ಹೈದರಾಬಾದ್ ನಲ್ಲಿ ಮರ್ಯಾದೆಗೇಡು ಕೃತ್ಯ, ಮಗಳ ಮೇಲೆಯೇ ಕತ್ತಿ ಬೀಸಿದ ತಂದೆ
ಹೈದರಾಬಾದ್, ಸೆಪ್ಟೆಂಬರ್ 19: ಕುಟುಂಬದ ಇಚ್ಛೆಗೆ ವಿರುದ್ಧವಾಗಿ ವಾರದ ಹಿಂದಷ್ಟೇ ಮದುವೆ ಆಗಿದ್ದ ವಿವಾಹಿತರ ಮೇಲೆ ಹುಡುಗಿಯ ತಂದೆ ಹೈದರಾಬಾದ್ ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಂತರ್ಜಾತಿ ಮದುವೆ ಆಗಿದ್ದವರಿಗೆ ಕರೆ ಮಾಡಿದ್ದ ಆರೋಪಿ, ಸಂಧಾನ ಮಾತುಕತೆಗಾಗಿ ಕರೆದಿದ್ದಾನೆ. ಯಾವುದೇ ಅನುಮಾನ ಪಡದೆ ಬಂದ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ.
ಮಾಧವಿ ಹಾಗೂ ಸಂದೀಪ್ ಪ್ರೀತಿಸಿ ಮದುವೆ ಆದವರು. ಆರೋಪಿ ಮನೋಹರಾಚಾರಿ ಮೊದಲಿಗೆ ಸಂದೀಪ್ ಮೇಲೆ ಹಲ್ಲೆ ನಡೆಸಿದ್ದಾನೆ. ಆ ನಂತರ ಮಗಳ ಮೇಲೆ ತೀವ್ರ ಹಲ್ಲೆ ನಡೆಸಿದ್ದಾನೆ. ಹೈದರಾಬಾದ್ ಎಸ್.ಆರ್.ನಗರದ ಜನ ನಿಬಿಡ ರಸ್ತೆಯಲ್ಲಿ ಹಲ್ಲೆ ನಡೆಯುವಾಗ ತಡೆಯಲು ಸಾರ್ವಜನಿಕರು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆದರೆ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
'ಪ್ರಣಯ್ಗೆ ನ್ಯಾಯ ದೊರಕಿಸಿ': ಫೇಸ್ಬುಕ್ನಲ್ಲಿ ಬೃಹತ್ ಅಭಿಯಾನ
ಮಾಧವಿ ರಕ್ತದ ಮಡುವಿನಲ್ಲಿ ಬಿದ್ದ ಮೇಲೆ ಮನೋಹರಾಚಾರಿ ಅಲ್ಲಿಂದ ಪರಾರಿ ಆಗಿದ್ದಾನೆ. ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಾಧವಿ ಸ್ಥಿತಿ ಬಹಳ ಗಂಭೀರವಾಗಿದೆ. ಕತ್ತು ಮತ್ತು ಕೈಗಳಿಗೆ ಆಕೆಗೆ ಗಂಭೀರ ಗಾಯಗಳಾಗಿವೆ. ಅಪಾರ ಪ್ರಮಾಣದಲ್ಲಿ ರಕ್ತ ಹೋಗಿದೆ ಎಂದು ವೈದ್ಯರು ಹೇಳಿದ್ದಾರೆ.
ಯುವತಿಗೆ ದೈಹಿಕ-ಮಾನಸಿಕ ದಿಗ್ಭ್ರಮೆ
ಆಕೆಗೆ ದೈಹಿಕ ಹಾಗೂ ಮಾನಸಿಕ ದಿಗ್ಭ್ರಮೆ ಆಗಿದೆ. ಸಾಕಷ್ಟು ರಕ್ತ ಹೋಗಿರುವ ಜತೆಗೆ ಸೋಂಕುಗಳಾಗಿವೆ. ಮುಂದಿನ ನಲವತ್ತೆಂಟು ಗಂಟೆ ಕಾಲ ಬಹಳ ಎಚ್ಚರಿಕೆ ವಹಿಸಬೇಕಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮಾಧವಿ ಹಾಗೂ ಸಂದೀಪ್ ಕಳೆದ ಐದು ವರ್ಷಗಳಿಂದ ಪರಸ್ಪರ ಪರಿಚಿತರು. ಹೈದರಾಬಾದ್ ನಲ್ಲಿ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದರು. ಅವರಿಬ್ಬರು ಮದುವೆ ಆಗಬೇಕು ಎಂದಿದ್ದರು. ಆದರೆ ಮಾಧವಿ ಕುಟುಂಬದವರು ತಾವು ಮೇಲ್ಜಾತಿಗೆ ಸೇರಿದವರು ಎಂದು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು.
