ಜಿಎಸ್ ಟಿ ವಿರುದ್ಧದ ಹೋರಾಟಕ್ಕೆ ಸಜ್ಜಾದ ತೆಲಂಗಾಣ ಮುಖ್ಯಮಂತ್ರಿ
ತೆಲಂಗಾಣ ಸಿಎಂ ವತಿಯಿಂದ ಜಿಎಸ್ ಟಿ ಕೆಲವು ಅಂಶಗಳಿಗೆ ಆಕ್ಷೇಪ. ಶೀಘ್ರದಲ್ಲೇ ಹೈದರಾಬಾದ್ ನಲ್ಲಿ ನಡೆಯಲಿರುವ ಜಿಎಸ್ ಟಿ ಸಭೆಯ ವೇಳೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ.
ಹೈದರಾಬಾದ್, ಆಗಸ್ಟ್ 18: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ವ್ಯವಸ್ಥೆಯ ವಿರುದ್ಧ ದನಿ ಎತ್ತಲು ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ನಿರ್ಧರಿಸಿದ್ದು, ಇದಕ್ಕೆ ಉಳಿದ ರಾಜ್ಯಗಳ ಮುಖ್ಯಮಂತ್ರಿಗಳ ಬೆಂಬಲವನ್ನು ಪಡೆಯಲು ಸಿದ್ಧರಾಗಿದ್ದಾರೆ.
ಅಂದಹಾಗೆ, ಚಂದ್ರಶೇಖರ್ ರಾವ್ ಅವರಿಗೆ ಇಡೀ ಜಿಎಸ್ ಟಿ ಮೇಲೆ ಅಸಮಾಧಾನವೇನಿಲ್ಲ. ಬದಲಿಗೆ, ಕೃಷಿ, ರಸ್ತೆ ಸಾರಿಗೆ, ಫ್ಲೈ ಓವರ್ ಗಳ ಸೇವೆ, ಕುಡಿಯುವ ನೀರಿನ ಮೇಲೆ ಜಿಎಸ್ ಟಿ ಹೇರಿರುವುದು ಬೇಸರ ತರಿಸಿದೆ. ಹಾಗಾಗಿ, ಇದರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ದನಿಯೆತ್ತಲು ತಜ್ಞರ ಸಲಹೆ ಪಡೆದು ಸಜ್ಜಾಗುತ್ತಿದ್ದಾರೆಂದು ಹೇಳಲಾಗಿದೆ.

ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ಜಿಎಸ್ ಟಿ ಮಂಡಳಿಯ ಪ್ರತಿಯೊಂದು ಸಭೆಯೂ ಬೇರೆ ಬೇರೆ ನಗರಗಳಲ್ಲಿ ನಡೆಯುತ್ತದೆ. ಹಾಗಾಗಿ, ಮಂಡಳಿಯ ಮುಂದಿನ ಸಭೆಯು ಸೆಪ್ಟಂಬರ್ 9ರಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು, ಜಿಎಸ್ ಟಿ ಬಗೆಗಿರುವ ತಮ್ಮ ಆಕ್ಷೇಪಣೆಗಳನ್ನು ಮಂಡಳಿಗೆ ಸಲ್ಲಿಸಲು ತೆಲಂಗಾಣ ಮುಖ್ಯಮಂತ್ರಿ ನಿರ್ಧರಿಸಿದ್ದಾರೆ.
ಹೈದರಾಬಾದ್ ನಲ್ಲಿ ನಡೆಯಲಿರುವ ಜಿಎಸ್ ಟಿ ಸಭೆಯ ನಂತರ, ಸಭೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ಪದಾಧಿಕಾರಿಗಳಿಗೂ ರಾತ್ರಿ ಭೋಜನ ಕೂಟ ಏರ್ಪಡಿಸಿ, ಅಲ್ಲಿ ಈ ವಿಚಾರದ ಬಗ್ಗೆ ಮಾತನಾಡಲು ಅವರು ನಿರ್ಧರಿಸಿದ್ದಾರೆ.












Click it and Unblock the Notifications