ಪ್ರೀತಿ ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲೇ ಸುಟ್ಟ ಭಗ್ನಪ್ರೇಮಿ
ಹೈದರಾಬಾದ್, ಡಿಸೆಂಬರ್ 22: ಮುತ್ತಿನ ನಗರಿ ಹೈದರಾಬಾದ್ -ಸಿಕಂದರಾಬಾದ್ ಪ್ರದೇಶ ಈ ಸುದ್ದಿ ಕೇಳಿ ಬೆಚ್ಚಿ ಬಿದ್ದಿದೆ. ನಡುರಸ್ತೆಯಲ್ಲೇ ಯುವತಿಯೊಬ್ಬಳಿಗೆ ಬೆಂಕಿ ಹಚ್ಚಿ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಸಿಕಂದರಾಬಾದ್ನ ಲಾಲ್ ಗುಡದಲ್ಲಿ ಗುರುವಾರ ಸಂಜೆ ಕಚೇರಿಯಿಂದ ಮನೆಗೆ ತೆರಳುತ್ತಿದ್ದ ಯುವತಿ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ. ಶೇ.70ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದ 23 ವರ್ಷ ವಯಸ್ಸಿನ ಸಂಧ್ಯಾರಾಣಿ ಶುಕ್ರವಾರದಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.ಸಂಧ್ಯಾರಾಣಿ ಜತೆ ಎರಡು ವರ್ಷಗಳಿಂದ ಒಂದೇ ಕಚೇರಿಯಲ್ಲಿದ್ದ ಆಕೆಯ ಭಗ್ನ ಪ್ರೇಮಿ ಕಾರ್ತಿಕ್ ಬಂಧನವಾಗಿದೆ.

ಪ್ರತಿದಿನ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಕಾರ್ತಿಕ್ ಹಿಂಬಾಲಿಸಿಕೊಂಡು ಬಂದು ಕಾಟ ಕೊಡುತ್ತಿದ್ದ. ಹಲವು ಬಾರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ, ಕಾರ್ತಿಕ್ ಮನವಿಯನ್ನು ಸಂಧ್ಯಾರಾಣಿ ತಿರಸ್ಕರಿಸಿದ್ದಳು. ಸ್ನೇಹಿತರಾಗಿ ಇರೋಣ ಎಂದಿದ್ದಳು. ಆದರೆ, ಕಾರ್ತಿಕ್ ಇದಕ್ಕೆ ಒಪ್ಪಲಿಲ್ಲ. ಇಬ್ಬರು ಮದುವೆಯೋಗೋಣ, ಈ ಕೆಲಸ ಬಿಟ್ಟು ಬಿಡು ಎಂದು ಕಾಡತೊಡಗಿದ್ದ. ಈ ಬಗ್ಗೆ ಇತ್ತೀಚೆಗೆ ಮೊಬೈಲ್ ನಲ್ಲಿ ಮಾತುಕತೆ ನಡೆಸಿದ್ದರು. ಜಗಳವಾಡಿಕೊಂಡಿದ್ದರು.

ಗುರುವಾರದಂದು ಸಂಜೆ ಸಂಧ್ಯಾಳನ್ನು ಹಿಂಬಾಲಿಸಿದ ಕಾರ್ತಿಕ್, ಏಕಾಏಕಿ ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಾಕುವ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,ವಿಡಿಯೋ ತುಣುಕು ವೈರಲ್ ಆಗುತ್ತಿದೆ. ಇಂಥ ದುಷ್ಕೃತ್ಯ ಎಸಗಿದವನಿಗೆ ಕಠಿಣ ಶಿಕ್ಷೆ ನೀಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಅವರು ಮೃತ ಸಂಧ್ಯಾರಾಣಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.












Click it and Unblock the Notifications