪತ್ನಿ ಸಂತೋಷಿ ಅವರನ್ನು ಡೆಪ್ಯೂಟಿ ಕಲೆಕ್ಟರ್ ಆಗಿ ತೆಲಂಗಾಣ ಸರ್ಕಾರವು ನೇಮಿಸಿದ್ದು, ಅಧಿಕೃತವಾಗಿ ಶನಿವಾರ ಸೇವೆಗೆ ಸೇರ್ಪಡೆಯಾಗಿದ್ದಾರೆ.
ಸಂತೋಷಿ ನೇಮಕಾತಿ ಬಗ್ಗೆ ಆದೇಶದ ಹಿನ್ನೆಲೆ ಶನಿವಾರ ಹೈದ್ರಾಬಾದ್ ನ ಬಿಆರ್ ಕೆಆರ್ ಭವನದಲ್ಲಿರುವ ಸರ್ಕಾರದ ಮುಖ್ಯಕಾರ್ಯದರ್ಶಿ ಸೋಮೇಶ್ ಕುಮಾರ್ ಅವರಿಗೆ ಕರ್ತವ್ಯಕ್ಕೆ ಹಾಜರಾಗುವ ಬಗ್ಗೆ ವರದಿ ಸಲ್ಲಿಸಿದ್ದಾರೆ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಹುತಾತ್ಮ ಯೋಧ ಕರ್ನಲ್ ಸಂತೋಷ್ ಪತ್ನಿ ಸಂತೋಶಿ ಅವರನ್ನು ಕಂದಾಯ ಇಲಾಖೆಯ ಡೆಪ್ಯೂಟಿ ಕಲೆಕ್ಟರ್ ಆಗಿ ನೇಮಿಸುವಂತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ತೀರ್ಮಾನಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಅಗತ್ಯ ತರಬೇತಿಯನ್ನು ನೀಡುವಂತೆ ಕಾರ್ಯದರ್ಶಿ ಸ್ಮಿತಾ ಸಬರ್ವಾಲಾರಿಗೆ ಸೂಚನೆ ನೀಡಿದ್ದರು.

5 ಕೋಟಿ ರೂಪಾಯಿ ಪರಿಹಾರ ನೀಡಿದ್ದ ಸಿಎಂ ಕೆಸಿಆರ್
ಕಳೆದ ಜೂನ್.22ರಂದು ಸೂರ್ಯಪೇಟ್ ನಲ್ಲಿರುವ ಹುತಾತ್ಮ ಯೋಧ ಸಂತೋಷ್ ಬಾಬು ಅವರ ನಿವಾಸಕ್ಕೆ ಸ್ವತಃ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಭೇಟಿ ನೀಡಿದ್ದರು. ಅಂದು ಹುತಾತ್ಮ ಯೋಧರ ಹೆತ್ತವರು ಮತ್ತು ಸಂಬಂಧಿಕರಿಗೆ ಸಾಂತ್ವಾನ ಹೇಳಿದ್ದ ಸಿಎಂ 5 ಕೋಟಿ ರೂಪಾಯಿ ಪರಿಹಾರದ ಚೆಕ್ ನೀಡಿದ್ದರು. ಇದರ ಜೊತೆಗೆ ಹುತಾತ್ಮ ಯೋಧನ ಪತ್ನಿ ಸಂತೋಷಿ ಅವರಿಗೆ ಎ ಗ್ರೇಡ್ ನ ಸರ್ಕಾರಿ ಉದ್ಯೋಗ ಹಾಗೂ ಬಂಜಾರಾ ಹಿಲ್ ನಲ್ಲಿ 711 ಸ್ಕ್ವಾರ್ ಯಾರ್ಡ್ ಸೈಟ್ ಪತ್ರವನ್ನು ನೀಡಿದ್ದರು.
ಭಾರತ-ಚೀನಾ ಪೂರ್ವ ಗಡಿಯಲ್ಲಿರುವ ಗಾಲ್ವಾನ್ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಜೂನ್.15ರಂದು ನಡೆದ ಸಂಘರ್ಷದಲ್ಲಿ 39 ವರ್ಷದ ಕರ್ನಲ್ ಸಂತೋಷ್ ಬಾಬು ಕೂಡಾ ದೇಶಕ್ಕಾಗಿ ಪ್ರಾಣ ಕೊಟ್ಟಿದ್ದರು.












Click it and Unblock the Notifications