ಉಡುಗೊರೆ ಕೊಡಿಸುವುದಾಗಿ ಕರೆದಿದ್ದ ತಂದೆ
ಕೊನೆಗೆ ಕಳೆದ ಬುಧವಾರದಂದು ಸ್ನೇಹಿತರ ಸಮ್ಮುಖದಲ್ಲಿ ಆರ್ಯ ಸಮಾಜದಲ್ಲಿ ಸಂದೀಪ್- ಮಾಧವಿ ಸರಳ ವಿವಾಹ ಆಗಿದ್ದರು. ಈ ಅಂತರ್ಜಾತಿ ವಿವಾಹವನ್ನು ಮಾಧವಿ ಕುಟುಂಬದವರು ಒಪ್ಪಿರಲಿಲ್ಲ. ಆ ನಂತರ ಸೆಪ್ಟೆಂಬರ್ 19ರ ಬುಧವಾರ ಮಾಧವಿ ತಂದೆ ಕರೆ ಮಾಡಿ, ಕೆಲವು ಉಡುಗೊರೆಗಳನ್ನು ಕೊಡಿಸಬೇಕು, ಬನ್ನಿ ಎಂದು ಕರೆದಾಗ ಒಪ್ಪಿಕೊಂಡು ಹೋಗಿದ್ದರು.
ಯುವತಿಯ ತಂದೆಗಾಗಿ ಹುಡುಕಾಟ
ಅವರಿಬ್ಬರು ಮದುವೆ ಆದ ಮೇಲೆ ಎಸ್.ಆರ್.ನಗರ್ ಪೊಲೀಸ್ ಠಾಣೆಗೆ ಬಂದಿದ್ದರು. ಆಗ ಎರಡೂ ಕುಟುಂಬಕ್ಕೆ ಕರೆ ಮಾಡಿ ಅಂತರ್ಜಾತಿ ವಿವಾಹದ ಬಗ್ಗೆ ಕೆಲವು ಸಲಹೆ ನೀಡಿ ಕಳುಹಿಸಲಾಗಿತ್ತು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ. ಸದ್ಯಕ್ಕೆ ಆರೋಪಿ ಮನೋಹರಾಚಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪ್ರಣಯ್ ನ ಮರ್ಯಾದೆಗೇಡು ಹತ್ಯೆ
ಕಳೆದ ವಾರ ತೆಲಂಗಾಣ ರಾಜ್ಯ ನಲಗೊಂಡ ಜಿಲ್ಲೆ ಮಿರ್ಯಾಲಗುಡದಲ್ಲಿ ದಲಿತ ಕ್ರಿಶ್ಚಿಯನ್ ಯುವಕ ಪ್ರಣಯ್ ನನ್ನು ಮರ್ಯಾದೆಗೇಡು ಹತ್ಯೆ ಮಾಡಲಾಗಿತ್ತು. ಆ ಯುವಕನ ಪತ್ನಿ-ಗರ್ಭಿಣಿಯಾಗಿದ್ದ ಅಮೃತಾ ತನ್ನ ತಂದೆಯೇ ಈ ಕೊಲೆ ಮಾಡಿಸಿರಬೇಕು ಎಂದು ಆರೋಪ ಮಾಡಿದ್ದರು. ಆ ಪ್ರಕರಣದಲ್ಲಿ ಮದುವೆಗೆ ವಿರೋಧಿಸಿದ್ದ ಯುವಕನ ಮಾವನೂ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.