ಹೈದರಾಬಾದ್.. ಅಲ್ಲಲ್ಲ, ಭಾಗ್ಯನಗರ! ಬಿಜೆಪಿಗೆ ಅಧಿಕಾರಕ್ಕೆ ಬಂದ್ರೆ ಮಾತ್ರ!
Recommended Video

ಹೈದರಾಬಾದ್, ಡಿಸೆಂಬರ್ 03: "ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರನ್ನು ಭಾಗ್ಯನಗರ ಎಂದು ಬದಲಿಸುತ್ತೇವೆ" ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.
ಡಿಸೆಂಬರ್ ನಲ್ಲಿ ನಡೆಯಲಿರುವ ತೆಲಂಗಾಣ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ, ತೆಲಂಗಾಣ ರಾಜಧಾನಿ ಹೈದರಾಬಾದಿನಲ್ಲಿ ಪ್ರಚಾರ ಸಭೆಯೊಂದರಲ್ಲಿ ಪಾಲ್ಗೊಂದಿದ್ದರು. ಉತ್ತರ ಪ್ರದೇಶದಲ್ಲಿ ಅಲಹಾಬಾದ್ ಗೆ ಪ್ರಯಾಗರಾಜ್ ಮತ್ತು ಫೈಜಾಬಾದ್ ಗೆ ಅಯೋಧ್ಯೆ ಎಂದು ಮರುನಾಮಕರಣ ಮಾಡಿದ ನಂತರ ಯೋಗಿ ಅವರು ಹೈದರಾಬಾದ್ ಅನ್ನು ಮರುನಾಮಕರಣ ಮಾಡಲು ಮುಂದಾಗಿದ್ದಾರೆ!
ಹೈದರಾಬಾದಿನ ಗೋಶಮಹಲ್ ಕ್ಷೇತ್ರದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಯೋಗಿ, ಈ ಕ್ಷೇತ್ರದ ಬಿಜೆಪಿ ಶಾಸಕ ರಾಜಾ ಸಿಂಗ್ ಅವರ ಮಾತನ್ನೇ ಪುನರುಚ್ಚರಿಸಿದರು. ಅವರು ಸಹ ಕಳೆದ ತಿಂಗಳಷ್ಟೇ, ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಅನ್ನು 'ಭಾಗ್ಯನಗರ' ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದರು.

"ಹೈದರಾಬಾದ್ ನ ಹೆಸರು ಮೊದಲು ಭಾಗ್ಯನಗರ ಎಂದೇ ಇತ್ತು. 1590 ರಲ್ಲಿ ಖುಲಿ ಕುತುಬ್ ಶಾ ಎಂಬುವವನು ಭಾಗ್ಯನಗರದ ಹೆಸರನ್ನು ಹೈದರಾಬಾದ್ ಎಂದು ಬದಲಿಸಿದನು. ಈ ಸಮಯದಲ್ಲಿ ಎಷ್ಟೋ ಹಿಂದುಗಳ ಮೇಲೆ ದಾಳಿಯಾಯಿತು, ಎಷ್ಟೋ ದೇವಾಲಯಗಳು ಧ್ವಂಸವಾದವು. ಆದ್ದರಿಂದ ನಾವು ಆ ಹೆಸರನ್ನು ಮತ್ತೆ ಈ ನಗರಕ್ಕೆ ಇಡಲು ಬಯಸುತ್ತೇವೆ. ತೆಲಂಗಾಣದಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ. ನಂತರ ನಮ್ಮ ಮೊದಲ ಆದ್ಯತೆ ಈ ರಾಜ್ಯದ ಅಭಿವೃದ್ಧಿ ಮತ್ತು ಹೈದರಾಬಾದಿನ ಮರುನಾಮಕರಣ. ಅಷ್ಟೇ ಅಲ್ಲ, ಸಿಕಂದರಾಬಾದಿನ ಹೆಸರನ್ನೂ ಕರೀಂನಗರ ಎಂದು ಬದಲಿಸುತ್ತೇವೆ" ಎಂದು ಅವರು ಹೇಳಿದರು.
ತೆಲಂಗಾಣದ 119 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 7 ರಂದು ಮತದಾನ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications